ಸಣ್ಣ ಸೂಜಿಗೆ ಡಾಲಿ ಹೆದರೋದು ಯಾಕೆ? ಇವತ್ತಿಗೂ ಧನುಗೆ ನೋವು ಕೊಡುವ ಆ ಸಂಗತಿ ಯಾವ್ದು?
ಧನಂಜಯ ನಟನೆಯ 'ಜಮಾಲಿಗುಡ್ಡ' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸಿನಿಮಾ ಪ್ರಮೋಷನ್ ಭರದಿಂದ ಸಾಗ್ತಿದೆ. ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ಮಿಂಚಿದ್ದಾರೆ. ಇಬ್ಬರು ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ಅದ್ಧೂರಿಯಾಗಿ 'ಜಮಾಲಿಗುಡ್ಡ' ಸಿನಿಮಾ ಪ್ರೀ ರಿಲೀಸ್ ಈವೆಂಟ್ ಕೂಡ ನಡೆದಿತ್ತು. 'ಜಮಾಲಿಗುಡ್ಡ' ಎನ್ನುವ ಒಂದು ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಇದು. 90ರ ದಶಕದ ಹಿನ್ನೆಲೆಯಲ್ಲಿ ಕುಶಾಲ್ ಗೌಡ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿಕ್ಕಮಗಳೂರು, ಕುದುರೆಮುಖ, ಕನಕಪುರ, ಹೊನ್ನಾವರ, ಗೋಕರಣ ಮತ್ತು ಬೆಂಗಳೂರಿನ ಸುತ್ತಾಮುತ್ತಾ ಸಿನಿಮಾ ಚಿತ್ರೀಕರಣ ನಡೆದಿದೆ. ಪ್ರಕಾಶ್ ಬೆಳವಾಡಿ, ಭಾವನಾ ರಾಮಣ್ಣ, ಯಶ್ ಶೆಟ್ಟಿ, ಸತ್ಯಣ್ಣ ಚಿತ್ರದ ತಾರಾಗಣದಲ್ಲಿದ್ದಾರೆ.
'ಜಮಾಲಿಗುಡ್ಡ' ಸಿನಿಮಾ ಪ್ರಮೋಷನ್ ಭಾಗವಾಗಿ ಸಂದರ್ಶನಗಳಲ್ಲಿ ಡಾಲಿ ಧನಂಜಯ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದೊಂದು ವಿಚಾರಕ್ಕೆ ಇವತ್ತಿಗೂ ಪಶ್ಚಾತ್ತಾಪ ಪಡುತ್ತಿರುವುದಾಗಿ ಡಾಲಿ ಹೇಳಿದ್ದಾರೆ.

ಸೆಕ್ಯುರಿಟಿ ಗಾರ್ಡ್ಗೆ ಹೊಡೆದಿದ್ದೆ
ನಟ ಡಾಲಿ ಧನಂಜಯ್ಗೆ ಅದೊಂದು ವಿಚಾರಕ್ಕೆ ಇವತ್ತಿಗೂ ಪಶ್ಚಾತ್ತಾಪ ಇದೆಯಂತೆ. ಈ ಬಗ್ಗೆ TV9 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ಹಾಸ್ಟೆಲ್ನಲ್ಲಿ ಇದ್ದ ದಿನಗಳವು. ಅಲ್ಲಿ ಹೊಸದಾಗಿ ರೂಲ್ಸ್ ಮಾಡಿದ್ದರು. ಹೊಸ ಸೆಕ್ಯುರಿಟಿ ಬಂದಿದ್ದರು. ನಾವು ಇಷ್ಟ ಬಂದಾಗ ಹಾಸ್ಟೆಲ್ಗೆ ಹೋಗುತ್ತಿದ್ದೆವು. ಬರುತ್ತಿದ್ದೆವು. ಹೊಸ ಕಮಿಟಿ ಅವರು ರೂಲ್ಸ್ ಮಾಡಿದ್ದರು. ಅವರು ಗೇಟ್ ಹಾಕಿಬಿಟ್ಟಿದ್ದರು. ಅವರಿಗೆ ಒಂದೇ ಒಂದು ಏಟು ಹೊಡೆದುಬಿಟ್ಟಿದ್ದೆ. ಮರುದಿನ ಕ್ಷಮೆ ಕೇಳಲು ಅವರು ಸಿಗಲಿಲ್ಲ.ಅವರಿಗೆ ಒಂದು ಸ್ವಾರಿ ಕೇಳಲು ಸಾಧ್ಯವಾಗಲಿಲ್ಲ. ಕ್ಷಮಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.

ಇಂಜೆಕ್ಷನ್ ಅಂದರೆ ಡಾಲಿಗೆ ಭಯ
ಡಾಲಿ ಧನಂಜಯ ಆಕ್ಷನ್ ಸೀನ್ಗಳಲ್ಲಿ ಅಬ್ಬರಿಸುತ್ತಿರುತ್ತಾರೆ. ಎದುರಾಳಿಗಳಿಗೆ ನುಗ್ಗಿ ಹೊಡೆಯುತ್ತಾರೆ. ಲಾಂಗ್ ಹಿಡಿದು ಝಳಪಿಸುತ್ತಾರೆ. ಆದರೆ ನಿಜಜೀವನದಲ್ಲಿ ಇಂಜೆಕ್ಷನ್ ಅಂದರೆ ಭಯ ಅಂತೆ. ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ. ಇಂಜೆಕ್ಷನ್ ಅಂದರೆ ತುಂಬಾ ಭಯ. ಸಾಮಾನ್ಯವಾಗಿ ಚುಚ್ಚಿಸಿಕೊಳ್ಳಲ್ಲ. ಅನಿವಾರ್ಯ, ಬೇರೆ ಮಾರ್ಗ ಇಲ್ಲ ಎಂದಾಗ ತೆಗೆದುಕೊಳ್ಳುತ್ತೇನೆ. ಆಗ ಕೂಡ ಪಕ್ಕದಲ್ಲಿ ಯಾರಾದರೂ ಇರಬೇಕು. ಕಷ್ಟಪಟ್ಟು ಚುಚ್ಚಿಸಿಕೊಳ್ಳುತ್ತೇನೆ ಎಂದು ವಿವರಿಸಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಡಾಲಿ
ಕೊನೆಯದಾಗಿ ಧನು ನಟನೆಯ 'ಹೆಡ್ಬುಷ್' ಸಿನಿಮಾ ರಿಲೀಸ್ ಆಗಿತ್ತು. ತಮಿಳು ಚಿತ್ರವೊಂದರಲ್ಲಿ ನಟಿಸಿ ಬಂದಿದ್ದಾರೆ. 'ಹೊಯ್ಸಳ' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಉತ್ತರಕಾಂಡ ಸಿನಿಮಾ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿರೋದು ವಿಶೇಷ. ಇನ್ನು ತೆಲುಗಿನ 'ಪುಷ್ಪ'-2 ಚಿತ್ರೀಕರಣಕ್ಕೆ ಶೀಘ್ರದಲ್ಲೇ ಹೋಗಲಿದ್ದಾರೆ.

ನಿರ್ಮಾಪಕರಾಗಿ ಸಕ್ಸಸ್
ನಟನಾಗಿ ಮಾತ್ರವಲ್ಲದೇ ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಧನಂಜಯ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದ್ದಾರೆ. 'ಬಡವ ರಾಸ್ಕಲ್' ನಂತರ 'ಹೆಡ್ಬುಷ್' ಸಿನಿಮಾ ಮಾಡಿ ಗೆದ್ದರು. 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರ್ತಿದೆ. 'ಟಗರು ಪಲ್ಯ' ಎನ್ನುವ ಹೊಸಬರ ಮತ್ತೊಂದು ಚಿತ್ರ ಶುರುವಾಗಿದೆ. ತಮ್ಮ ಬ್ಯಾನರ್ನಲ್ಲಿ ಶೀಘ್ರದಲ್ಲೇ ಮತ್ತೊಂದು ಸಿನಿಮಾ ಆರಂಭಿಸಲು ಧನಂಜಯ ಸಿದ್ಧತೆ ನಡೆಸಿದ್ದಾರೆ.


Click it and Unblock the Notifications











