ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು- ಜಗ್ಗೇಶ್ ಬೇಸರ
ತೆಲುಗಿನಲ್ಲಿ ಕನ್ನಡದ ರಾಬರ್ಟ್ ಸಿನಿಮಾ ರಿಲೀಸ್ ಗೆ ಅವಕಾಶ ನೀಡುತ್ತಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
Recommended Video
ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ತೆರೆಗೆ ಬರುತ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಮಾರ್ಚ್ 11ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದ ರಾಬರ್ಟ್ ತಂಡಕ್ಕೆ ತೆಲುಗು ಸಿನಿಮಾರಂಗ ಬ್ರೇಕ್ ಹಾಕಿದೆ. ತೆಲುಗಿನಲ್ಲಿ ಬೇರೆ ಬೇರೆ ಸಿನಿಮಾಗಳು ರಿಲೀಸ್ ಆಗುತ್ತಿರುವ ಕಾರಣ ಕನ್ನಡದ ರಾಬರ್ಟ್ ಸಿನಿಮಾ ರಿಲೀಸ್ ಗೆ ಅವಕಾಶ ನೀಡುವುದಿಲ್ಲ ಎನ್ನುವುದು ರಾಬರ್ಟ್ ತಂಡದ ಆರೋಪ.
ಫಿಲ್ಮ್ ಚೇಂಬರ್ ಗೆ ದೂರು ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಟ ದರ್ಶನ್, 'ನಮ್ಮಲ್ಲಿರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು' ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್, ಅಂದು ನಾನಾಡಿದ ಮಾತಿಗೆ ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು' ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ದರ್ಶನ್ ಹೇಳಿದ್ದೇನು?
'ನಮ್ಮಲ್ಲಿ ಇರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು. ತಮಿಳು ಅಥವಾ ತೆಲುಗಿನವರಿಗೆ ಇರುವ ಭಾಷಾ ಅಭಿಮಾನ ನಮ್ಮರಿಗೆ ಕಿಂಚಿತ್ತು ಇಲ್ಲ. ಇದನ್ನ ನಾನು ಓಪನ್ ಆಗಿ ಹೇಳುತ್ತೇನೆ. ತಮಿಳು, ತೆಲುಗಿನವರು ಬಂದ್ರೆ ಅವರ ಜೊತೆ ತಮಿಳು, ತೆಲುಗಿನಲ್ಲೇ ಮಾತನಾಡುತ್ತಾರೆ. ಅವರು ಕನ್ನಡದಲ್ಲಿ ಮಾತನಾಡುತ್ತಾರಾ?' ಎಂದು ಹೇಳಿದ್ದಾರೆ.

ಜಗ್ಗೇಶ್ ಪ್ರತಿಕ್ರಿಯೆ
ದರ್ಶನ್ ಮಾತನಾಡುತ್ತಿರುವ ವಿಡಿಯೋ ಶೇರ್ ಮಾಡಿ ಜಗ್ಗೇಶ್, 'ಅಂದು ನಾನಾಡಿದ ಮಾತು ಕನ್ನಡಿಗರೆ ಸ್ವಾಭಿಮಾನಿಯಾಗಿ. ಕನ್ನಡಕ್ಕೆ ಮೊದಲು ಕೈಯತ್ತಿ ನಿಮ್ಮ ಕೈ ಕಲ್ಪವೃಕ್ಷವಾಗುತ್ತೆ ಎಂದು. ನನ್ನ ಭಾವನೆ ಅರ್ಥವಾಗದೆ ಸಮಯ ಸಾಧಕರು ಜಾಗೃತರಾಗಿ ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು. ಕೆಲವರು ನಂಬಿದರು. ನನ್ನಪ್ರಾಮಾಣಿಕ ನುಡಿಗಳ ಸತ್ಯ ನಿಧಾನವಾಗಿ ಅರಿವಾಗುತ್ತೆ ದೌರ್ಭಾಗ್ಯ' ಎಂದು ಹೇಳಿದ್ದಾರೆ.

ಜಗ್ಗೇಶ್ ಅಂದು ಹೇಳಿದ್ದೇನು?
ಪ್ಯಾನ್ ಇಂಡಿಯಾ ಪರಿಕಲ್ಪನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟ 'ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ' ಎಂದು ಖಂಡಿಸಿದರು.
'ಯಾವುದು ಅದು ಪ್ಯಾನ್ ಇಂಡಿಯಾ...? ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡಲ್ಲ. ಪ್ಯಾನ್ ಇಂಡಿಯಾದಿಂದ ನಮ್ಮ ಕನ್ನಡಿಗರಿಗೆ ಕೆಲಸ ಇಲ್ಲ. ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ' ಎಂದು ನಟ ಜಗ್ಗೇಶ್ ಕಿಡಿ ಕಾರಿದರು.

ಡಬ್ಬಿಂಗ್ ಬಗ್ಗೆ ಗುಡುಗಿದ್ದ ಜಗ್ಗೇಶ್
ಡಬ್ಬಿಂಗ್ಗೆ ಅವಕಾಶ ಕೊಟ್ಟಮೇಲೆ ಟಿವಿ ವಾಹಿನಿಗಳಲ್ಲಿ ಬರಿ ಪರಭಾಷೆ ಚಿತ್ರಗಳೇ ಪ್ರಸಾರವಾಗ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ 'ನಮ್ಮ ಮಕ್ಕಳು ಡಿಸ್ಕವರಿ ಹಾಗೂ ಸೈನ್ಸ್ ಚಾನಲ್ ನೋಡಬಾರದೇ ಎಂತ ಹೇಳಿ ಡಬ್ಬಿಂಗ್ ತಂದ ಮಹನೀಯರ ಪಾದಕ್ಕೆ ನನ್ನ ನಮಸ್ಕಾರ. ಈಗ ಯಾವ ಚಾನಲ್ ನೋಡಿದ್ರೂ ತಮಿಳು, ತೆಲುಗು ಸಿನಿಮಾ ತುಂಬುತ್ತಿದ್ದೀರಾ, ನೀವು ಅಪ್ಪನಿಗೆ ಹುಟ್ಟಿದವರು, ಕನ್ನಡದವರಿಗೆ ಹುಟ್ಟಿದವರಾ, ನೀವೆಲ್ಲ ಕನ್ನಡ ದ್ರೋಹಿಗಳು, ನೀವೆಲ್ಲ ಹುಳ ಬಿದ್ದು ಸಾಯ್ತೀರಾ. ನಿಮ್ಮ ತೆವಲುಗಳಿಗಾಗಿ ಮುಂದಿನ ಪೀಳಿಗೆ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದೀರಾ' ಎಂದಿದ್ದರು. ಜಗ್ಗೇಶ್ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಮತ್ತು ನೆಟ್ಟಿಗರ ನಡುವೆ ಟ್ವೀಟ್ ವಾರ್ ಏರ್ಪಟ್ಟಿತ್ತು.


Click it and Unblock the Notifications











