ಸಾವಿನಲ್ಲಿ ವೃತ್ತಿಪರತೆ ಮೆರೆದ ಶಾಸ್ತ್ರಿ, ಖ್ಯಾತ ಗಾಯಕನಿಗೆ ಜಗ್ಗೇಶ್ ಸಂತಾಪ
ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಹೆಸರಾಂತ ಗಾಯಕ ಎಲ್.ಎನ್ ಶಾಸ್ತ್ರಿ ನಿನ್ನೆ ನಿಧನರಾದರು. ಗಾಯಕನ ಅನಿರೀಕ್ಷಿತ ಸಾವಿಗೆ ಸಂಗೀತಲೋಕ ಸಂತಾಪ ಸೂಚಿಸಿದೆ.
ಎಲ್.ಎನ್ ಶಾಸ್ತ್ರಿ ಅವರ ಜೊತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ನಟ ಜಗ್ಗೇಶ್ ಅವರು ಕೂಡ ಶಾಸ್ತ್ರಿ ನಿಧನಕ್ಕೆ ಮರುಗಿದ್ದಾರೆ. ತಮ್ಮ ಟ್ವಿಟ್ಟರ್ ಮೂಲಕ ಅಂತರಂಗದ ಅಳಲನ್ನ ಹೊರಹಾಕಿದ್ದಾರೆ.

''ದುಃಖ ತಡೆಯಲಾಗಲಿಲ್ಲಾ ! ಯಾಕೆ ಹೀಗೆ ಮರೆ ಮಾಡಿತು ಹಾಡುವ ಕೋಗಿಲೆಯ ಕ್ರೂರವಿಧಿ ! ಹಾಡುತ್ತಲೆ ನಿರ್ಗಮಿಸಿದೆ ಗಾನಕೋಗಿಲೆ ! ನಮಗೆ ಇಷ್ಟು ಕಷ್ಟವಾದರೆ ನಿನ್ನ ಬಂಧುಗಳ ಪಾಡು ಹೇಗೆ'' - ಜಗ್ಗೇಶ್, ನಟ
ಎಲ್.ಎನ್.ಶಾಸ್ತ್ರಿ ಅವರು ಜಗ್ಗೇಶ್ ಅಭಿನಯದ ಹಲವು ಚಿತ್ರಗಳಲ್ಲಿ ತಮ್ಮ ಗಾನಸುಧೆಯಿಂದ ಮೋಡಿ ಮಾಡಿದ್ದರು. 'ಭಂಡ ನನ್ನ ಗಂಡ', 'ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ', 'ಓ ಮಲ್ಲಿಗೆ' ಅಂತಹ ಸಿನಿಮಾಗಳಲ್ಲಿ ಅದ್ಭುತ ಹಾಡುಗಳಿಗೆ ಧ್ವನಿಯಾಗಿದ್ದರು.
ಇನ್ನು ಸಂಗೀತ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದ ಎಲ್.ಎನ್.ಶಾಸ್ತ್ರಿ ಅವರಿಗೆ ಹಾಡುವುದು ಎಂದರೆ ಪ್ರೀತಿ. ಹಾಗಾಗಿಯೇ, ತಮ್ಮ ಕೊನೆಯ ಕ್ಷಣದಲ್ಲೂ ಕೂಡ ತಮ್ಮ ಕಂಠದಿಂದ ಸುಮಧುರ ಹಾಡೊಂದನ್ನ ಹಾಡಿ ವೃತ್ತಿ ಪರತೆ ಮೆರೆದಿದ್ದಾರೆ. ಈಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.


Click it and Unblock the Notifications











