ಚೇತರಿಸಿಕೊಂಡಿರುವ ದಿಗಂತ್, ಸಹಾಯ ಮಾಡಿದವರಿಗೆ ಹೇಳಿದರು ಧನ್ಯವಾದ
ಕೆಲವು ದಿನಗಳ ಹಿಂದಷ್ಟೆ ಗೋವಾದಲ್ಲಿ ಅಪಾಯಕಾರಿ ಸಾಹಸವೊಂದನ್ನು ಮಾಡಲು ಹೋಗಿ ತೀವ್ರ ಗಾಯಕ್ಕೊಳಗಾಗಿದ್ದ ನಟ ದಿಗಂತ್ ಈಗ ಬಹುತೇಕ ಚೇತರಿಸಿಕೊಂಡಿದ್ದಾರೆ.
ಗಾಯಗೊಂಡ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ದಿಗಂತ್ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ತಮ್ಮ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ದಿಗಂತ್ ಫಿಟ್ ಆದಂತೆ ಕಾಣುತ್ತಿದ್ದಾರೆ. ಅವರ ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆಯಿಂದಾದ ಸಣ್ಣ ಗಾಯವೊಂದು ಕಾಣುತ್ತಿದೆಯಷ್ಟೆ. ಇನ್ನುಳಿದಂತೆ ಆರೋಗ್ಯವಾಗಿದ್ದಂತೆ ಕಾಣುತ್ತಿದ್ದಾರೆ ದಿಗಂತ್.
ವಿಡಿಯೋದಲ್ಲಿ ಮಾತನಾಡಿರುವ ದಿಗಂತ್, ''ಕೆಲವು ದಿನಗಳ ಹಿಂದೆ ನಡೆದ ಘಟನೆಯಿಂದ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾದೆ. ಈ ನಿಟ್ಟಿನಲ್ಲಿ ಹಲವರಿಗೆ ನಾನು ಧನ್ಯವಾದಗಳನ್ನು ಹೇಳಬೇಕಿದೆ. ಮುಖ್ಯವಾಗಿ ವೆಂಕಟ್ ನಾರಾಯಣ್ ಅವರೇ ನೀವು ಮಾಡಿದ ಸಹಾಯವನ್ನು ಜೀವನ ಪರ್ಯಂತ ನಾನು ಮರೆಯುವಂತಿಲ್ಲ. ನಿಮಗೆ ಬಹಳ ಧನ್ಯವಾದ. ಹಾಗೂ ಗೋವಾದ ಸಿಎಂ ಪ್ರಮೋದ್ ಸಾವಂತ್ ಅವರಿಗೂ ಧನ್ಯವಾದ. ನನ್ನನ್ನು ಏರ್ಲಿಫ್ಟ್ ಮಾಡಲು ಅವರು ಸಾಕಷ್ಟು ಸಹಾಯ ಮಾಡಿದರು'' ಎಂದಿದ್ದಾರೆ ದಿಗಂತ್.

ವೈದ್ಯ ವಿದ್ಯಾಧರ್ಗೆ ಧನ್ಯವಾದ ಹೇಳಿದ ದಿಗಂತ್
''ಗೋವಾದ ಮಣಿಪಾಲ್ ಆಸ್ಪತ್ರೆ ಹಾಗೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯವರಿಗೆ ನಾನು ಧನ್ಯವಾದ ಹೇಳಬೇಕು. ಅದರಲ್ಲೂ ಮುಖ್ಯವಾಗಿ ಡಾ ವಿದ್ಯಾಧರ್ ಅವರಿಗೆ ವಿಶೇಷ ಧನ್ಯವಾದ ಹೇಳಲೇಬೇಕು. ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ ಅಂತೆಯೇ ವಿದ್ಯಾಧರ್ ಅವರು ದೇವರಂತೆ ನನಗೆ ಸಹಾಯ ಮಾಡಿದ್ದಾರೆ. ದೊಡ್ಡ ಅಪಾಯವೇ ಆಗಬಹುದಾಗಿದ್ದ ಗಾಯವನ್ನು ಸಣ್ಣ ಶಸ್ತ್ರಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಮಾಡುವ ಮೂಲಕ ನನ್ನನ್ನು ಮತ್ತೆ ಮೊದಲಿನಂತೆ ಮಾಡಿದ್ದಾರೆ'' ಎಂದಿದ್ದಾರೆ ದಿಗಂತ್.

ಎಲ್ಲರಿಗೂ ಧನ್ಯವಾದ ಹೇಳಿದ ದಿಗಂತ್
''ನನ್ನನ್ನು ಇಷ್ಟಪಡುವವರು, ನನ್ನ ಅಭಿಮಾನಿಗಳು, ನನ್ನ ಕುಟುಂಬದವರು, ಚಿತ್ರರಂಗದ ನನ್ನ ಗೆಳೆಯರು, ನನ್ನೂರು ತೀರ್ಥಳಿಯ ಗೆಳೆಯರು. ನನ್ನ ಸಹಪಾಠಿಗಳು, ಜೈನ್ ಕಾಲೇಜಿನ ನನ್ನ ಸಹಪಾಠಿಗಳು ಎಲ್ಲರೂ ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ್ದೀರ. ನಿಮ್ಮ ಪ್ರಾರ್ಥನೆಗಳಿಂದಲೇ ನಾನು ಇಷ್ಟು ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗಿದೆ. ಇನ್ನೊಂದು ಎರಡು ವಾರದಲ್ಲಿ ಸಂಪೂರ್ಣ ಚೇರಿಸಿಕೊಳ್ಳಲಿದ್ದೇನೆ'' ಎಂದಿದ್ದಾರೆ ದಿಗಂತ್.

ಫಿಸಿಯೋ ಏಬ್ರಾಹಿಂಗೆ ಧನ್ಯವಾದ ಹೇಳಿದ ದಿಗಂತ್
''ಮಾಧ್ಯಮ ಸ್ನೇಹತರಿಗೂ ಧನ್ಯವಾದ. ಕೊನೆಯದಾಗಿ ನನ್ನ ಫಿಸಿಯೋಥೆರಫಿಸ್ಟ್ ಏಬ್ರಾಹಿಂಗೂ ಸಹ ಧನ್ಯವಾದ. ಅವರ ತರಬೇತಿಯಿಂದ ನಾನು ಮತ್ತೆ ಮೊದಲಿನಂತಾಗುತ್ತಿದ್ದೇನೆ. ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದೇನೆ'' ಎಂದಿದ್ದಾರೆ ದಿಗಂತ್. ಇನ್ಸ್ಟಾಗ್ರಾಂನಲ್ಲಿ ದಿಗಂತ್ ಈ ವಿಡಿಯೋ ಹಂಚಿಕೊಂಡಿದ್ದು ಹಲವರು ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿ ಅಪಘಾತಕ್ಕೆ ಒಳಗಾಗಿದ್ದ ದಿಗಂತ್
ಕೆಲವು ದಿನಗಳ ಹಿಂದೆ ಕುಟುಂಬದೊಟ್ಟಿಗೆ ಗೋವಾಕ್ಕೆ ಪ್ರವಾಸ ಹೋಗಿದ್ದ ದಿಗಂತ್ ಅಲ್ಲಿ ಹಿಮ್ಮುಖವಾಗಿ ಜಿಗಿಯುವ ಸಮ್ಮರ್ ಸಾಲ್ಟ್ ಮಾಡುವಾಗ ಆಯ ತಪ್ಪಿ ತಲೆಕೆಳಗಾಗಿ ಬಿದ್ದ ಕಾರಣ ಅವರ ಕತ್ತು ಹಾಗೂ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿತ್ತು. ಗೋವಾದಲ್ಲಿ ಒಂದು ದಿನ ಚಿಕಿತ್ಸೆ ನೀಡಿದ ಬಳಿಕ ಅವರನ್ನು ತುರ್ತಾಗಿ ಗೋವಾದಿಂದ ಏರ್ಲಿಫ್ಟ್ ಮಾಡಿ ಬೆಂಗಳೂರಿಗೆ ಕರೆತರಲಾಯಿತು. ಇಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ದಿಗಂತ್.


Click it and Unblock the Notifications











