ಚಿತ್ರದುರ್ಗದ ಕೋಟೆ ನೋಡಿ ಬಾಲ್ಯ ನೆನಪಿಸಿಕೊಂಡ ನಟ ಜಗ್ಗೇಶ್
ನವರಸನಾಯಕ ಜಗ್ಗೇಶ್ ಇತ್ತೀಚೆಗೆ ತೋತಾಪುರಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಮೈಸೂರಿನಲ್ಲಿ ಕ್ಲೈಮ್ಯಾಕ್ಸ್ ದೃಶ್ಯ ಸೆರೆ ಹಿಡಿಯಲಾಗಿದ್ದು, ಫೋಟೋಗಳು ವೈರಲ್ ಆಗಿತ್ತು. ಈ ಸಿನಿಮಾ ಮುಗಿಸಿ ಮತ್ತೊಂದು ಚಿತ್ರದ ಚಿತ್ರೀಕರಣ ಪ್ರಾರಂಭಿಸುವ ಮೊದಲು ಜಗ್ಗೇಶ್ ಪ್ರವಾಸಕ್ಕೆ ತೆರಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ಜಗ್ಗೇಶ್ ಆಗಾಗ ಕೆಲವು ವಿಚಾರಗಳ ಬಗ್ಗೆ ಪೋಸ್ಟ್ ಗಳನ್ನು ಹಾಕುತ್ತಿರುತ್ತಾರೆ. ಇದೀಗ ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿರುವ ಬಗ್ಗೆ ಜಗ್ಗೇಶ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾರೆ.
ಬಾಲ್ಯದಲ್ಲಿ ಹಾಡುತ್ತಿದ್ದ ಚಿತ್ರದುರ್ಗದ ಕಲ್ಲಿನ ಕೋಟೆ, ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...ಈ ಹಾಡನ್ನು ಚಿಕ್ಕವಯಸ್ಸಿನಲ್ಲಿ ಹಾಡಿ ಬಹುಮಾನ ಗೆದ್ದ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್,

'ಚಿತ್ರದುರ್ಗದ ಕಲ್ಲಿನ ಕೋಟೆ. ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ. ಮದಿಸಿದ ಕರಿಯ ಮದವಡಗಿಸಿದ. ಮದಕರಿನಾಯಕ ಆಳಿದ ಕೋಟೆ. ಬಾಲ್ಯದಲ್ಲಿ ಹಾಡಿ ನಾನು ಪಾರಿತೋಷಕ ಪಡೆದ ಹಾಡು. ಚಿತ್ರದುರ್ಗದ ಏಳುಸುತ್ತಿನ ಕೋಟೆ ಕಣ್ತುಂಬಿಸಿಕೊಂಡ ಕ್ಷಣ. ಮದಕರಿನಾಯಕ ನನ್ನ ಹೃದಯದಲ್ಲಿ ನಿತ್ಯನಿರಂತರ ರಾರಾಜಿಸುವ ನಾಯಕ' ಎಂದು ಬರೆದುಕೊಂಡಿದ್ದಾರೆ.
ಕೋಟೆ ವೀಕ್ಷಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಮದಕರಿನಾಯಕ ಪೂಜಿಸುತ್ತಿದ್ದ ಕಾಳಿ ವಿಗ್ರಹವೆಂದ ಸ್ಥಳಿಯರಿಂದ ತಿಳಿದು ಮೂಕವಿಸ್ಮಿತನಾದೆ. ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ದಕ್ಷಿಣ ಕಾಳಿಕ ಕಿಂಕಿಣಿ ವಿಚೈಯ್ ನಮಃ' ಎಂದು ಕಾಳಿವಿಗ್ರಹದ ಬಗ್ಗೆ ಬರೆದುಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ತೋತಾಪುರಿ ಮುಗಿಸಿರುವ ಜಗ್ಗೇಶ್ ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ತೋತಾಪುರಿ ಪಾರ್ಟ್-1 ಮತ್ತು ಪಾರ್ಟ್-2 ನಲ್ಲಿ ತೆರೆಗೆ ಬರುತ್ತಿದೆ. ಇನ್ನು ರಂಗನಾಯಕ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಬೇಕಿದೆ. ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಜಗ್ಗೇಶ್ ಬ್ಯುಸಿಯಾಗಿದ್ದಾರೆ.


Click it and Unblock the Notifications











