ನಟ ದುನಿಯಾ ವಿಜಯ್ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲು
ನಟ ದುನಿಯಾ ವಿಜಯ್ ಯಾಕೋ ಏನೋ ಪದೇ ಪದೇ ಗಾಯಗೊಳ್ಳುತ್ತಿದ್ದಾರೆ. 'ಶಿವಾಜಿನಗರ' ಚಿತ್ರದಲ್ಲಿ ಅವರು ಗಾಯಗೊಳ್ಳುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೊಮ್ಮೆ ಮೈಗೆ ಬೆಂಕಿ ಹಚ್ಚಿಕೊಳ್ಳುವ ಸನ್ನಿವೇಶದಲ್ಲಿ ಗಾಯಗೊಂಡಿದ್ದರು.
ಈ ಬಾರಿ ಬೈಕ್ ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ. ವಿಜಿ ಅವರ ಹೊಟ್ಟೆ ಮತ್ತು ಎಡಗಾಲಿಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಅವರನ್ನು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ತು ದಿನಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ಸಾಹಸ ನಿರ್ದೇಶಕ ಕೆ.ಡಿ.ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ಗಂಗಾನಗರದಲ್ಲಿ ಬೈಕ್ ಸ್ಟಂಟ್ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಸುಮಾರು 25 ಬೈಕ್ ಗಳನ್ನು ಬಳಸಿಕೊಳ್ಳಲಾಗಿತ್ತು. ವಿಜಿ ಅವರು ಮಧ್ಯೆ ನಿಂತಿದ್ದರೆ ಅವರ ಸುತ್ತ ಉಳಿದ ಬೈಕ್ ಗಳು ಸುತ್ತುತ್ತಿರುವ ಸನ್ನಿವೇಶ.
ಈ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡು ವಿಜಿ ಮೇಲೆ ಬೈ ಹತ್ತಿದೆ. ಇದರಿಂದ ಅವರು ಗಾಯಗೊಂಡರು. ಕೂಡಲೆ ಅವರನ್ನು ಚಿಕಿತ್ಸೆಗಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮು ಅವರು ಭಾರಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 'ಶಿವಾಜಿನಗರ' ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಪಿ.ಎನ್.ಸತ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಚಿತ್ರದ ಕೊನೆಯ ಸಾಹಸ ಸನ್ನಿವೇಶ ಇದು.
ಈ ಹಿಂದೆ ರಾಮು ಅವರು ದುನಿಯಾ ವಿಜಯ್ ಜೊತೆ ಕಂಠೀರವ ಚಿತ್ರವನ್ನು ನಿರ್ಮಿಸಿದ್ದರು. ಆದರೆ ಆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಒಟ್ಟು 70 ದಿನಗಳ ಕಾಲ ಶಿವಾಜಿನಗರ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯಲಿದೆ.
ಜೆಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಂ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ ಚಿತ್ರಕ್ಕಿದೆ. ಪಾತ್ರವರ್ಗದಲ್ಲಿ ಪ್ರದೀಪ್ ರಾವತ್, ಅಭಿಮಾನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಶ್, ಸತ್ಯರಾಜ್, ಹುಲಿವಾನ್ ಗಂಗಾಧರಯ್ಯ ಮುಂತಾದವರಿದ್ದಾರೆ.
ಚಿತ್ರದ ಕಥೆ ಏನು ಎಂಬ ಬಗ್ಗೆ ರಾಮು ಸುಳಿವು ನೀಡದಿದ್ದರೂ 'ಶಿವಾಜಿನಗರ'ದ ಸುತ್ತ ಸುತ್ತುವ ಕಥೆ ಎಂದಷ್ಟೇ ಹೇಳಬೇಕು. ಚಿತ್ರದ ಬಹುತೇಕ ಚಿತ್ರೀಕರಣ ಶಿವಾಜಿನಗರದಲ್ಲೇ ನಡೆಯಲಿದೆ. ಉಳಿದಂತೆ ಚಿಕ್ಕಮಗಳೂರಿನಲ್ಲೂ ನಡೆಯಲಿದೆ. (ಏಜೆನ್ಸೀಸ್)


Click it and Unblock the Notifications











