ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ತೂಗುದೀಪ ರೆಸ್ಟ್

ಬೃಂದಾವನ ಚಿತ್ರದ ಶೂಟಿಂಗ್ ವೇಳೆ ಫೈಟ್ ಮಾಡುವಾಗ ದರ್ಶನ್ ಅವರಿಗೆ ಗಾಯವಾಗಿದೆ. ಎರಡು ದಿನದ ಹಿಂದೆ ಆದ ಈ ಘಟನೆಯಲ್ಲಿ ಗಾಯಗೊಂಡರೂ ದರ್ಶನ್ ನೋವು ನುಂಗಿಗೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ, ಗುರುವಾರ ತಲೆ ನೋವು ಹೆಚ್ಚಾದಾಗ ವಿಧಿ ಇಲ್ಲದೆ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಚಿತ್ರ ತಂಡ ಹೇಳಿದೆ.
ದರ್ಶನ್ ಅವರನ್ನು ನ್ಯೂರೋಸರ್ಜರಿ ವಿಭಾಗದ ಐಸಿಯುನಲ್ಲಿ ಇರಿಸಲಾಗಿತ್ತು, ನಂತರ ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಎಂಆರ್ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ಹಳೆ ನೋವುಗಳು ಮರಕಳಿಸಿದ್ದು, ನಿರಂತರ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರಿಂದ ದರ್ಶನ್ ಗೆ ವಿಶ್ರಾಂತಿ ಇಲ್ಲದ್ದಂತಾಗಿದೆ. ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಮುಂದೆ ಬರುತ್ತಾರೆ ಎಂದು ದರ್ಶನ್ ಅವರ ಕುಟುಂಬ ವರ್ಗ ಹೇಳಿದೆ.
ಸಂಜೆ ವೇಳೆಗೆ ಡಿಸ್ ಚಾರ್ಜ್: ದರ್ಶನ್ ಅವರನ್ನು ಸದ್ಯಕ್ಕೆ ಅಬರ್ಸ್ವೇಷನ್ ನಲ್ಲಿರಿಸಿದ್ದೇವೆ. ಸ್ವಲ್ಪ ನೋವು ಇದೆ, ನೋವು ಕಡಿಮೆಯಾದ ತಕ್ಷಣ ಡಿಸ್ ಚಾರ್ಜ್ಮಾಡಬಹುದು. ಬಹುಶಃ ಸಂಜೆ ವೇಳೆಗೆ ಅವರು ಮನೆಗೆ ತೆರಳಬಹುದು. ಆದರೆ, ಅವರು ಕೆಲವಾರ ವಿಶ್ರಾಂತಿ ಅಗತ್ಯವಿದೆ ಎಂದು ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷ ಡಾ. ವೆಂಕಟ ರಮಣ ಅವರು ಹೇಳಿದ್ದಾರೆ.
ದರ್ಶನ್ ಆಪ್ತ ಗೆಳೆಯ ಸುದೀಪ್ ಅವರು ಈಗಾಗಲೇ ಒಂದು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಣೆ ನಡೆಸಿದ್ದಾರೆ. ದರ್ಶನ್ ಹುಷಾರಾಗಿದ್ದಾರೆ ಏನು ಆತಂಕಬೇಡ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ದರ್ಶನ್ ಅವರ ತಾಯಿ ಮೀನಾ, ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಕುಟುಂಬ ವರ್ಗ ಆಸ್ಪತ್ರೆಯಲ್ಲಿದ್ದಾರೆ.ಮೈಸೂರಿನ ಕಿರುಗಾವಲು ಪ್ರದೇಶದಲ್ಲಿ ಫೈಟ್ ಶೂಟಿಂಗ್ ನಡೆಯುವಾಗ ದರ್ಶನ್ ಗೆ ಗಾಯಗಳಾಗಿದ್ದು, ಈ ಮುಂಚೆ ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದರು.


Click it and Unblock the Notifications











