ನಟ ದುನಿಯಾ ವಿಜಯ್ ಸುದ್ದಿಗೋಷ್ಠಿ ಹೈಲೈಟ್ಸ್
ನಟ ದುನಿಯಾ ವಿಜಯ್ ಗುರುವಾರ (ಜ.31) ಮಾಧ್ಯಮಗಳ ಮುಂದೆ ಹಾಜರಾಗಿ ತಮ್ಮ ವೈವಾಹಿಕ ಬದುಕು ಬವಣೆಗಳನ್ನು ಹೇಳಿಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ಕಾಲ ಸಾಕಷ್ಟು ನೋವುಂಡಿದ್ದೇನೆ. ಈ ವಿವಾದಗಳಿಂದ ಇನ್ನಷ್ಟು ನೋವಾಗಿದೆ. ಬೆಂಗಳೂರಿನ ಏಟ್ರಿಯಾ ಹೋಟೆಲ್ ನ ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಬನ್ನಿ ನೋಡೋಣ ವಿಜಿ ಸುದ್ದಿಗೋಷ್ಠಿಯ ಹೈಲೈಟ್ಸ್.
ಸುದ್ದಿಗೋಷ್ಠಿಗೆ ವಿಜಿ ಜೊತೆ ಅವರ ತಂದೆ ರುದ್ರಯ್ಯ ತಾಯಿ ನಾರಾಯಣಮ್ಮ ಹಾಗೂ ತಂಗಿ ಉಷಾ ಆಗಮಿಸಿದ್ದರು. ಇವರ ಜೊತೆಗೆ 'ರಜನಿಕಾಂತ' ಚಿತ್ರದ ನಿರ್ಮಾಪಕ ಕೆ ಮಂಜು ಹಾಗೂ ನಿರ್ದೇಶಕ ಪ್ರದೀಪ್ ರಾಜ್ ಅವರೂ ಆಗಮಿಸಿದ್ದರು.
ನಾನು ಸಾಕಷ್ಟು ಮಾನಸಿಕವಾಗಿ ನೊಂದಿದ್ದೇನೆ. ನನ್ನೆಲ್ಲಾ ನೋವುಗಳನ್ನು ಮಾನಸಿಕ ತಜ್ಞರ ಬಳಿ ತೋಡಿಕೊಂಡಿದ್ದೇನೆ. ಇಲ್ಲಿ ನಾನು ಹೆಚ್ಚಾಗಿ ಖಾಸಗಿ ಬದುಕಿಗಿಂತ ಸಿನಿಮಾ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ ಎಂದು ಅವರು ಮಾತಿಗಿಳಿದರು.
ಬಳಿಕ ಅವರು ರೆಕಾರ್ಡ್ ಮಾಡಿಕೊಂಡು ಬಂದಿದ್ದ ಸಿಡಿಯನ್ನು ಪ್ರದರ್ಶಿಸಿದರು. ಸಿಡಿಯಲ್ಲಿ ಅವರ ಪತ್ನಿ ನಾಗರತ್ನ ಅವರಿಗೆ ಅವರು ಹಲವು ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಶ್ನೆಗಳನ್ನು ಒಂದೊಂದಾಗಿ ನೋಡೋಣ ಬನ್ನಿ. ಅದಕ್ಕೂ ಮುನ್ನ ಒಂದು ಮಾತು...ಇದು ಸುದ್ದಿಗೋಷ್ಠಿಯೋ ಅಥವಾ ತಮ್ಮ ಮುಂದಿನ ಚಿತ್ರ 'ರಜನಿಕಾಂತ' ಪ್ರಚಾರ ತಂತ್ರವೋ ಎಂಬ ಸಣ್ಣ ಅನುಮಾನವೂ ಅಲ್ಲಿ ಅಸ್ಪಷ್ಟವಾಗಿ ಸುಳಿದಾಡಿತು.
ತಾವು ಆದಷ್ಟು ಖಾಸಗಿ ಬದುಕಿಗಿಂತ ಸಿನಿಮಾ ಬಗ್ಗೆಯೇ ಮಾತನಾಡಲು ಇಷ್ಟಪಡುತ್ತೇನೆ ಎಂದ ವಿಜಿ, ಬಳಿಕ ಸಿಡಿಯಲ್ಲಿ ತಮ್ಮ ಹಳೆಯ ಕಥೆಯನ್ನೇ ಹೇಳಿಕೊಂಡರು. ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲೂ ನಿರಾಕರಿಸಿ, ನಾನೀಗ ಏನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ತರಾತುರಿಯಲ್ಲಿ ಹೊರಟುಹೋದರು. ಕಡೆಗೂ ಪತ್ರಕರ್ತರನ್ನು ಕಾಡಿದ ಒಂದೇ ಒಂದು ಪ್ರಶ್ನೆ, ಹೀಗೂ ಉಂಟೇ?

ಇಷ್ಟಕ್ಕೂ ದುನಿಯಾ ವಿಜಿ ಏನು ಹೇಳುತ್ತಾರೆ?
'ರಜನಿಕಾಂತ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಅದ್ಭುತವಾಗಿ ಬಂದಿದೆ. ಎಲ್ಲರೂ ವೀಕ್ಷಿಸಿ ಎಂದ ಅವರು, ವೈಯಕ್ತಿಯ ಏಳುಬೀಳುಗಳಲ್ಲಿ ಸಾಕಷ್ಟು ಹೆಣಗಿದ್ದೇನೆ. ವಿವಾಹ ವಿಚ್ಛೇದನ ವಿವಾದಗಳು ನನ್ನನ್ನು ಹೈರಾಣಾಗಿಸಿದೆ. ವಿಚ್ಛೇದನಕ್ಕೆ ಕಾರಣವಾದ ಸಾಕ್ಷ್ಯಾಧಾರಗಳು ನನ್ನ ಬಳಿ ಸಾಕಷ್ಟಿವೆ. ಅವುಗಳನ್ನು ನಾನು ಮಾಧ್ಯಮಗಳ ಮುಂದಿಡುತ್ತೇನೆ.

ನನ್ನ ಮೇಲಿರುವು ಪ್ರೀತಿನಾ, ದ್ವೇಷಾನಾ?
ನನ್ನ ತಮ್ಮ ಕಿಡ್ನಾಪ್ ಆಗಿದ್ದಾನೆ ಎಂದು ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ಇದು ನನ್ನ ಮೇಲಿರುವ ಪ್ರೀತಿನಾ, ದ್ವೇಷಾನಾ? ಎಂದು ಅವರು ಪ್ರಶ್ನಿಸಿದರು. ವಿಜಿ ಮಾತಿನ ಉದ್ದಕ್ಕೂ ತಮ್ಮ ಪತ್ನಿಯನ್ನು ಶ್ರೀಮತಿ ನಾಗರತ್ನ ಅವರೇ ಎಂದು ಸಂಭೋದಿಸುತ್ತಿದ್ದದ್ದು ವಿಶೇಷವಾಗಿತ್ತು.

ನಾಗರತ್ನ ಅವರ ಬಳಿ ಇರುವ ಒಡವೆ ಬೆಲೆ ಎಷ್ಟು?
ನಾನು ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದಿದ್ದಾರೆ. ಆದರೆ ಅವರು ಹಾಕಿಕೊಂಡಿರುವ ಸೀರೆ, ಬಟ್ಟೆ ಬೆಲೆಯೆಷ್ಟು. ಅವರು ಹಾಕಿಕೊಂಡಿರುವ ಬ್ಯಾಗು ಇಂಡಿಯಾದಾ ಫಾರಿನ್ ದಾ? ನೀವು ಹಾಕಿಕೊಂಡಿರುವ ಒಡವೆ ಬೆಲೆ ಎಷ್ಟು? ಎಂದು ಕೇಳಿದರು.

ಹಳೆಬಟ್ಟೆ ತೊಟ್ಟು ಈ ಎಲ್ಲಾ ನಾಟಕ ಏಕೆ?
ಮಕ್ಕಳಿಗೆ ಹಳೆ ಬಟ್ಟೆ ತೊಡಿಸಿ ನಾಟಕ ಮಾಡಿದ್ದೇಕೆ? ನೀವು ಹಳೆ ಸೀರೆ ತೊಟ್ಟು ಸಿಂಪತಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದೇಕೆ? ಈ ನಾಟಕ ಏಕೆ? ಮಕ್ಕಳ ಹೆಸರಲ್ಲಿ ಎಷ್ಟು ಇನ್ಸುರೆನ್ಸ್ ಕಟ್ಟಿದ್ದೀನಿ? ಇವನ್ನೆಲ್ಲಾ ಏಕೆ ಮುಚ್ಚಿಟ್ಟಿರಿ. ನಾನು ಸತ್ತ ಬಳಿಕ ದುಡ್ಡು ಯಾರಿಗೆ ಸೇರಬೇಕು ಎಂಬ ಪತ್ರಗಳನ್ನು ನೋಡಿ. ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಂಡಿಲ್ಲವೇ ನಾಗರತ್ನ ಅವರೇ ಎಂದು ಪ್ರಶ್ನಿಸಿದರು ವಿಜಿ.

ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತಬೇಡಿ
ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಪ್ರಯತ್ನ ಮಾಡಬೇಡಿ. ಅವರನ್ನು ನನ್ನ ಜೊತೆ ಕಳುಹಿಸಿಕೊಡಿ. ನನ್ನಿಂದ ಕುಟುಂಬ ಸದಸ್ಯರಿಗೆ ತಪ್ಪಾಗಿದ್ದರೆ ಕ್ಷಮಿಸಿ. ಮಕ್ಕಳನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಹೆಣ್ಣುಮಕ್ಕಳಿಗೆ ನಾನು ಗೌರವ ಕೊಟ್ಟಿದ್ದೇನೆ.

ರಶ್ಮಿ ಎಂಬ ಹೆಣ್ಣು ಮಗಳ ಮಾನ ಕಳೆದದ್ದೇಕೆ?
ಆನಂದ್ (ನಾಗರತ್ನ ತಮ್ಮ ) ಪ್ರೇಯಸಿ ರಶ್ಮಿ ಎಂಬ ಹೆಣ್ಣಿನ ಮರ್ಯಾದೆ ಕಳೆದದ್ದೇಕೆ? ಆಕೆಗೆ ಹುಚ್ಚಿ ಎಂದು ಹಣೆಪಟ್ಟಿ ಕಟ್ಟಿದ್ದೇಕೆ? ಆಕೆಯ ಮಾನ ಕಳೆಯಲು ಪ್ರಯತ್ನಿಸಿದ್ದೇಕೆ?

ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ
ಒಂದು ತಿಂಗಳಾಯಿತು ನನ್ನನ್ನು ಭೇಟಿ ಮಾಡಿ ಎಂದು ಟಿವಿ ವಾಹಿನಿಗಳಲ್ಲಿ ಹೇಳಿಕೊಂಡಿದ್ದೀರಿ. ಆದರೆ ಒಂದು ವಾರದ ಹಿಂದೆಯಷ್ಟೇ ನಿಮಗೆ ಬೇಕಾದಷ್ಟು ಬಟ್ಟೆ, ಸೀರೆ ಕೊಡಿಸಿದ್ದೇನೆ. ಅಂಗಡಿಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆದ ವಿಡಿಯೋ ನನ್ನ ಬಳಿ ಇದೆ. ಕೊಡಿಸಿದ ದಿನಾಂಕದ ಬಿಲ್ ಇದೆ. ಹೀಗಿದ್ದು ಸುಳ್ಳು ಹೇಳಿಕೊಂಡಿದ್ದೇಕೆ?

ಬಾಮೈದ ರವಿಯ ಕ್ಯಾರೆಕ್ಟರ್ ಸರಿಯಿಲ್ಲ
ಬಾಮೈದ ರವಿಯ ಕ್ಯಾರೆಕ್ಟರ್ ಸರಿಯಿಲ್ಲ. ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾನೆ. ನಾಗರತ್ನ ಅವರೇ ನಿನ್ನ ತಮ್ಮನಿಂದ ನನ್ನ ಹೆಸರು ದುರುಪಯೋಗವಾಗುತ್ತಿದೆ. ಇದು ಸರಿಯಲ್ಲ. ನನ್ನ ಮಕ್ಕಳೇ ನನ್ನ ಪಾಲಿಗೆ ಭಗವದ್ಗೀತೆ, ಖುರಾನ್, ಬೈಬಲ್ ಎಂದರು.

ಸದಾ ಕಲಾ ಸೇವೆಗೆ ಸಿದ್ಧ ಎಂದ ವಿಜಿ
ಎಲ್ಲಾ ಎಲೆಕ್ಟ್ರಾನಿಕ್, ಪ್ರಿಂಟ್ ಮಾಧ್ಯಮಗಳ ಪಾದಕ್ಕೆ ಎರಗಿ ನಮಸ್ಕಾರ ಮಾಡಿ ಕೇಳುತ್ತಿದ್ದೇನೆ. ಶೋಷಣೆಗೆ ಹೆಣ್ಣು ಮಕ್ಕಳು ಮಾತ್ರ ಅಲ್ಲ ಗಂಡು ಮಕ್ಕಳು ಒಳಗಾಗುತ್ತಾರೆ ಎಂಬುದು ನಿಮ್ಮ ಗಮನಕ್ಕಿರಲಿ. ನನಗೂ ನ್ಯಾಯ ಕೊಡಿಸಿ. ನೀವು ಒಂದೇ ಮಗ್ಗುಲಿನಿಂದ ನೋಡದೆ. ನ್ಯಾಯ ಅನ್ಯಾಯ ಏನು ಎಂಬುದನ್ನು ಗಮನಿಸಿ, ನ್ಯಾಯಾಲಯವೂ ಗಮನಿಸಲಿ. ಎಲ್ಲವನ್ನೂ ಮೀರಿ ನಾನು ಸದಾ ಕಲಾಸೇವೆಗೆ ಸಿದ್ಧ. ಅದಕ್ಕಾಗಿ ನಿಮ್ಮ ಆಶೀರ್ವಾದ ಬೇಕು ಎಂದು ಹೇಳಿ ಸಿಡಿ ಆಫ್ ಮಾಡಿದರು.


Click it and Unblock the Notifications











