ಒಂದ್ಕಾಲದಲ್ಲಿ ಜಗ್ಗೇಶ್ ಅವರನ್ನು ಸ್ವಂತ ತಮ್ಮನಂತೆ ಕಂಡಿದ್ದ ಶಿವಣ್ಣ
ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅಂದ್ರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬಿಜಿಯಾಗಿರುವ ನಟ ಜಗ್ಗೇಶ್ ಅವರು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಇಷ್ಟೂದ್ದಕ್ಕೆ ಬರೆದು ಹಾಕುತ್ತಿರುತ್ತಾರೆ.
ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಮೇಲೆ ಬೆಟ್ಟದಷ್ಟು ಅಭಿಮಾನ ಇಟ್ಟುಕೊಂಡಿರುವ ಜಗ್ಗಣ್ಣ, ಅವರ ಮಕ್ಕಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಮೇಲೂ ಅಷ್ಟೇ ಅಭಿಮಾನ ಇಟ್ಟುಕೊಂಡಿದ್ದಾರೆ.[ವಿಷ ಕುಡಿಯುತ್ತೇನೆ ಅಂತ ಜಗ್ಗೇಶ್ ಗೆ ಪತ್ರ ಬರೆದಿದ್ದ ಪತ್ನಿ ಪರಿಮಳಾ.!]
ಇದೀಗ ವರನಟ ಡಾ. ರಾಜ್ ಕುಮಾರ್ ಅವರ ಹಿರಿಯ ಮಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಜೊತೆ, ಜಗ್ಗೇಶ್ ಅವರ ಮಗ ಗುರುರಾಜ್ ಅವರು ನಟಿಸುತ್ತಿದ್ದಾರೆ.
ಬಹು ತಾರಾಗಣದಲ್ಲಿ ಮೂಡಿಬರುತ್ತಿರುವ 'ಲೀಡರ್' ಚಿತ್ರದಲ್ಲಿ ನಟ ಗುರುರಾಜ್ ಜಗ್ಗೇಶ್ ಅವರು ಶಿವಣ್ಣ ಅವರ ಜೊತೆ ಕಾಣಿಸಿಕೊಂಡಿದ್ದು, ಗುರುರಾಜ್ ಸೇರಿದಂತೆ ಜಗ್ಗೇಶ್ ಅವರಿಗೂ ಫುಲ್ ಖುಷಿಯಾಗಿದೆ.
ಇದೇ ಖುಷಿಯಲ್ಲಿ ಜಗ್ಗೇಶ್ ಅವರು ತಮ್ಮ ಚಿತ್ರರಂಗ ಕ್ಷೇತ್ರದ ಆರಂಭದ ದಿನಗಳು ಹಾಗೂ ಶಿವಣ್ಣ ಅವರ ಬಗ್ಗೆ ಮುತ್ತಿನಂತಹ ಮಾತುಗಳನ್ನಾಡಿದ್ದಾರೆ, ನೋಡಲು ಮುಂದೆ ಓದಿ...

ಜಗ್ಗೇಶ್ ಮತ್ತು ಶಿವರಾಜ್ ಕುಮಾರ್ ಅವರ ಮೊದಲ ಭೇಟಿ
"ಶಿವರಾಜ್ ಕುಮಾರ್ ನನ್ನ ನೆಚ್ಚಿನ ರಾಜಣ್ಣನ ಹಿರಿಯ ಮಗ. ಈತ ನನಗಿಂತ 10 ತಿಂಗಳು ಹಿರಿಯ, ಈತನನ್ನು ಮೊಟ್ಟ ಮೊದಲು ಭೇಟಿಯಾಗಿದ್ದು 1982 ರಲ್ಲಿ ಹೈಲ್ಯಾಂಡ್ ಹೋಟೆಲ್ ರೂಮ್ ನಂ. 18ರಲ್ಲಿ. ಅದು ಅವರ ತಂದೆಯ ಇಷ್ಟವಾದ ಹಾಗು ದೀರ್ಘಾವಧಿ ಇದ್ದ ಕೊಠಡಿ".-ಜಗ್ಗೇಶ್[ಜಗ್ಗೇಶ್'ರ ನಡೆ ಅವರ ಬಂಧುಗಳಿಗೆ ಹೇಸಿಗೆ ಉಂಟುಮಾಡಿತ್ತಂತೆ]

ಹಿಪ್ಪಿರಾಮರಿಂದ ಶಿವಣ್ಣನ ಪರಿಚಯ
"ಶಿವಣ್ಣನನ್ನು ಮೊದಲು ಪರಿಚಯಿಸಿದ್ದು, ಹಿಪ್ಪಿರಾಮ ಎಂಬ ಪ್ರೊಡಕ್ಷನ್ ಬಾಯ್. ಮೊದಲ ಭೇಟಿಯ ಆ ದಿನ ರೂಮ್ ನಲ್ಲಿ, ಶಿವರಾಜ್ ಸಿಗರೇಟ್ ಸೇದುತ್ತಿದ್ದರು. ಆವಾಗ ಮಧ್ಯೆ ಬಂದ ಚಿ.ಉದಯಶಂಕರ್ ಅವರನ್ನು ಕಂಡು, ತಕ್ಷಣ ಸಿಗರೇಟ್ ಎಸೆದು, ರೂಮ್ ಗೆ ಸೆಂಟ್ ಹೊಡೆದು ಏನು ಆಗದಂತೆ ನಟಿಸಿದರು. ಚಿ.ಉದಯಶಂಕರ್ ಕೂಡ ಕಂಡೂ ಕಾಣದಂತೆ ಅಲ್ಲಿಂದ ನಿರ್ಗಮಿಸಿದರು".-ಜಗ್ಗೇಶ್[ತಮ್ಮ 'ರಿಯಲ್ ಲವ್ ಸ್ಟೋರಿ' ಬಯಲು ಮಾಡಿದ ನಟ ಜಗ್ಗೇಶ್!]

ಶಿವರಾಜ್ ಕುಮಾರ್ ಜೊತೆ ಎರಡನೇ ಭೇಟಿ
"ಇದಾದ ನಂತರ ಮತ್ತೆ ನಾನು ಶಿವಣ್ಣನನ್ನ ಭೇಟಿಯಾಗಿದ್ದು 1988ರಲ್ಲಿ. ನನ್ನನ್ನು ಎರಡನೇ ಬಾರಿ ಕರೆದುಕೊಂಡು ಹೋಗಿದ್ದು ನಟ ಕಮ್ ಸಹ ನಿರ್ದೇಶಕ ಹೊನ್ನವಳ್ಳಿ ಕೃಷ್ಣ. ಅವರು ನನ್ನನ್ನು ಶಿವರಾಜ್ ಕುಮಾರ್ ಅವರ ಮನೆಗೆ ಕರೆದುಕೊಂಡು ಹೋಗಿದ್ದಾಗಲೇ, ಶಿವರಾಜ್ ಕುಮಾರ್ ಅವರ ವಿಶಾಲ ಹೃದಯ ನನಗೆ ಪರಿಚಯವಾಗಿದ್ದು.".-ಜಗ್ಗೇಶ್

ಸ್ವಂತ ತಮ್ಮನಂತೆ ಭಾವಿಸಿದ ಶಿವಣ್ಣ
'ರಣಧೀರ' ಚಿತ್ರದಲ್ಲಿ ನಟಿಸಿದ ಮೂವರು 'ರಣರಂಗ' ಚಿತ್ರಕ್ಕೆ ಬುಕ್ ಆಗಿ ನನ್ನ ಕೈ ಬಿಟ್ಟರು. ಆವಾಗ ಶಿವಣ್ಣ ಅವರು ರಾಜ್ ಕುಮಾರ್ ಮಗನಾದರು, ನನ್ನಂತಹ ಹೊಸಬನನ್ನು ಸ್ವಂತ ತಮ್ಮನಂತೆ ಭಾವಿಸಿ, ಹಿಂದು-ಮುಂದು ನೋಡದೆ ತಮ್ಮ ಮಾಮನಿಗೆ ದೂರವಾಣಿ ಕರೆ ಮಾಡಿ, "ಗೋವಿಂದ್ ಮಾಮ ಜಗ್ಗೇಶ್ ನನ್ನ ಸ್ನೇಹಿತ, 'ರಣರಂಗ' ಚಿತ್ರದ 4 ಜನ ಖಳನಾಯಕರಲ್ಲಿ ಜಗ್ಗೇಶ್ ಗೂ ಒಂದು ಪಾತ್ರಕ್ಕೆ ಹಾಕಿ" ಎಂದರು. ಶಿವಣ್ಣನ ಮಾತಿಗೆ ಎದುರಾಡದೆ ನನ್ನನ್ನು ಖಳನಟನಾಗಿ ನಿಗದಿಪಡಿಸಿತು ಚಿತ್ರತಂಡ'.-ಜಗ್ಗೇಶ್

ಬದುಕಿನ ಭಾಗ್ಯದ ಬಾಗಿಲು ತೆರೆದ ಕ್ಷಣ
"ಅಲ್ಲಿಂದ ನನ್ನ ಬದುಕಿನ ಭಾಗ್ಯದ ಬಾಗಿಲು ತೆರೆದುಕೊಂಡಿದ್ದು ಹಾಗೂ ರಾಜಣ್ಣ ನನಗೆ ಹತ್ತಿರವಾದದ್ದು. ಸಾಮಾನ್ಯವಾಗಿ ಸೂಪರ್ ಸ್ಟಾರ್ ಮಕ್ಕಳು ಹಾಗು ಸ್ವತಃ ಅವರೇ ದೊಡ್ಡ ಸ್ಟಾರ್ ಆಗಿದ್ದರೆ, ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಂತದ್ರಲ್ಲಿ ಶಿವಣ್ಣ ನನಗೆ ವಿಭಿನ್ನವಾಗಿ ಕಂಡರು. ಕಾರಣ ಯಥಾ ತಂದೆ ತಥಾ ಮಗ".-ಜಗ್ಗೇಶ್

ಶಿವಣ್ಣನ ಅಂತರ್ಯದ ಶ್ರೀಮಂತಿಕೆ ಅಗಾಧ
"ಯಾಕೆ ಶಿವಣ್ಣ ಇಷ್ಟು ಸ್ಪರ್ಧೆಯಲ್ಲೂ ತಮ್ಮ ಮಾರುಕಟ್ಟೆ ಉಳಿಸಿಕೊಂಡಿದ್ದಾರೆ ಅಂದರೆ ಆತನ ಆಂತರ್ಯದ ಶ್ರೀಮಂತಿಕೆಯಿಂದ. ಬರೀ ಎರಡು ಚಿತ್ರದ ಹಿಟ್ ಗೆ ಬಂದ ದಾರಿ ಮರೆಯೋ ಮಂದಿಯ ಮಧ್ಯೆ ನಮ್ಮ ಶಿವಣ್ಣ ಪುಟವಿಟ್ಟ ಚಿನ್ನ... ಅಂತ ಸ್ನೇಹಿತನ ಪಡೆದ ನಾನೆ ಧನ್ಯ".-ಜಗ್ಗೇಶ್

'ಲೀಡರ್' ಚಿತ್ರದಲ್ಲಿ ಗುರುರಾಜ್
ಇದೀಗ ಶಿವಣ್ಣ ಅವರೊಟ್ಟಿಗೆ ನಟಿಸುವ ಭಾಗ್ಯ ನನ್ನ ಹಿರಿಯಮಗ ಗುರುರಾಜ್ ಗೆ 'ಲೀಡರ್' ಚಿತ್ರದ ಮೂಲಕ ಸಿಕ್ಕಿದೆ. ಅವರು ತೋರುವ ಪ್ರೀತಿ ಕಂಡು ಗುರುರಾಜ್ ಮೂಕಸ್ತಬ್ಧನಾಗಿದ್ದಾನೆ. ಅವನು ಹೇಳಿದ್ದು ಇಷ್ಟೇ, 'ಅಪ್ಪ ನಿಮ್ ಕಾಲದ ನಟರ ಗುಣ ವರ್ಣನೆಗೆ ಮೀರಿದ್ದು, ಯು ಗೈಸ್ ಆರ್ ಡೌನ್ ಟು ಅರ್ಥ್... ಐ ಲೌವ್ ಯು ಗೈಸ್' ಅಂದುಬಿಟ್ಟ".-ಜಗ್ಗೇಶ್

ನಮ್ಮ ಗುಣವೇ ಎಲ್ಲಾ ಸಾಧನೆಗೂ ಆಸ್ತಿ
"ಮೂರು ದಿನದ ಬಾಳಲ್ಲಿ ನೂರು ಮಂದಿ ಮೆಚ್ಚುವಂತೆ ಬಾಳಬೇಕು ಅದೇ ಬದುಕು. ಹೆಸರು, ಕೀರ್ತಿ ಬರುತ್ತೆ ಹೋಗುತ್ತೆ, ನಮ್ಮ ಗುಣವೇ ನಮ್ಮ ಸಕಲ ಸಾಧನೆಗೂ ಆಸ್ತಿ. ಅದು ನಾ ಕಂಡಿದ್ದು ರಾಜಣ್ಣ ಹಾಗು ಅವರ ಮಕ್ಕಳಲ್ಲಿ. ಈ ವಂಶದ ಜೊತೆ ನಾನೂ ಒಬ್ಬ ಹೆಜ್ಜೆ ಹಾಕುತ್ತಿರುವುದಕ್ಕೆ ಹೆಮ್ಮೆಇದೆ. ಇವರ ಪ್ರೀತಿ ಕೊಟ್ಟ ರಾಯರಿಗೆ ಧನ್ಯವಾದ".-ಜಗ್ಗೇಶ್


Click it and Unblock the Notifications











