ಲೋಕಸಭೆ ಚುನಾವಣೆ ಅಖಾಡಕ್ಕೆ ರಂಗಾಯಣ ರಘು?
ಹದಿನಾರನೇ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ಎಲ್ಲಾ ಪಕ್ಷಗಳು ತಾರಾ ವರ್ಚಸ್ಸನ್ನು ಬಳಸಿಕೊಳ್ಳಲು ಮುಂದಾಗಿವೆ. ಇದೀಗ ಬಿಜೆಪಿ ಪಕ್ಷ ಪೋಷಕ ನಟ ರಂಗಾಯಣ ರಘು ಅವರಿಗೆ ಬಲೆ ಬೀಸಿದೆ.
ಕನ್ನಡ ಚಿತ್ರಗಳ ಪ್ರತಿಭಾನ್ವಿತ ಪೋಷಕ ನಟ ರಂಗಾಯಣ ರಘು ಈ ಬಾರಿಯ ಲೋಕಸಭೆ ಚುನಾವಣೆ ಸ್ಪರ್ಧಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಈಗಾಗಲೆ ರಾಜ್ಯ ಬಿಜೆಪಿ ಮುಖಂಡರು ರಂಗಾಯಣ ರಘು ಅವರನ್ನು ಸಂಪರ್ಕಿಸಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ರಘು ಗ್ರೀನ್ ಸಿಗ್ನಲ್ ಕೊಡುವುದೊಂದು ಬಾಕಿ ಇದೆ. [ತುಮಕೂರು ಲೋಕಸಭೆ ಕ್ಷೇತ್ರದಿಂದ ಜಗ್ಗೇಶ್ ಸ್ಪರ್ಧೆ]

ಇದುವರೆಗೂ ರಂಗಾಯಣ ರಘು 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿದ್ದಾರೆ. ಪೋಷಕ ಪಾತ್ರಗಳಿಂದ ಕಾಮಿಡಿ, ಖಳನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ತುಮಕೂರಿನ ಬಿಜೆಪಿಯ ಹಾಲಿ ಸಂಸದ ಜಿಎಸ್ ಬಸರಾಜು ಅವರನ್ನು ಎರಡನೇ ಬಾರಿ ಆಯ್ಕೆ ಮಾಡಲು ಪಕ್ಷದಲ್ಲಿ ಒಮ್ಮತ ಇಲ್ಲ ಎನ್ನಲಾಗಿದೆ. [ಮಾಳವಿಕಾ ಅವಿನಾಶ್ ಈಗ ರಾಜ್ಯ ಬಿಜೆಪಿ ವಕ್ತಾರೆ]
ಹಾಗಾಗಿ ಈ ಬಾರಿ ರಂಗಾಯಣ ರಘು ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಇನ್ನೊಂದು ಕಡೆ ನವರಸನಾಯಕ ಜಗ್ಗೇಶ್ ಕೂಡ ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಇದೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಗೊತ್ತಾಗಬೇಕಾದರೆ ಸ್ಪಲ್ಪ ದಿನ ಕಾಯಲೇಬೇಕು.
ಮೈಸೂರು ರಂಗಾಯಣದ ಕಲಾವಿದನಾಗಿ ರಘು ಅವರನ್ನು ಬೆಳ್ಳಿತೆರೆಯ ಮೇಲೆ ಗುರಿತುವಂತೆ ಮಾಡಿದ್ದು ಯೋಗರಾಜ್ ಭಟ್. ಅವರ ಮಣಿ ಚಿತ್ರ ರಘು ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿತು. ಸುದೀಪ್ ಜೊತೆಗಿನ 'ಧಮ್' ಸಿನಿಮಾ ಚಿತ್ರರಂಗದಲ್ಲಿ ಸುಭದ್ರವಾಗಿ ನಿಲ್ಲುವಂತೆ ಮಾಡಿತು.
ದುನಿಯಾ ಸೂರಿ ನಿರ್ದೇಶನದ ದುನಿಯಾ (2007) ಚಿತ್ರ ರಂಗಾಯಣ ರಘು ಅವರಿಗೆ ಸಾಕಷ್ಟು ಹೆಸರು ತಂದುಕೊಡ್ತು. ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಗಾಳಿಪಟ, ಜಂಗ್ಲಿ, ಮಿಲನ, ಪರಮಾತ್ಮ ಚಿತ್ರಗಳೂ ಹೆಸರು ತಂದುಕೊಟ್ಟಿವೆ.


Click it and Unblock the Notifications











