ದರ್ಶನ್ ಜೊತೆ ಸ್ನೇಹದ ಭಾವುಟ ಹಾರಿಸಲು ಮುಂದಾದ ನಿಖಿಲ್
''ಸರಿ... ನಾನು ರೆಡಿ... ನಾನು, ದರ್ಶನ್ ಇಬ್ಬರು ಒಟ್ಟಿಗೆ ಕೂರಲು ಸಿದ್ಧ'' ಎಂದು ನಟ ಹಾಗೂ ರಾಜ್ಯ ಜೆ ಡಿ ಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಹೇಳಿದ್ದಾರೆ.
'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿಸಿರುವ ನಟ ದರ್ಶನ್ ಹಾಗೂ ನಿಖಿಲ್ ಕುಮಾರ್ ನಡುವೆ ಮನಸ್ತಾಪ ಇದೆ ಎನ್ನುವ ಮಾತು ಅನೇಕ ದಿನಗಳಿಂದ ಇದೆ. ಮಂಡ್ಯ ಚುನಾವಣೆ ಆದ ಮೇಲಂತು ಇಬ್ಬರ ಮುನಿಸು ಜಾಸ್ತಿಯಾಗಿದೆ ಎಂದು ತೋರುತ್ತಿತ್ತು. ಮತ್ತೊಂದು ಕಡೆ 'ಕುರುಕ್ಷೇತ್ರ' ಪ್ರಚಾರ ಕಾರ್ಯಕ್ರಮದಲ್ಲಿಯೂ ನಿಖಿಲ್ ಭಾಗಿಯಾಗುತ್ತಿಲ್ಲ.
ಆದರೆ, ಈ ವಿಷಯದ ಬಗ್ಗೆ ಪದೇ ಪದೇ ನಿಖಿಲ್ ಕುಮಾರ್ ಮಾತನಾಡುತ್ತಾ ಬಂದಿದ್ದಾರೆ. ಇದೀಗ, ಸಿನಿಮಾಗಾಗಿ ನಾನು ದರ್ಶನ್ ಇಬ್ಬರು ಒಟ್ಟಿಗೆ ಕೂರಲು ಸಿದ್ಧ ಎಂದು ಹೇಳಿದ್ದಾರೆ.

ತಪ್ಪು ಸಂದೇಶಗಳು ಹೋಗುವುದು ಬೇಡ
''ನಾನು ಸಿನಿಮಾಗೆ ಡಬ್ಬಿಂಗ್ ಮಾಡಿಲ್ಲ ಎಂಬ ಆರೋಪ ಬಂದಿತ್ತು. ಆದರೆ, ಈಗ ನಾನು ಡಬ್ಬಿಂಗ್ ಮಾಡಿ ಆಗಿದೆ. ಕಲಾವಿದನಾಗಿ ನನಗೂ ಜವಾಬ್ದಾರಿ ಇದೆ. ನೀವು ಎಲ್ಲಿಯೇ ಕರೆದರು ಬರುತ್ತೇನೆ ಎಂದು ಮುನಿರತ್ನ ಸರ್ ಗೆ ಹೇಳಿದ್ದೇನೆ. ಕನ್ನಡ ಚಿತ್ರರಂಗ ಬೆಳೆಯಬೇಕು ಎನ್ನುವುದು ನನ್ನ ಆಸೆ.'' - ನಿಖಿಲ್ ಕುಮಾರ್

ದರ್ಶನ್ ಜೊತೆ ನಟಿಸುವ ಅವಕಾಶ ಸಿಕ್ಕಿಲ್ಲ
''ನಾನು ಪಾಂಡವರ ಗುಂಪಿನಲ್ಲಿ ಇದ್ದ ಕಾರಣ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ನನ್ನ ಮತ್ತು ದರ್ಶನ್ ಅವರ ನಡುವೆ ಯಾವ ಭಿನ್ನಾಭಿಪ್ರಾಯ ಇಲ್ಲ. ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ ದೊಡ್ಡದು. ಮೊನ್ನೆ ಪ್ರೆಸ್ ಮೀಟ್ ನಲ್ಲಿ ದರ್ಶನ್ ಅವರು ಮಾತನಾಡಿದ ವಿಡಿಯೋವನ್ನು ಸಹ ನೋಡಿದ್ದೇನೆ.'' - ನಿಖಿಲ್ ಕುಮಾರ್

ನಾನು ದರ್ಶನ್ ಇಬ್ಬರು ಒಟ್ಟಿಗೆ ಕೂರುತ್ತೇವೆ
''ಸರಿ.. ನಾನು ದರ್ಶನ್ ಇಬ್ಬರು ಒಟ್ಟಿಗೆ ಕೂರುತ್ತೇವೆ. ಪದೇ ಪದೇ ಈ ವಿಚಾರ ಎತ್ತುವುದು ಬೇಡ. ನಮ್ಮ ಚಿತ್ರರಂಗದಲ್ಲಿ ಒಗ್ಗಟ್ಟು ಇರಬೇಕು. ಇದನ್ನು ನಾನು ಕೈ ಜೋಡಿಸಿ ಕೇಳುತ್ತೇನೆ. 'ಕುರುಕ್ಷೇತ್ರ' ಸಿನಿಮಾಗೆ ಒಳ್ಳೆಯದಾಗಬೇಕು ಎನ್ನುವುದು ನನ್ನ ಆಸೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿದರೆ ನಮ್ಮ ಕಡೆಯಿಂದ ಮತ್ತಷ್ಟು ದೊಡ್ಡ ಸಿನಿಮಾಗಳು ಬರುತ್ತವೆ.''

ಒಂದೇ ಕಡೆ ಸೇರಿಸುತ್ತಾರ ಮುನಿರತ್ನ
ಈವರೆಗೆ ಸಿನಿಮಾದ ಪ್ರೆಸ್ ಮೀಟ್ ಗಳಲ್ಲಿ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮಗಳಲ್ಲಿ ದರ್ಶನ್ ಹಾಗೂ ನಿಖಿಲ್ ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದರೆ, ಈಗ ಒಂದು ಕಡೆ ದರ್ಶನ್, ನಿಖಿಲ್ ಬಗ್ಗೆ ಮಾತನಾಡಿದ್ದಾರೆ. ನಿಖಿಲ್ ಕುಮಾರ್ ಕೂಡ ದರ್ಶನ್ ಜೊತೆಗೆ ಕೂರಲು ಸಿದ್ಧ ಎಂದಿದ್ದಾರೆ. ಹೀಗಾಗಿ ಇವರಿಬ್ಬರನ್ನು ಸೇರಿಸುವ ಕೆಲಸ ಮುನಿರತ್ನರಿಂದ ಆಗಬಹುದು.

'ಕೆಜಿಎಫ್' ಮತ್ತು 'ಪೈಲ್ವಾನ್' ಬಗ್ಗೆ ಹೊಗಳಿಕೆ
''ಈ ವೇಳೆ 'ಕೆಜಿಎಫ್' ಮತ್ತು 'ಪೈಲ್ವಾನ್' ಸಿನಿಮಾಗಳ ಬಗ್ಗೆ ನಿಖಿಲ್ ಮಾತನಾಡಿದ್ದಾರೆ. 'ಕೆಜಿಎಫ್' ಸಿನಿಮಾಗೆ ತುಂಬ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈಗ 'ಪೈಲ್ವಾನ್' ಕೂಡ ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗುತ್ತದೆ. ಇವೆರಡು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಈ ರೀತಿಯ ಸಿನಿಮಾಗಳ ಕನ್ನಡದಲ್ಲಿ ಇನ್ನು ಬರಬೇಕು.'' ಎಂದು ನಿಖಿಲ್ ಹೇಳಿದ್ದಾರೆ.


Click it and Unblock the Notifications











