ಬಾಲಿವುಡ್ ಗೆ ಹಾಲುಗಲ್ಲದ ಚೆಲುವ ದಿಗಂತ್
ಹಾಲುಗಲ್ಲದ ಚೆಲುವ ದಿಗಂತ್ ಎಲ್ಲಿ ಹೋದ ಎಂದು ಹುಡುಕುವವರಿಗೆ ಒಳ್ಳೆ ಸುದ್ದಿ ಸಿಕ್ಕಿದೆ. ಪಂಚರಂಗಿ ಗೆಳೆತಿ ನಿಧಿ ಸುಬ್ಬಯ್ಯ ನಂತರ ದಿಗಂತ್ ಕೂಡಾ ಬಾಲಿವುಡ್ ಅಂಗಳದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ದಿಗಂತ್ ಬಾಲಿವುಡ್ ಗೆ ಹಾರುವ ಬಗ್ಗೆ ಹಲವು ದಿನಗಳಿಂದ ಸುದ್ದಿ ಗಿರಕಿ ಹೊಡೆಯುತ್ತಲೇ ಇತ್ತು.
ಆದರೆ, ಈಗ ಈ ಸುದ್ದಿಗೆ ಕಾಲ ಕೂಡಿ ಬಂದಿದೆ. ವಿಕ್ರಮ್ ಭಟ್ ನಿರ್ಮಾಣದ ಚಿತ್ರ 1920 ಲಂಡನ್ ನಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಉತ್ತಮ ಅಭಿನೇತ್ರಿ ಎಂದು ಹೆಸರು ಗಳಿಸಿರುವ ಪ್ರಾಚಿ ದೇಸಾಯಿ ಜೊತೆ ದಿಗಂತ್ ಕುಣಿಯಲಿದ್ದಾರೆ. ವಿಕ್ರಮ್ ಭಟ್ ಗೆಳೆಯ ಟೀನು ದೇಸಾಯಿ ಚಿತ್ರದ ನಿರ್ದೇಶಕರು.

ಎಂದಿನಂತೆ ಮಹೇಶ್ ಭಟ್, ವಿಕ್ರಮ್ ಭಟ್ ಸಮೂಹ ಸಂಸ್ಥೆ ನಿರ್ಮಾಣದ ಚಿತ್ರ ಕೂಡಾ ಹಾರರ್ ಕಥೆ ಉಳ್ಳದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಎಂದು ನಿರ್ದೇಶಕ ಟೀನು ಹೇಳಿದಾರೆ. ಮಾರ್ಚ್ ಅಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದ್ದು, ಲಂಡನ್, ಮುಂಬೈ ಮುಂತಾದೆಡೆ ಚಿತ್ರ ತಂಡ ಪ್ರವಾಸ ಮಾಡಲಿದೆಯಂತೆ.
ಇತ್ತ ಕನ್ನಡದಲ್ಲಿ ದಿಗಂತ್ ಅಭಿನಯದ 'ಬರ್ಫಿ' ಚಿತ್ರ ರೆಡಿಯಾಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ದಿಗಂತ್ ಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಹಾಗೂ ಪಂಜಾಬಿ ಸಂಸ್ಕೃತಿ ರೀಮಿಕ್ಸ್ ಪ್ರೇಮಕಥೆ ಇದಾಗಿದ್ದು, ನಿರ್ದೇಶಕ ಶೇಖರ್ ಅಲಿಯಾಸ್ ರಾಜಶೇಖರ್ ಅವರು ಸುದ್ದಿಗೋಷ್ಠಿ ನಡೆಸಿ ಚಿತ್ರ ಅದ್ಭುತವಾಗಿ ಬಂದಿದೆ ಎಂದರು.
ಬೆಂಗಳೂರು, ಅಮೃತ್ ಸರ, ವಾಘಾ ಗಡಿ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಬರ್ಫಿ ಚಿತ್ರ ತಂಡ ಸುತ್ತಾಡಿದೆ. ಚಿತ್ರದಲ್ಲಿ ಯಾಕೋ ಬೆಳದಿಂಗಳ ಬಾಲೆ, ಯಾರೇ ನೀನು ಚೆಲುವೆ ಹಾಗೂ ನೀ ವಸ್ತಾನಂಟೆ ನಾ ವದ್ದಂಟಾನಾ' ಛಾಯೆ ಕಾಣಿಸಿದರೆ ಬೈದು ಕೊಳ್ಳಬೇಡಿ. ಕಥೆ ಒರಿಜಿನಲ್ ನಿರೂಪಣೆ ಮಾತ್ರ ಆ ಚಿತ್ರಗಳ ಮಾದರಿ ಇರುತ್ತದೆ ಎಂದು ಶೇಖರ್ ಒಪ್ಪಿಕೊಂಡರು.
ಶೈಲೂ ಖ್ಯಾತಿ ಭಾಮಾ, ಲೈಫು ಇಷ್ಟೇನೆ ಖ್ಯಾತಿ ಸಂಯುಕ್ತಾ ಈ ಚಿತ್ರದಲ್ಲಿದ್ದಾರೆ. ಜಂಪಿಂಗ್ ಸ್ಟಾರ್ ಹರೀಶ್ ರಾಜ್ ಈ ಚಿತ್ರದಿಂದ 'ಸ್ಮಾರ್ಟ್ ಸ್ಟಾರ್' ಎನಿಸಲಿದ್ದಾರಂತೆ. ಗೋವಿಂದಾಯ ನಮಃ ಚಿತ್ರದ ಸಾಫ್ಟ್ ವೇರ್ ಟೆಕ್ಕಿ ರೋಲ್ ನಂತರ ಬರೀ ಆ ಥರಾ ಪಾತ್ರಗಳ ಆಫರ್ ಬರುತ್ತಿತ್ತು ಎಂದು ಹರೀಶ್ ದುಃಖ ತೋಡಿಕೊಂಡಿದ್ದಾರೆ.


Click it and Unblock the Notifications











