ಗ್ರೀನ್ ಗೆಳೆಯರ ಜೊತೆ ಸೇರಿ ತುಂಗಾಭದ್ರಾ ನದಿ ತಟ ಸ್ವಚ್ಛಗೊಳಿಸಿದ ಮಾಸ್ಟರ್ ಆನಂದ್
ಸೆಲೆಬ್ರೆಟಿಗಳು ಕೇವಲ ಬಣ್ಣ ಹಚ್ಚುತ್ತಿಲ್ಲ. ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸ್ಟಾರ್ ನಟರು, ನಿರೂಪಕರು, ಹಾಸ್ಯನಟರು ಒಳ್ಳೆಯ ಕೆಲಸಗಳ ಮೂಲಕ ಜನರ ಮನ ಗೆಲ್ಲುತ್ತಿದ್ದಾರೆ. ಹಾಗಂತ ಇದು ತೋರಿಕೆ ಕೆಲಸ ಆಗಿರುವುದಿಲ್ಲ. ಉತ್ತಮ ಕೆಲಸವನ್ನು ಮನಸಾರೆ ಮಾಡುತ್ತಿದ್ದಾರೆ.
ಮಾತಿನ ಮಲ್ಲ, ಹಾಸ್ಯ ನಟ, ನಿರೂಪಕ ಮಾಸ್ಟರ್ ಆನಂದ್ ಕೂಡ ಸಮಾಜ ಮುಖಿ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಹರಿಹರ ಪಟ್ಟಣದ ತುಂಗಾಭದ್ರಾ ನದಿ ತಟವನ್ನು ಸ್ವಚ್ಚಗೊಳಿಸುವ ಕೆಲಸದಲ್ಲಿ ಭಾಗಿಯಾಗಿದ್ದರು. ಮಾಸ್ಟರ್ ಆನಂದ್ ಈ ಉತ್ತಮ ಕಾರ್ಯಕ್ಕೆ ದಾವಣಗೆರೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವಧೂತ ವಿನಯ್ ಗುರೂಜಿ ಗ್ರೀನ್ ಗೆಳೆಯರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ವಚ್ಚತಾ ಕಾರ್ಯದಲ್ಲಿ ಸಂಘದ ಪದಾಧಿಕಾರಿಗಳ ಜೊತೆ ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದರು .ಹರಿಹರದ ರಾಘವೇಂದ್ರ ಮಠದ ಹಿಂಭಾಗದಲ್ಲಿ ಹರಿಯುವ ತುಂಗಾಭದ್ರಾ ತಟದಲ್ಲಿದ್ದ ಕಸ ಹಾಗೂ ತ್ಯಾಜ್ಯವನ್ನು ಸ್ವಚ್ಚಗೊಳಿಸಿದ್ದಾರೆ.

ಬೆಂಗಳೂರಿನಿಂದ ಬಂದ 20 ಜನರ ತಂಡದೊಂದಿಗೆ ಮಾಸ್ಟರ್ ಆನಂದ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದರು. ಗ್ರೀನ್ ಗೆಳೆಯರೊಂದಿಗೆ ತುಂಗಾಭದ್ರ ನದಿ ತಟ ಹಾಗೂ ದೇವಸ್ಥಾನದ ಸುತ್ತಮುತ್ತ ಬಿದ್ದಿದ್ದ ಕಸವನ್ನು ತೆಗೆದು ಹಾಕಿದರು. ಇವರಿಗೆ ಹರಿಹರದ ಸ್ಥಳೀಯರು ಹಾಗೂ ನಾಗರಿಕರು ಸಾಥ್ ನೀಡಿದರು. ತುಂಗಾಭ್ರದಾ ನದಿ ತಟದ ಬಳಿಕ ಹರಿಹರೇಶ್ವರ ದೇವಸ್ಥಾನದ ಹಿಂಭಾಗವನ್ನು ಸ್ವಚ್ಚತೆ ಮಾಡಲಾಗಿದೆ.
"ಸ್ವಚ್ಚತೆ ವಿನಯ್ ಗುರೂಜಿ ಅವರ ಕನಸಾಗಿತ್ತು. ಅವರು ಯಾರಿಗೂ ಸ್ವಚ್ಚತೆ ಮಾಡಿ ಅಂತ ಹೇಳದೆ ಅವರು ಕಾರ್ಯ ನೆರವೇರಿದೆ. ಇದರಿಂದ ದತ್ತಪೀಠ ಸೇರಿದಂತೆ ಹಲವು ಸ್ಥಳಗಳು ಸ್ವಚ್ಚವಾಗಿದ್ದವು. ಈ ಕಾರಣಕ್ಕೆ ನಾವು ಏನಾದರೂ ಮಾಡಬೇಕು ಅಂತ ಹೇಳಿ ಸ್ನೇಹಿತರ ಜೊತೆಗೂಡಿ ಬಂದು ತುಂಗಾಭದ್ರ ನದಿ ತಟ ಹಾಗೂ ದೇವಸ್ಥಾನವನ್ನು ಶುಚಿ ಮಾಡಿದ್ದೇವೆ." ಎಂದು ಹಾಸ್ಯ ನಟ-ನಿರೂಪಕ ಮಾಸ್ಟರ್ ಆನಂದ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಸ್ವಚ್ಚತಾ ಕಾರ್ಯಕ್ರಮದ ಪ್ರಾಮುಖ್ಯತೆ ಬಗ್ಗೆನೂ ಹೇಳಿದ್ದಾರೆ. " ಈ ಸ್ವಚ್ಚತಾ ಅಭಿಯಾನ ಜನರ ಮನೆ, ಮನಸ್ಸಿಗೆ ಹೋಗುತ್ತೆ. ಇಂತಹ ತಂಡ ಬಂದು ಸ್ವಚ್ಚತಾ ಕೆಲಸ ಮಾಡಿದೆ. ನಾವು ಇಲ್ಲಿ ಕಸ ಹಾಕಬಾರದು ಅನ್ನೋ ಭಾವನೆ ಬರುತ್ತೆ. ಅದಕ್ಕಾಗಿಯೇ ನಾವು ಈ ಅಭಿಯಾನ ಆರಂಭಿಸಿದ್ದೇವೆ." ಎಂದು ಮಾಸ್ಟರ್ ಆನಂದ್ ಹೇಳಿದರು.


Click it and Unblock the Notifications











