ಕಾಶ್ಮೀರಿ ಪಂಡಿತರ ಕ್ಷಮೆ ಕೇಳಿದ ನಟ ಪ್ರಕಾಶ್ ಬೆಳವಾಡಿ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದೆ. ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕತೆಯನ್ನು ಸಿನಿಮಾ ಹೊಂದಿದ್ದು, ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕೆಲವರು ಇದನ್ನು 'ಪ್ರೊಪಾಗಾಂಡಾ' ಸಿನಿಮಾ ಎಂದರೆ ಕೆಲವರು 'ಮರೆಮಾಚಲಾದ ಇತಿಹಾಸ' ಎಂದಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಮಾಜಿ ಪತ್ರಕರ್ತ ಪ್ರಕಾಶ್ ಬೆಳವಾಡಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಕಾಶ್ಮೀರಿ ಪಂಡಿತರ ಕ್ಷಮೆ ಯಾಚಿಸಿದ್ದಾರೆ.
''ನಾನು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ನಟಿಸಿರುವುದಕ್ಕೆ ಹೆಮ್ಮೆ ಪಡುತ್ತೇನೆ. ವಿವೇಕ್ ಅಗ್ನಿಹೋತ್ರಿ ನನಗೆ ಈ ಸಿನಿಮಾದ ಚಿತ್ರಕತೆಯನ್ನು ಕಳಿಸಿದಾಗ ನನಗೆ ಗಾಬರಿಯಾಯಿತು, ಏಕೆಂದರೆ ಆ ವರೆಗೆ ನನಗೆ, ಜಮ್ಮು ಮತ್ತು ಕಾಶ್ಮೀರದಿಂದ ಕಶ್ಮೀರಿ ಪಂಡಿತರನ್ನು ಹೊರಹಾಕಿದ ಆ ಕ್ರೂರ ಘಟನೆಯ ಬಗ್ಗೆ ಇಷ್ಟೊಂದು ಮಾಹಿತಿಯೇ ಇರಲಿಲ್ಲ'' ಎಂದಿದ್ದಾರೆ ಪ್ರಕಾಶ್ ಬೆಳವಾಡಿ.

''ಆ ಚಿತ್ರಕತೆ ಓದಿ, ಮಾಹಿತಿ ಪಡೆದುಕೊಂಡ ಬಳಿಕ ನನಗೆ ಅಪರಾಧಿ ಭಾವ ಕಾಡಿತು. ನಾನು ಆ ಸಮಯದಲ್ಲಿ ಪತ್ರಕರ್ತನಾಗಿದ್ದೆ ಆದರೆ ನನಗೆ ಆ ಬಗ್ಗೆ ಮಾಹಿತಿ ಇರಲಿಲ್ಲ, ನಾನು ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನೂ ಮಾಡಲಾಗಲಿಲ್ಲ. ಹಾಗಾಗಿ ನಾನು ಕಶ್ಮೀರಿ ಪಂಡಿತರ ಕ್ಷಮೆ ಕೇಳುತ್ತೇನೆ. ಏಕೆಂದರೆ ಈ ಕ್ರೂರ ಘಟನೆ ಬಗ್ಗೆ ಮಾತನಾಡದ, ಮೌನವಾಗಿರುವ ಗುಂಪಿನ ಭಾಗವಾಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ'' ಎಂದಿದ್ದಾರೆ.
''ನಾನು ವಿವೇಕ್ ಅಗ್ನಿಹೋತ್ರಿಗೆ ಧನ್ಯವಾದ ಹೇಳುತ್ತೇನೆ. ನಾನು ಅವರಿಗೆ ಆಭಾರಿಯಾಗಿರುತ್ತೇನೆ. ಅವರು 1990 ರಲ್ಲಿ ನಡೆದ ಈ ಕ್ರೂರ ಘಟನೆಯ ಬಗ್ಗೆ ಸಂಶೋಧನೆ ನಡೆಸಿ, ಧೈರ್ಯದಿಂದ ಆ ಕತೆಯನ್ನು ಇಂದು ಜಗತ್ತಿಗೆ ತೋರಿಸುತ್ತಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನೋಡಿ ಎಂದು ಎಲ್ಲ ಭಾರತೀಯರಲ್ಲಿ ಮನವಿ ಮಾಡುತ್ತೇನೆ. ಭಾರತೀಯರಾಗಿ ನಮ್ಮದೇ ರಾಜ್ಯದಲ್ಲಿ ನಡೆದ ಈ ಘಟನೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ನ್ಯಾಯದ ಹಕ್ಕು' (ರೈಟ್ ಟು ಜಸ್ಟಿಸ್) ಕಶ್ಮೀರಿ ಪಂಡಿತರಿಗೆ ದೊರಕಬೇಕು'' ಎಂದಿದ್ದಾರೆ ಪ್ರಕಾಶ್ ಬೆಳವಾಡಿ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ ಇನ್ನಿತರರು ನಟಿಸಿದ್ದಾರೆ. ಸಿನಿಮಾಕ್ಕೆ ಚಿತ್ರಕತೆಯನ್ನು ವಿವೇಕ್ ಅಗ್ನಿಹೋತ್ರಿ ಹಾಗೂ ಸೌರಭ್ ಎಂ ಪಾಂಡೆ ರಚಿಸಿದ್ದಾರೆ.
ಸಿನಿಮಾದ ಬಗ್ಗೆ ಈಗಾಗಲೇ ದೂರೊಂದು ಜಮ್ಮು ಕಾಶ್ಮೀರದ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಾಗಿದೆ. 'ಸಿನಿಮಾದಲ್ಲಿ ತೋರಿಸಲಾಗಿರುವ ಕೆಲವು ದೃಶ್ಯಗಳು ಸತ್ಯವಲ್ಲ ಅಲ್ಲದೆ ಆ ದೃಶ್ಯಗಳು ನನ್ನ ದಿವಂಗತ ಪತಿ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಗೌರವಕ್ಕೆ ಧಕ್ಕೆ ತರುತ್ತಿವೆ'' ಎಂದು ರವಿ ಖನ್ನಾ ಪತ್ನಿ ನಿರ್ಮಲಾ ಖನ್ನಾ ದೂರು ನೀಡಿದ್ದರು. ವಿಚಾರಣೆ ನಡೆಸಿದ ಜಮ್ಮು ಜಿಲ್ಲಾ ನ್ಯಾಯಾಲಯವು, ರವಿ ಖನ್ನಾ ಕುರಿತು ಇರುವ ದೃಶ್ಯಗಳನ್ನು ಬದಲಾವಣೆ ಮಾಡಬೇಕು ಅಥವಾ ಪ್ರದರ್ಶಿಸಬಾರದು ಎಂದು ಚಿತ್ರತಂಡಕ್ಕೆ ಹೇಳಿದೆ.


Click it and Unblock the Notifications











