ಅಪ್ಪು ನೆನಪಲ್ಲಿ ಜನ ಮೆಚ್ಚುವ ಕಾರ್ಯ ಮಾಡಿದ ನಟ ಪ್ರಕಾಶ್ ರೈ
ಅಪ್ಪು ನೆನಪಿಗಾಗಿ ಚಿತ್ರನಟ ಪ್ರಕಾಶ್ ರಾಜ್ ಅವರು 'ಅಪ್ಪು ಎಕ್ಸ್ಪ್ರೆಸ್ ಅಂಬುಲೆನ್ಸ್ ' ವಾಹನವನ್ನು ಮೈಸೂರಿನ ಸಿಎಐ ವರ್ಡ್ಸ್ವರ್ತ್ ಮೆಮೋರಿಯಲ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದರು.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಕನ್ನಡ ನಾಡಿನ ಕಣ್ಮಣಿ. ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವಾದ್ಯಂತ ತನ್ನ ಸಜ್ಜನಿಕೆ, ಸಮಾಜಸೇವೆ, ಒಳ್ಳೆಯತನ ಮತ್ತು ಅಭಿನಯದಿಂದ ಹೆಸರು ಮಾಡಿದ್ದಾರೆ. ಎಲ್ಲರ, ಮನದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ. ಕರ್ನಾಟಕದಾದ್ಯಂತ ಅವರ ಅಭಿಮಾನಿ ಸಂಘಗಳು, ಅವರ ಪೋಸ್ಟರ್ಗಳು, ಅವರ ಹೆಸರಿನ ರಸ್ತೆಗಳು ಅವರ ಹಿರಿಮೆ ಸಾರುತ್ತಿದೆ. ಇಂತಹ ಅಪಪು ನೆನಪಿಗೆ ಸಮಾಜಕ್ಕೆ ಏನಾದರೂ ಸೇವಾ ಕಾರ್ಯ ಮಾಡಬೇಕೆಂಬ ಉದ್ದೇಶದಿಂದ ಆಸ್ಪತ್ರೆಗೆ ಆಂಬುಲೆನ್ಸ್ ನೀಡುತ್ತಿದ್ದೇನೆ ಎಂದರು.
ಪುನೀತ್ ಅವರಿಗೆ ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎಂಬುದು ನನ್ನ ನಂಬಿಕೆಯಾಗಿದೆ. ಈ ರೀತಿ ಬೇರೆಯವರಿಗೆ ಆಗಬಾರದು ಎಂದು ಭಾವಿಸಿ ತುರ್ತು ವಾಹನ ಸೇವೆಯನ್ನು ನೀಡಲಾಗುತ್ತಿದೆ ಎಂದರು.
ಚಿತ್ರ ನಟ ಪುನೀತ್ರಾಜ್ಕುಮಾರ್ ಅವರು ಸಾಕಷ್ಟು ಮಂದಿಗೆ ದಾನ ಮಾಡಿದ್ದಾರೆ. ಅವರ ಈ ಗುಣವನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರಕಾಶ್ರಾಜ್ ಫೌಂಡೇಷನ್ ವತಿಯಿಂದ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂಬುಲೆನ್ಸ್ ಕೀಲಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

ಸಿಎಐ ವರ್ಡ್ಸ್ವರ್ತ್ ಮೆಮೋರಿಯಲ್ ಆಸ್ಪತ್ರೆಗೆ ಅಂಬುಲೆನ್ಸ್
ಮೊದಲ ಹೆಜ್ಜೆಯಾಗಿ ಮೈಸೂರಿನ ಸಿಎಐ ವರ್ಡ್ಸ್ವರ್ತ್ ಮೆಮೋರಿಯಲ್ ಆಸ್ಪತ್ರೆಗೆ ಅಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದ್ದೇವೆ. ರಾಜ್ಯ ಎಲ್ಲಾ ಜಿಲ್ಲೆಗಳಿಗೂ ಈ ರೀತು ತುರ್ತು ಸೇವೆ ವಾಹನವನ್ನು ನೀಡುವುದು. ಮುಂದಿನ ಮೂರು ತಿಂಗಳಲ್ಲಿ ಮಿಷನ್ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಸಹಕರಿಸಲಾಗುವುದು. ತನ್ಮೂಲಕ ಪುನೀತ್ರಾಜ್ಕುಮಾರ್ ಹಾಗೂ ಅವರ ದಾನ ಧರ್ಮದ ಒಳ್ಳೆಯ ಗುಣಗಳು ರಾಜ್ಯಾದ್ಯಂತ ಸ್ಮರಣೀಯವಾಗಿ ಉಳಿಯುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಪ್ರಕಾಶ್ ರೈ ಚಿಕ್ಕಮ್ಮ ಸೇವೆ ಸಲ್ಲಿಸಿದ್ದ ಆಸ್ಪತ್ರೆ
ನನ್ನ ಚಿಕ್ಕಮ್ಮ ಇದೇ ಮಿಷನ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ. ತಾಯಿ, ಸಹೋದರಿಯೂ ನರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಕುಟುಂಬ ಚಿಂತಾಜನಕ ಸ್ಥಿತಿಯಲ್ಲಿದ್ದಾಗ ನನ್ನ ತಾಯಿ ಒಂದು ಅನಾಥಾಶ್ರಮದಲ್ಲಿ ಆಶ್ರಯ ಪಡೆಯಬೇಕಾಯಿತು. ಆ ಹಂತದಲ್ಲಿ ಉಳ್ಳವರು ಆಶ್ರಮಕ್ಕೆ ದಾನ ನೀಡಿದ್ದರಿಂದಲೇ ನಮ್ಮ ಕುಟುಂಬ ಉಳಿಯಿತು. ಈಗ ನಮ್ಮಲ್ಲಿರುವುದನ್ನು ಕೆಲವೊಂದು ಒಳ್ಳೆಯ ಕಾರ್ಯಕ್ಕೆ ಬಳಸುವುದರಿಂದ ಇನ್ನಷ್ಟು ಮಂದಿಗೆ ಸಹಾಯವಾಗುತ್ತದೆ ಎಂದರು. ನಿರ್ದೇಶಕ ವಿನ್ಸೆಂಟ್ ಪಾಲಣ್ಣ, ಚಲನಚಿತ್ರ ನಿರ್ದೇಶಕ ಸಂತೋಷ್ ಆನಂದ್, ರಾಮ್ ರೂಪನ್, ರೆವರೆಂಡ್ ಸುಜಾತಮ್ಮ ಹಾಗೂ ಇತರರು ಇದ್ದರು.

ರಾಜ್ಯದ ಎಲ್ಲ ಜಿಲ್ಲೆಗೂ ವಿಸ್ತರಣೆ
ನಿರ್ದೇಶಕ ಸಂತೋಶ್ ಆನಂದ್ರಾಮ್ ಸಹ ಈ ಖುಷಿಯ ವಿಚಾರವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು, ''ಪ್ರಕಾಶ್ ರೈ ಕಡೆಯಿಂದ "ಅಪ್ಪು ಎಕ್ಸ್ಪ್ರೆಸ್"ಎಂದು ನಾಮಕರಣವಾಗಿರುವ ಆಂಬುಲೆನ್ಸ್ ಅನ್ನು ಮೈಸೂರಿನ ಆಸ್ಪತ್ರೆಗೆ ಕೊಡಲಾಯಿತು. ಪುನೀತ್ ರಾಜ್ಕುಮಾರ್ ಅವರ ಮೇಲೆ ಇರುವ ಪ್ರೀತಿಗೆ ಈ ಸೇವೆಯನ್ನು ಶುರುಮಾಡಿದ್ದಾರೆ,ಈ ಸೇವೆ ಕರ್ನಾಟಕದ ಇನ್ನುಳಿದ 31 ಜಿಲ್ಲೆಗೂ ಮುಂದುವರೆಯುವುದು ಈ ಕಾರ್ಯದಲ್ಲಿ ನನ್ನನ್ನು ಬಾಗಮಾಡಿಕೊಂಡಿರುವ ನಿಮಗೆ ಧನ್ಯವಾದ'' ಎಂದಿದ್ದಾರೆ.

'ಯುವರತ್ನ' ಸಿನಿಮಾದಲ್ಲಿ ಒಟ್ಟಿಗೆ ನಟನೆ
ಪುನೀತ್ ರಾಜ್ಕುಮಾರ್ ಹಾಗೂ ಪ್ರಕಾಶ್ ರೈ ಕೊನೆಯದಾಗಿ 'ಯುವರತ್ನ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾವನ್ನು ಸಂತೋಶ್ ಆನಂದ್ ರಾಮ್ ನಿರ್ದೇಶನ ಮಾಡಿದ್ದರು. ಪುನೀತ್ ಅಗಲಿಕೆಯಿಂದ ಪ್ರಕಾಶ್ ರೈ ತೀವ್ರ ದುಃಖಿತರಾಗಿದ್ದರು. ಸ್ವಂತ ಮಗನನ್ನೇ ಕಳೆದುಕೊಂಡಿರುವ ನನಗೆ ಬೇರೆ ಯಾವ ಸಾವು ಭಾವುಕಗೊಳಿಸಲಾರದು ಎಂದುಕೊಂಡಿದ್ದೆ. ಆದರೆ ಪುನೀತ್ ಸಾವು ನನ್ನನ್ನು ಅಲುಗಾಡಿಸಿಬಿಟ್ಟಿದೆ'' ಎಂದಿದ್ದರು. 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಸಹ ಅವರು ಭಾಗಿಯಾಗಿದ್ದರು.


Click it and Unblock the Notifications











