''ದರ್ಶನ್ ಮೇಲೆ ಚಪ್ಪಲಿ ಎಸೆತ, ಅಪ್ಪು ಎಂಬ ದೇವರಿಗೆ ಮಾಡಿದ ಅವಮಾನ''
ನಟ ದರ್ಶನ್ ಮೇಲೆ ಚಪ್ಪಲಿ ಎಸೆತದ ಘಟನೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ.
ಅಪ್ಪು ಅಭಿಮಾನಿಗಳು ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವರು ರಾಜಕೀಯ ವ್ಯಕ್ತಿಯೊಬ್ಬರ ಪ್ರೇರಣೆಯಿಂದ ಈ ಘಟನೆ ನಡೆದಿದೆ ಎಂಬ ಮಾತೂ ಸಹ ಕೇಳಿ ಬರುತ್ತಿವೆ. ಇನ್ನು ಕೆಲವರು ಇದು ಉದ್ದೇಶಿತ ಕೃತ್ಯವಿರಬಹುದೆಂದೂ ಸಹ ಗುಮಾನಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಒಂದು ಕೆಟ್ಟ ಘಟನೆಯಂತೂ ನಡೆದುಬಿಟ್ಟಿದೆ.
ದರ್ಶನ್ ಮೇಲೆ ಚಪ್ಪಲಿ ಬಿದ್ದಿರುವ ವಿಡಿಯೋ ಭಾರಿ ವೈರಲ್ ಆಗಿದೆ. ದರ್ಶನ್ ಅಭಿಮಾನಿಗಳು ಸೇರಿದಂತೆ ಕನ್ನಡ ಚಿತ್ರರಂಗದ ಹಲವು ನಟರು ಈ ಕೃತ್ಯವನ್ನು ಖಂಡಿಸಿದ್ದಾರೆ. ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ.

ದರ್ಶನ್ ಪರವಾಗಿ ಧರ್ಮಣ್ಣ ಪೋಸ್ಟ್
ದರ್ಶನ್ ಜೊತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಪೊಷಕ ನಟ ಧರ್ಮಣ್ಣ ಕುದೂರು, ದರ್ಶನ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಂದೊಮ್ಮೆ ಅಪ್ಪು ಅವರ ಅಭಿಮಾನಿಗಳಿಂದಲೇ ಈ ಘಟನೆ ಆಗಿದ್ದರೆ, ಅಪ್ಪು ಎಂಬ ದೇವರಿಗೆ ಮಾಡಿದ ಅವಮಾನ ಇದು ಎಂದು ಹೇಳಿದ್ದಾರೆ. ಧರ್ಮಣ್ಣ ಕಡೂರು ಅವರ ಪೋಸ್ಟ್ ಇಂತಿದೆ.

ಮನಸ್ಸಿಗೆ ಬಹಳ ಬೇಸರವಾಗಿದೆ: ಧರ್ಮಣ್ಣ ಕಡೂರು
''ಒಬ್ಬ ಕನ್ನಡಿಗನಾಗಿ, ಕನ್ನಡ ನಟರ ದೊಡ್ಡ ಅಭಿಮಾನಿಯಾಗಿ ಹಾಗೂ ನಾನು ಒಬ್ಬ ಕಲಾವಿದನಾಗಿ. ಆ ಒಂದು ವಿಡಿಯೋ ನೋಡಿದಾಗ ಮನಸ್ಸಿಗೆ ತುಂಬಾ ಬೇಜಾರಾಯ್ತು ಮತ್ತು ಒಬ್ಬ ಕನ್ನಡಿಗನಾಗಿ ತಲೆ ತಗ್ಗಿಸುವ ಸುದ್ದಿ ಇದು. ಇದು ಅಪ್ಪು ಅಭಿಮಾನಿಗಳು ಮಾಡಿರೋದು ಅಂತ ಸುದ್ದಿ ಓಡಾಡ್ತಿದೆ. ಆದ್ರೆ ಸತ್ಯ ಗೊತ್ತಿಲ್ಲದೆ ಏನೇ ಹೇಳಿದರೂ ತಪ್ಪಾಗುತ್ತೆ. ಇಲ್ಲಿ ನಾವು ಗಮನಿಸಿದರೆ ಒಂದಷ್ಟು ವಿಷಯಗಳು ಬಂದು ಹೋಗುತ್ತವೆ. ಮೊದಲನೇಯದಾಗಿ ಅಪ್ಪು ಸರ್ ಮತ್ತೆ ದರ್ಶನ್ ಸರ್ ಅಭಿಮಾನಿಗಳ ನಡುವೆ ಗಲಾಟೆ ತಂದಿಡಲು ಬೇರೆ ಯಾರೋ ಮಾಡಿರಬಹುದು. ಎರಡನೇ ಸಾಧ್ಯತೆ, ಇದು ರಾಜಕೀಯ ಕುತಂತ್ರವೂ ಇರಬಹುದು. ಮೂರನೇ ಸಾಧ್ಯತೆ, ದರ್ಶನ್ ಸರ್ ಯಶಸ್ಸನ್ನು ಸಹಿಸಿಕೊಳ್ಳದವರು ಮಾಡಿರಬಹುದು.

ಅಪ್ಪು ಎಂಬ ದೇವರಿಗೆ ಮಾಡಿದ ಅವಮಾನ: ಧರ್ಮಣ್ಣ ಕಡೂರು
ಇದಲ್ಲದೇ ನಾವು ಕೇಳಿದ ಹಾಗೆ ಅಪ್ಪು ಅವರ ಅಭಿಮಾನಿಗಳೇ ಮಾಡಿದ್ರೆ. ಇದು ಅಪ್ಪು ಎಂಬ ದೇವರಿಗೆ ಮಾಡಿದ ಅವಮಾನ. ಯಾಕೆಂದರೆ ಅವರ ಜೀವನದಲ್ಲಿಯೇ ಇಂತಹ ಒಂದು ಕಹಿ ಘಟನೆ ನೆಡೆದಿಲ್ಲ. ಮತ್ತೆ ದರ್ಶನ್ ಸರ್ ಎಂಬ ಹೆಮ್ಮೆಯ ಕನ್ನಡಿಗನಿಗೆ ಮತ್ತು ಕಲಾವಿದನಿಗೆ ಮಾಡಿದ ಅವಮಾನ. ನಿಮ್ಮ ಕನ್ನಡ ನಾಡಿಗೆ. ನಿಮ್ಮ ತಂದೆ ತಾಯಿಗೆ ಮಾಡಿದ ಅವಮಾನ. ಅಮೇಲೆ ಒಂದು ತಿಳ್ಕೋಳಿ ಇಂತಹ ಅಭಿಮಾನಿಗಳನ್ನು ಯಾವ ನಟರು ಇಷ್ಟ ಪಡಲ್ಲ ಮತ್ತು ಕ್ಷಮಿಸಲ್ಲ. ದರ್ಶನ್ ಸರ್ ನೀವು ಇಂತಹ ಕಷ್ಟದ ಮೆಟ್ಟಿಲುಗಳನ್ನೇ ಏರಿ, ಇವತ್ತು ಈ ಮಟ್ಟಿಗೆ ಬೆಳದಿರುವುದು. ನಿಮ್ಮ ಮೌನಕ್ಕೆ ಶರಣು. ಬಾಸ್ ನಾವಿದ್ದೇವೆ ನಿಮ್ಮೊಂದಿಗೆ ಎಂದಿದ್ದಾರೆ ಧರ್ಮಣ್ಣ ಕಡೂರು.

ಧರ್ಮಣ್ಣ ನಟನೆ ಹೊಗಳಿದ್ದ ದರ್ಶನ್
ಧರ್ಮಣ್ಣ ಕಡೂರು, 'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಿದ್ದಾರೆ. ಈಗ 'ಕ್ರಾಂತಿ' ಸಿನಿಮಾದಲ್ಲೂ ನಟಿಸಿದ್ದಾರೆ. ವೇದಿಕೆಯೊಂದರಲ್ಲಿ ನಟ ದರ್ಶನ್, ಧರ್ಮಣ್ಣ ಕಡೂರು ಅವರ ನಟನೆಯನ್ನು ಬಹಳವಾಗಿ ಹೊಗಳಿದ್ದರು. ಅವರು ದೊಡ್ಡ ಕಲಾವಿದ, ಅವರೊಟ್ಟಿಗೆ ನಾನು ಸಣ್ಣ ಕಲಾವಿದನಾಗಿ ಜೊತೆಗೆ ನಟಿಸಿದ್ದೇನೆ ಎಂದು ವಿನಯ ಪ್ರದರ್ಶಿಸಿದ್ದರು. ಧರ್ಮಣ್ಣ ಮೊದಲಿನಿಂದಲೂ ದರ್ಶನ್ ಅಭಿಮಾನಿಯಾಗಿದ್ದು, ದರ್ಶನ್ ಹಾಗೂ ಉಮಾಪತಿ ನಡುವೆ ವಿವಾದ ನಡೆದಾಗಲೂ ಇಂಥಹುದೇ ಒಂದು ಬ್ಯಾಲೆನ್ಸಿಂಗ್ ಪೋಸ್ಟ್ ಅನ್ನು ಹಾಕಿದ್ದರು.


Click it and Unblock the Notifications











