ಈ ಬಾರಿ 'ತೋತಾಪುರಿ' : ಮತ್ತೆ ಒಂದಾದ 'ನೀರ್ ದೋಸೆ' ಜೋಡಿ
Recommended Video

ನಟ ಜಗ್ಗೇಶ್ ಅವರ 'ನೀರ್ ದೋಸೆ' ಸಿನಿಮಾ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು. ಜಗ್ಗೇಶ್ ಇದೇ ರೀತಿಯ ಮತ್ತೊಂದು ಸಿನಿಮಾ ಮಾಡಲಿ ಎಂಬುವುದು ಅಭಿಮಾನಿಗಳು ಕೋರಿಕೆ ಆಗಿತ್ತು. ಅದೇ ರೀತಿ ಜಗ್ಗೇಶ್ ಈಗ ತಮ್ಮ ಸ್ಟೈಲ್ ನಲ್ಲಿ ಬಂದಿದ್ದಾರೆ.
ನಿರ್ದೇಶಕ ವಿಜಯ ಪ್ರಸಾದ್ 'ನೀರ್ ದೋಸೆ' ಚಿತ್ರದ ಬಳಿಕ 'ಲೇಡಿಸ್ ಟೈಲರ್' ಸಿನಿಮಾ ಮಾಡುತ್ತಿದ್ದರು. ಆದರೆ, ಆ ಸಿನಿಮಾ ಶುರು ಆಗುವುದಕ್ಕೆ ಮೊದಲೇ ಅನೇಕ ವಿಘ್ನಗಳು ಎದುರಾಯಿತು. ನಾಯಕರ ಮೇಲೆ ನಾಯಕರು ಬದಲಾದರು. ಇಷ್ಟೆಲ್ಲ ಆದ ಮೇಲೆ ಸದ್ಯಕ್ಕೆ ಆ ಚಿತ್ರ ಕೈ ಬಿಟ್ಟಿರುವ ವಿಜಯ ಪ್ರಸಾದ್ ಮತ್ತೆ ಜಗ್ಗೇಶ್ ಜೊತೆಗೆ ತರ್ಲೆ ಮಾಡಲು ಬಂದಿದ್ದಾರೆ.
ನಟ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ ಪ್ರಸಾದ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾದ ಒಂದಷ್ಟು ವಿವರ ಮುಂದಿದೆ ಓದಿ...

ಸಿನಿಮಾದ ಹೆಸರು 'ತೋತಾಪುರಿ'
ಪ್ರೇಕ್ಷಕರಿಗೆ 'ನೀರ್ ದೋಸೆ' ತಿನ್ನಿಸಿದ್ದ ವಿಜಯ ಪ್ರಸಾದ್ ಈಗ 'ತೋತಾಪುರಿ' ರುಚಿ ತೋರಿಸಲು ಬಂದಿದ್ದಾರೆ. ಜಗ್ಗೇಶ್ ಹೊಸ ಸಿನಿಮಾಗೆ 'ತೋತಾಪುರಿ' ಎಂಬ ಹೆಸರು ಫಿಕ್ಸ್ ಆಗಿದೆ. ಜೊತೆಗೆ ಟ್ಯಾಗ್ ಲೈನ್ 'ತೊಟ್ ಕೀಳ್ ಬೇಕಷ್ಟೇ' ಎಂದಿದೆ. ಅಂದಹಾಗೆ, ಸಿನಿಮಾದ ಮುಹೂರ್ತ ಇಂದು ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ.

ಕೃಷಿಕನಾದ ಜಗ್ಗೇಶ್
ನಟ ಜಗ್ಗೇಶ್ ಈ ಸಿನಿಮಾದಲ್ಲಿ ಕೃಷಿಕನ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಅವರ ಪಾತ್ರದ ಲುಕ್ ರಿವೀಲ್ ಆಗಿದ್ದು, ಕೆಲ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ''ಇದು ಬಹಳ ಅದ್ಬುತ ಕಥೆ. ನೀರ್ ದೋಸೆ ಗಿಂತ ಎರಡು ಹೆಜ್ಜೆ ಮುಂದೆ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ವಿಜಯ ಪ್ರಸಾದ್ ಅಂದ್ರೆ ಡೈಲಾಗ್ಸ್
ವಿಜಯ್ ಪ್ರಸಾದ್ ಅವರ ಹಳೆಯ ಚಿತ್ರಗಳಂತೆ ಈ ಚಿತ್ರ ಕೂಡ ನೋಡುಗರಿಗೆ ಒಳ್ಳೆಯ ಮಜಾ ನೀಡಲಿದೆಯಂತೆ. ಈ ಬಾರಿ ವಿಭಿನ್ನ ಕಥೆ ಆಯ್ಕೆ ಮಾಡಿಕೊಂಡಿರುವ ವಿಜಯ ಪ್ರಸಾದ್ ಮತ್ತೆ ಕಾಮಿಡಿ, ಡ್ರಾಮಾವನ್ನು ಹೇಳಲಿದ್ದಾರೆ. ವಿಜಯ ಪ್ರಸಾದ್ ಸಿನಿಮಾ ಎಂದ ಮೇಲೆ ಡೈಲಾಗ್ಸ್ ಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಸೋ, ಈ ಸಿನಿಮಾದಲ್ಲಿಯೂ ಜನ ಅದನ್ನು ನಿರೀಕ್ಷೆ ಮಾಡುತ್ತಾರೆ.

ಕೆ ಎ ಸುರೇಶ್ ನಿರ್ಮಾಣ
'ತೋತಾಪುರಿ' ಸಿನಿಮಾವನ್ನು ಕೆ ಎ ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಅವರು ಶಿವರಾಜ್ ಕುಮಾರ್ ನಟನೆಯ 'ಶಿವಲಿಂಗ', 'ರಾಜು ಕನ್ನಡ ಮೀಡಿಯಂ', 'ಗೋವಿಂದಾಯ ನಮಃ', 'ಶ್ರಾವಣಿ ಸುಬ್ರಮಣ್ಯ' ಹಾಗೂ 'ಆರ್ ಎಕ್ಸ್ ಸೂರಿ' ಸಿನಿಮಾಗಳಿಗೆ ಬಂಡವಾಳ ಹಾಕಿದ್ದರು.

ಮುಖ್ಯ ಪಾತ್ರದಲ್ಲಿ ಸುಮನ್ ರಂಗನಾಥ್
ನಟಿ ಸುಮನ್ ರಂಗನಾಥ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ವಿಜಯ ಪ್ರಸಾದ್ ನಿರ್ದೇಶನದ 'ಸಿದ್ಲಿಂಗು' ಹಾಗೂ 'ನೀರ್ ದೋಸೆ' ಸಿನಿಮಾದಲ್ಲಿಯೂ ಸುಮನ್ ರಂಗನಾಥ್ ಕಾಣಿಸಿಕೊಂಡಿದ್ದರು. ಇತ್ತೀಚಿಗೆ 'ಡಬಲ್ ಇಂಜನ್' ಚಿತ್ರದ ಒಂದು ಪಾತ್ರದಲ್ಲಿ ಸುಮನ್ ರಂಗನಾಥ್ ಅಭಿನಯಿಸಿದ್ದರು.

ಅನೂಪ್ ಸೀಳೀನ್ ಸಂಗೀತ
ವಿಜಯ ಪ್ರಸಾದ್ ಅವರ ತಂಡದ ಕಾಯಂ ಸದಸ್ಯ ಅನೂಪ್ ಸೀಳೀನ್ ಈ ಚಿತ್ರಕ್ಕೆ ಸಹ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಶ್ರೀರಂಗಪಟ್ಟಣ ಹಾಗೂ ಮೈಸೂರು ಭಾಗಗಳಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಮೊದಲ ಹಂತದ ಚಿತ್ರೀಕರಣ 15 ದಿನಗಳ ಕಾಲ ನಡೆಯಲಿದೆಯಂತೆ.


Click it and Unblock the Notifications











