ವಿಡಿಯೋ: ಜಗ್ಗೇಶ್ ಕಂಠದಲ್ಲಿ ಸುಮಧುರ ಹಾಡು ಕೇಳಿ, ಬೇಸರ ದೂರ ಓಡಿಸಿ
ಕಲಾವಿದ ಎಲ್ಲಿದ್ದರೂ ಕಲಾವಿದನೇ. ಹಿರಿತೆರೆ-ಕಿರಿತೆರೆ, ರಂಗಭೂಮಿ, ಬೀದಿ ನಾಟಕ ಒಟ್ಟಾರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಕೊಡುವುದೇ ಅವನ ಧ್ಯೇಯ. ಒಳ್ಳೆಯ ಕಲಾವಿದನೊಬ್ಬನ ಮುಖ್ಯ ಲಕ್ಷಣ.
ದಿನವಹಿ ಸಿನಿಮಾಗಳಲ್ಲಿ ನಟಿಸುತ್ತಾ, ರಿಯಾಲಿಟಿ ಶೋ ಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಾ, ಒಂದಲ್ಲಾ ಒಂದು ರೀತಿ ಪ್ರೇಕ್ಷಕ ಪ್ಭುಗಳ ಮನರಂಜನೆ ಮಾಡುತ್ತಿದ್ದ ನವರಸ ನಾಯಕ ಜಗ್ಗೇಶ್ ಅವರು ಕೊರೊನಾ ಲಾಕ್ಡೌನ್ ಕಾರಣದಿಂದ ಎರಡು ವಾರದಿಂದ ಮನೆಯಲ್ಲಿಯೇ ಇದ್ದಾರೆ.
ಆದರೆ ಮನೆಯಲ್ಲಿ ಸುಮ್ಮನೇ ಸಮಯ ಕಳೆಯುವ ಬದಲಿಗೆ ಸಾಮಾಜಿಕ ಜಾಲತಾಣ ಬಳಸಿಕೊಂಡು ಒಂದಷ್ಟು ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡಿರುವ ಅವರು, ಈಗ ಅದೇ ಸಾಮಾಜಿಕ ಜಾಲತಾಣ ಬಳಸಿಕೊಂಡು ಮನರಂಜನೆ ನೀಡುವ ಕಾರ್ಯವನ್ನು ಮಾಡಿದ್ದಾರೆ.

ಸುಶ್ರಾವ್ಯವಾಗಿ ಹಾಡಿದ ನಟ ಜಗ್ಗೇಶ್
ಖಾಲಿ ಸಮಯದಲ್ಲಿ ತಮ್ಮ ಅಭಿಮಾನಿಗಳ, ಆತ್ಮರ ಬೇಜಾರು ಕಳೆಯಲೆಂದು ಜಗ್ಗೇಶ್ ಅವರು ಕನ್ನಡದ ಹಾಡೊಂದನ್ನು ಹಾಡಿದ್ದು, ಸುಶ್ರಾವ್ಯವಾಗಿ ಹಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ವಿಷ್ಣುವರ್ಧನ್ ಅಭಿನಯದ ಹಾಡು ಹಾಡಿದ ಜಗ್ಗೇಶ್
ವಿಷ್ಣುವರ್ಧನ್ ಅಭಿನಯದ 'ಹೃದಯ ಗೀತೆ' ಸಿನಿಮಾದ 'ಯುಗ ಯುಗಗಳೇ ಸಾಗಲಿ ನಮ ಪ್ರೇಮ ಶಾಶ್ವತ' ಹಾಡನ್ನು ಕ್ಯಾರಿಯೋಕೆ ರೀತಿಯಲ್ಲಿ ಹಾಡಿರುವ ಜಗ್ಗೇಶ್, ತಾವೊಬ್ಬ ಉತ್ತಮ ಹಾಡುಗಾರರೆಂದು ಸಾಬೀತುಪಡಿಸಿದ್ದಾರೆ.

ವಿಡಿಯೋವನ್ನು ಹಲವಾರು ಮಂದಿ ಲೈಕ್ ಮಾಡಿದ್ದಾರೆ
ಶ್ರುತಿ-ಲಯ-ತಾಳ ತಪ್ಪದೆ, ಮೂಲ ಹಾಡಿನಂತೆಯೇ ಯಥಾವತ್ತು ಏರಿಳಿತದೊಂದಿಗೆ ಜಗ್ಗೇಶ್ ಅವರು ಹಾಡು ಹಾಡಿದ್ದು, ಹಾಡಿನ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಹಲವು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.

ಬೆಳಕು ಯಶಸ್ಸಿನ ಸಂಕೇತ: ಜಗ್ಗೇಶ್
ವಿಡಿಯೋ ಜೊತೆಗೆ ''ಒಬ್ಬ ಕಲಾವಿದನಾಗಿ ಮನೆಯಲ್ಲಿಯೇ ಕೂತು ಬೇಜಾರಾದ ನನ್ನ ಆತ್ಮೀಯ ಮನಗಳ ಕೆಲಕಾಲ ಸಂತೋಷ ಪಡಿಸುವ ನನ್ನ ಸಣ್ಣ ಪ್ರಯತ್ನ.. ನಾನು ಹಾಡುಗಾರನಲ್ಲಾ ತಪ್ಪಿದ್ದರೆ ಕ್ಷಮಿಸಿ.. ನಾಳೆ 9ಘಂಟೆಗೆ 9ನಿಮಿಷಗಳ ಕಾಲ ದೀಪ ಬೆಳಗಿಸುವ!ಬೆಳಕು ಯಶಸ್ಸಿನ ಸಂಕೇತ! ಯುಗ ಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ ಇರಲಿ ಎಂದು ರಾಯರ ಬೇಡುವೆ'' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.


Click it and Unblock the Notifications











