ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು; ನಟ ಜಗ್ಗೇಶ್
ಡಿಸೆಂಬರ್ 23 ವಿಶ್ವ ರೈತ ದಿನಾಚರಣೆ. ವಿಶ್ವದಾದ್ಯಂತ ಅನೇಕರು ಅನ್ನದಾತರನ್ನು ನೆನೆದು ಶುಭಾಶಯ ಕೋರುತ್ತಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಒಂದು ದಿನ ಮೀಸಲಿಟ್ಟು ಅವರ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಇಡೀ ವಿಶ್ವಕ್ಕೆ ಅನ್ನ ಕೊಡುವವರನ್ನು ಮರೆಯಲು ಸಾಧ್ಯ ಇಲ್ಲ.
ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಸಹ ರೈತರನ್ನು ನೆನೆಪಿಸಿಕೊಳ್ಳುತ್ತಿದ್ದಾರೆ. ಮೂರು ಹೊತ್ತು ಹೊಟ್ಟೆ ತುಂಬಿಸುವ ಅನ್ನ ದಾತರಿಗೆ ಇಂದು ಶುಭಾಶಯ ಕೋರುತ್ತಿದ್ದಾರೆ. ಹಿರಿಯ ನಟ ಜಗ್ಗೇಶ್ ಸಹ ಶುಭ ಕೋರಿ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ಎಂದಿದ್ದಾರೆ.
ರೈತರ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, 'ತಾತಚಿಕ್ಕಪ್ಪಂದಿರು ಹೂಡುತ್ತಿದ್ದ ನೇಗಿಲಮೇಲೆ ಬೆಳೆದ ರೈತರಕುಡಿ ನಾನು. 100%ಗೆ 50%ಯುವಕರು ಈ ಕಾಯಕ ಬಿಟ್ಟು ಅಲ್ಪ ಆದಾಯಕ್ಕೆ ಪಟ್ಟಣ ಜೀವನಕ್ಕೆ ಹೋಗಿಬಿಟ್ಟರು. ಬಣಗುಡುತ್ತಿದೆ ಹೊಲಗದ್ದೆ. ಖಾಲಿಕೊಟ್ಟಿಗೆ. ಒಣಗಿದೆ ಗೊಬ್ಬರದಗುಂಡಿ. ಓ ಮನಸೆ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ಮರಳಿ ಮಣ್ಣಿಗೆ. ಕೊಂಡು ತಿನ್ನುವುದಕ್ಕಿಂತ ಬೆಳೆದುತಿನ್ನುವ. ಜೈಕಿಸಾನ್.' ಎಂದಿದ್ದಾರೆ.

ಈ ವರ್ಷ ಲಾಕ್ ಡೌನ್ ಅನೇಕರು ಮತ್ತೆ ಕೃಷಿ ಕಡೆ ಮುಖ ಮಾಡಿದ್ದಾರೆ. ಜಗ್ಗೇಶ್ ಹೇಳಿದ ಹಾಗೆ, ಶೇ.50ರಷ್ಟು ಯುವಕರು ಕೃಷಿ ಬಿಟ್ಟು ಪಟ್ಟಣ್ಣ ಸೇರಿದ್ದರು. ಆದರೆ ಈ ಬಾರಿ ಕೊರೊನಾ ಲಾಕ್ ಡೌನ್ ನಲ್ಲಿ ಪಟ್ಟಣ ಸೇರಿದವರು ಮತ್ತೆ ಹಳ್ಳಿಗೆ ಹೋಗಿ ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಂದಹಾಗೆ ಜಗ್ಗೇಶ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನಿಮಾ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದ್ದಾರೆ. ತೋತಾಪುರಿ ಚಿತ್ರೀಕರಣ ಮುಗಿಸಿರುವ ಜಗ್ಗೇಶ್ ಇದೀಗ ರಂಗನಾಯಕ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ರಂಗನಾಯಕ ಸಿನಿಮಾ ಮಠ ಗುರುಪ್ರಸಾದ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಕೊರೊನಾ ಲಾಕ್ ಡೌನ್ ಬಳಿಕ ಜಗ್ಗೇಶ್ ರಂಗನಾಯಕ ಮೂಲಕ ಮತ್ತೆ ಚಿತ್ರೀಕರಣಕ್ಕೆ ಹೊರಡುತ್ತಿದ್ದಾರೆ.


Click it and Unblock the Notifications











