30 ವರ್ಷದಿಂದ ಬಲ್ಲೆ ಆದರೂ ಅರ್ಥವಾಗದ ಮನುಷ್ಯ: ರವಿ ಬೆಳಗೆರೆ ನಿಧನಕ್ಕೆ ಜಗ್ಗೇಶ್ ಸಂತಾಪ
ಖ್ಯಾತ ಪತ್ರಕರ್ತ, ಕಾದಂಬರಿಕಾರ, ನಟ ರವಿ ಬೆಳಗೆರೆ ಇಂದು ಬೆಳಿಗ್ಗೆ ಹೃದಯಾಘಾತದಿಂದ ಅಸುನೀಗಿದ್ದಾರೆ. ರವಿ ಬೆಳಗೆರೆ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಚಿತ್ರರಂಗದ ಜೊತೆ ಉತ್ತಮ ನಂಟು ಹೊಂದಿದ್ದ ರವಿ ಬೆಳಗೆರೆ ಹಲವರಿಗೆ ಆಪ್ತರಾಗಿದ್ದರು.
ರವಿ ಬೆಳಗೆರೆ ಸಾವಿಗೆ ಹಲವು ಸಿನಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಸುದೀಪ್, ಜಗ್ಗೇಶ್, ಯೋಗರಾಜ್ ಭಟ್, ಕವಿರಾಜ್, ಸಿಂಪಲ್ ಸುನಿ ಸೇರಿದಂತೆ ಅನೇಕರು ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ನಟ ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.
'ಯಾರಿಗೂ ಅರ್ಥವಾಗದ ಮನುಷ್ಯ. ಒಮ್ಮೆ ಈತನ ಮಾತು ಸರಿ ಅನಿಸುತ್ತದೆ. ಕೆಲವೊಮ್ಮೆ ಬೇಕಿತ್ತಾ ಈ ಮಾತು ಅನಿಸುತ್ತದೆ. 30 ವರ್ಷದಿಂದ ಬಲ್ಲೆ ಆದರೂ ನನಗೆ ಅರ್ಥವಾಗದ ಮನುಷ್ಯ. ಸಾಮಾನ್ಯ ಅಸಮಾನ್ಯ ಆದದ್ದು ಮಾತ್ರ ಅನುಸರಣೀಯ. ರವಿ ರವರ ಖಾಸಬಾತ್ ಬರವಣಿಗೆ ನನ್ನ ಅಚ್ಚುಮೆಚ್ಚು. ನಿಮ್ಮ ಆತ್ಮಕ್ಕೆ ಶಾಂತಿ' ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಪ್ರಾರ್ಥನ ಶಾಲೆಯ ಬಳಿ ರವಿ ಬೆಳಗೆರೆ ಅಂತಿಮ ದರ್ಶನ ಪಡೆದಿದ್ದಾರೆ. ಆ ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಯೋಗರಾಜ್ ಭಟ್, 'ಇದು ರವಿ ಅವರ ಸಾವಲ್ಲ, ಹುಟ್ಟು' ಎಂದಿದ್ದಾರೆ.
ಫೊನಿನಲ್ಲಿ ನಾವಿಬ್ಬರು ಸದಾ ಮಾತನಾಡುತ್ತಿದ್ದೆವು. ಕೆಲವು ದಿನಗಳ ಹಿಂದಷ್ಟೆ ಸಹ ಪರಸ್ಪರ ಚರ್ಚೆ ಮಾಡಿದ್ದೆವು. ಅವರ ಆರೋಗ್ಯದ ಬಗ್ಗೆ ನಮಗೆ ಆತಂಕವಂತೂ ಇದ್ದೇ ಇತ್ತು, ಸಾವು ಬಂದು ಕರೆದಾಗ ಅದೇನಾಗ್ತದೊ ನೋಡೇ ಬಿಡೋಣ ಎಂದು ಹೊರಟು ಹೋಗಿಬಿಟ್ಟರೋ ಏನೊ? ಎಂದು ಯೋಗರಾಜ್ ಭಟ್ ಹೇಳಿದ್ದಾರೆ.


Click it and Unblock the Notifications











