ಪ್ರೀತಿಯ ಅಪ್ಪು ಕುರಿತು ನಟ ಜಗ್ಗೇಶ್ ಭಾವುಕ ನೆನಪು
ಅಜಾತಶತ್ರು ಅಪ್ಪು, ಎಲ್ಲರೊಟ್ಟಿಗೂ ಆತ್ಮೀಯರಾಗಿದ್ದರು. ಆದರೆ ಕೆಲವರೊಂದಿಗೆ ಬಹು ಆತ್ಮೀಯ ಬಾಂಧವ್ಯ ಹೊಂದಿದ್ದರು. ಅದರಲ್ಲಿ ನಟ ಜಗ್ಗೇಶ್ ಪ್ರಮುಖರು.
ಜಗ್ಗೇಶ್, ತಮ್ಮ ಮೆಚ್ಚಿನ ನಟ ಎಂದು ಹಲವು ಬಾರಿ ಪುನೀತ್ ರಾಜ್ಕುಮಾರ್ ಹೇಳಿಕೊಂಡಿದ್ದಿದೆ. ಜಗ್ಗೇಶ್ ನಟನೆಯ 'ತರ್ಲೆ ನನ್ಮಗ' ಸಿನಿಮಾ ಅಪ್ಪುವಿನ ಅಚ್ಚು ಮೆಚ್ಚಿನ ಸಿನಿಮಾ. ಹಲವಾರು ಬಾರಿ ಆ ಸಿನಿಮಾವನ್ನು ನೋಡಿದ್ದೇನೆ ಎಂದು ಅಪ್ಪು ಹೇಳಿದ್ದರು.
ಅಣ್ಣಾವ್ರ ಅಪ್ಪಟ ಅಭಿಮಾನಿ, ದೊಡ್ಮನೆಯ ಸನ್ಮಿತ್ರ ಆಗಿರುವ ನಟ ಜಗ್ಗೇಶ್ ಸಹ ಅಪ್ಪುವಿನೊಂದಿಗೆ ಸಹೋದರನ ಸಲುಗೆ ಹೊಂದಿದ್ದರು. ಅಪ್ಪು ಅಗಲಿದ ಬಳಿಕ ಹಲವು ಬಾರಿ ಅಪ್ಪು ಹಾಗೂ ತಮ್ಮ ಬಾಂಧವ್ಯದ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. ಇದೀಗ ಅಪ್ಪುವಿನ ಮೊದಲ ವರ್ಷದ ಪುಣ್ಯ ಸ್ಮರಣೆಯಂದು ಪುನೀತ್ ಅವರನ್ನು ನೆನಪಿಸಿಕೊಂಡು ಭಾವುಕ ಬರಹವೊಂದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಅದರ ಯಥಾವತ್ತು ಇಲ್ಲಿದೆ.

ಅಣ್ಣಾವ್ರೇ ಪರಿಚಯಿಸಿದ ಮುದ್ದು ಜೀವ
''ರಾಘಣ್ಣನ ಮದುವೆಗೆ ವಜ್ರೇಶ್ವರಿ ಮ್ಯಾನೇಜರ್ ಕಂಠೀರವ ಕುಮಾರ್ ಬರಬೇಕು ಎಂದು ತಿಳಿಸಿದ. ಅಣ್ಣನ ಮನೆಯ ಮದುವೆ ಸಡಗರದಲ್ಲಿ ಬಾಗಿಯಾಗುವ ಸೌಭಾಗ್ಯ, ಪರಿಮಳನಿಗೆ ತಯಾರಾಗಲು ಹೇಳಿದೆ. ಆಗ ನನ್ನ ಬಳಿ ಇದ್ದದ್ದು ಬುಲೆಟ್ ಅದನ್ನು ಏರಿ ಪುನೀತ ಫಾರ್ಮ್ಗೆ ಹೋದೆವು. ಅಣ್ಣನ ಪ್ರೀತಿ ಬಗ್ಗೆ ಏನು ಹೇಳುವುದು, ಬಾಯ್ಯ ಬಾ ಎಂದು ಕೂಗಿ ಮೈಸವರಿ ಅವರೆ ಕುಡಿಯಲು ಪಾನಿಯ ನೀಡಿದರು. ಬಂದವರಿಗೆಲ್ಲಾ ನನ್ನ ಪರಿಚಯಿಸಿದರು ಅದರಲ್ಲಿ ಒಬ್ಬರು ನನ್ನ ವಿಶೇಷ ಪುನೀತ್. 'ಕಂದ ಇದು ಯಾರು ಗೊತ್ತ ನಮ್ಮ ರಜನಿಕಾಂತ' ಎಂದು ಪರಿಚಯಿಸಿದರು. ಬಾಲಕ ಪುನೀತ ಆಶ್ಚರ್ಯದಿಂದ ನನ್ನ ನೋಡಿದ''

ವೆಂಕಟೇಶ ಕೊಟ್ಟ ಆ ಫೋಟೊ
'ನನಗೂ ಆತನ ನೋಡಿ ಆನಂದವಾಯಿತು. ಕೆಲದಿನದ ನಂತರ ಶಿವಣ್ಣನ 'ರಣರಂಗ' ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ವೆಂಕಟೇಶ ಎಂಬ ಜೂನಿಯರ್ ಆರ್ಟಿಸ್ಟ್ ಲೋ ತಗಳೋ ರಾಜಣ್ಣನ ಜೊತೆ ಫೋಟೊ ಎಂದು ನೀಡಿದ. ಆನಂದ ತಡೆಯಲಾಗಲಿಲ್ಲಾ ಕಾರಣ ಆ ಕಾಲದಲ್ಲಿ ರಾಜಣ್ಣನ ಜೊತೆ ಫೋಟೊ ಅಸಾಧ್ಯ ನೋಡಿದರೆ ಅದು ನನ್ನ ಹುಡುಕಿಬಂತು. ವೆಂಕಟೇಶ ಹೊಟ್ಟೆಪಾಡಿಗೆ ಸಣ್ಣ ಕ್ಯಾಮೆರ ಇಟ್ಟುಕೊಂಡಿದ್ದ ಒಂದು ಫೋಟೊಗೆ 5ರೂ ಪಡೆಯುತ್ತಿದ್ದ. ಬಡವ ಎಂದು ಅಣ್ಣನೆ ಸಹಕರಿಸಿದ್ದರು''

ಮಂತ್ರಾಲಯ ಪ್ರವಾಸದ ನೆನಪು
ಕೆಲ ವರ್ಷ ನಂತರ ಪುನೀತ ಅಣ್ಣನ ಜೊತೆ ಕಲಾವಿದ ಸಂಘದ ಕಾರ್ಯಕ್ರಮದಲ್ಲಿ ನರ್ತಿಸಿದ ಆಗ ಅಮ್ಮ ಜಗ್ಗೇಶ ಅವನು ಪ್ರೀತಿಸುವ ಹುಡುಗಿ ಬಂದಿದ್ದಾಳೆ ಎಂದರು, ಜನರ ಮಧ್ಯೆ ನನ್ನ ಕಣ್ಣಿಗೆ ಅಶ್ವಿನಿ ಕಾಣಲಿಲ್ಲ. ನಂತರ ಮದುವೆ, ಸೂಪರ್ ಸ್ಟಾರ್ ಎಲ್ಲಾ ಆದರು ಅದೇನೊ ನನ್ನ ವಿಪರೀತ ಇಷ್ಟಪಡುತ್ತಿದ್ದ. ನಮ್ಮ ಸ್ನೇಹ ವರ್ಣಿಸಲಾಗದ ಸಂಕೋಲೆ. ಕಡೆದಿನಗಳ ಎಂದು ಭಾವಿಸಲಿಲ್ಲಾ ನಿರ್ದೇಶಕ ಸಂತೋಷ ಪುನೀತನ ಜೊತೆ ಮಂತ್ರಾಲಯಕ್ಕೆ ಕರೆದುಕೊಂಡು ಹೋದ ಆ ದಿನ ಮನಬಿಚ್ಚಿ ಮಾತಾಡಿ ನಕ್ಕು ಸಮಯ ಕಳೆದೆವು.

ಮಲ್ಲೇಶ್ವರದ ಆ ಕಡೆಯ ಭೇಟಿ
ಕಡೆ 3 ದಿನದ ಹಿಂದೆ ಯೋಗಿ, ಪುನೀತ ಮಲ್ಲೇಶ್ವರಕ್ಕೆ ಬಂದ ವಿಷಯ ತಿಳಿಸಿದ ಕರೆಮಾಡಿದೆ ಅಣ್ಣ ಮಲ್ಲೇಶ್ವರದಲ್ಲಿ ಇರುವೆ ಎಂದ. ಹಾಗೆ ಎದ್ದು ಕಾರ್ ಡ್ರೈವ್ ಮಾಡಿ ನಾನೆ ಹೋದೆ. ಪೂಜೆಗೆ ಕುಳಿತು ತೊಡೆ ನೋವಾಗಿದೆ. ಹಾಗಾಗಿ ಚಿಕಿತ್ಸೆಗೆ ಬಂದೆ ಎಂದ. ಚಿಕಿತ್ಸೆ ಮುಗಿದ ಮೇಲೆ ಪುನೀತ್, ಸ್ನೇಹಿತ ಸತೀಶ್ ನಾನು ಪುನೀತ ಕೆಲ ಸಮಯ ಮಾತಾಡಿ ನಿರ್ಗಮಿಸಿದೆವು. ಇದಾದ 3 ದಿನಕ್ಕೆ ಪುನೀತ ಹೋಗಿಬಿಟ್ಟ ಅಂದರು ಹೃದಯ ಒಡೆದು ಚೂರಾಯಿತು. ಜೀವನದ ಆಸಕ್ತಿ, ಬದುಕಿನ ಮೇಲೆ ನಂಬಿಕೆ, ನಾವು ಯಾರು? ಈ ಭೂಮಿಗೆ ಏಕೆ ಬಂದೆವು? ಎಲ್ಲಾ ಇದೆ ಮುಂದೆ ಇರದು? ಯಾವುದು ಸತ್ಯ ಯಾವುದು ಮಿತ್ಯ? ನಾನು ಹೇಗೆ ಇರಬೇಕು ಏನು ಮಾಡಬೇಕು? ಬದುಕು ನಶ್ವರ? ಎಂಬ ಅನೇಕ ಪ್ರಶ್ನೆ ನನ್ನ ಕಾಡುತ್ತಿದೆ.

ತಂದೆಯ ಮೀರಿ ಬೆಳೆದು ಉಳಿದ ದೇವಮಾನವ: ಜಗ್ಗೇಶ್
ನನ್ನೊಳಗೆ ನಾನು ಬಚ್ಚಿಕೊಂಡು ಸುಮ್ಮನೆ ಇರುವಂತೆ ನಟಿಸಿ ನಾಟಕೀಯ ಬದುಕುತ್ತಿರುವೆ. ನನ್ನವರು ಎಂದು ಸಿಕ್ಕಾಗ ಮನಬಿಚ್ಚಿ ಮಾತಾಡುವೆ. ಕೆಲಸ ಇದ್ದಾಗ ಹೋಗುವೆ. ಮಿಕ್ಕಂತೆ ಯಾರಿಗು ಸಿಗದೆ ಏಕಾಂತಕ್ಕೆ ಜಾರುವೆ. ಇದು ಪುನೀತ ಸಿಕ್ಕಾಗ ಇದ್ದಾಗ ಹೋದಮೇಲೆ ನನ್ನ ಹೃದಯದ ಅನಿಸಿಕೆ. ಕಡೆಯ ಮಾತು ಪುನೀತ ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ'' ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ ನಟ ಜಗ್ಗೇಶ್.


Click it and Unblock the Notifications











