ಶರಣ್ ಹೆಸರು ಜೊತೆ ಸ್ಟಾರ್ ಬೇಡ.! ಹೆಸರಿನ ಹಿಂದೆ ರೋಚಕ ಕಥೆ
Recommended Video

'ನಾನು ನಾಯಕನಾದರೂ ಕಾಮಿಡಿ ಹೀರೋನೇ. ಹಾಸ್ಯ ಬಿಟ್ಟು ನಾಯಕನಾಗುವ ಶಕ್ತಿ ನನಗಿದೆ ಎಂದು ನಾನು ಭಾವಿಸಿಲ್ಲ. ಮಾತ್ರವಲ್ಲ ನನ್ನ ಹೆಸರು ಜೊತೆಗೆ ಯಾವುದೇ ಸ್ಟಾರ್ ಹಾಕುವ ಆಸಕ್ತಿಯೂ ನನಗಿಲ್ಲ' ಎಂದಿದ್ದಾರೆ ಶರಣ್.
'ನನ್ನ ಹೆಸರಿನ ಶಕ್ತಿಯ ಬಗ್ಗೆ ತಿಳಿಯಬೇಕಾದರೆ ನನಗೆ ಈ ಹೆಸರು ಯಾಕೆ ಇಟ್ಟರು ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು' ಎಂದರು ಶರಣ್. ಹಾಗಾದರೆ ಶರಣ್ ಹುಟ್ಟಿನ ಹಿಂದಿನ ಕತೆ ಕೇಳಲೇಬೇಕು.
ಆಗ ಶರಣ್ ತಂದೆ ತಾಯಿ ಇದ್ದಿದ್ದು ಗುಬ್ಬಿ ಸಂಸ್ಥೆಯ ಯಾದಗಿರಿ ಕ್ಯಾಂಪ್ ನಲ್ಲಿ. ಗುಲ್ಬರ್ಗದಲ್ಲಿ ಕ್ಯಾಂಪ್ ಮುಗಿಸಿ ಯಾದಗಿರಿಗೆ ಹೊರಟ ವೇಳೆ ಶರಣ್ ತಾಯಿ ಅಲ್ಲಿ ಶರಣ ಬಸವೇಶ್ವರನಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರಂತೆ. ಅದಕ್ಕೆ ಕಾರಣ, ಆಕೆಯ ಹೊಟ್ಟೆಯಲ್ಲಿರುವ ಮಗು ಅಪಾಯಕಾರಿ ಪರಿಸ್ಥಿತಿಯಲ್ಲಿರುವುದಾಗಿ ಡಾಕ್ಟರುಗಳು ಸೂಚನೆ ನೀಡಿದ್ದರು.

ಮಗುವನ್ನು ಅಬಾರ್ಟ್ ಮಾಡಿದರೆ ಮಾತ್ರ ತಾಯಿ ಜೀವಕ್ಕೆ ಸೇಫು ಎನ್ನುವುದು ವೈದ್ಯರ ವಾದ. ಹುಟ್ಟುವ ಮಗು ಮಾತ್ರವಲ್ಲ ತಾಯಿ ಕೂಡ ಸಾಯುತ್ತಾಳೆ ಎಂದು ಗೊತ್ತಿದ್ದರೂ ಶರಣ್ ತಾಯಿ ಮಗುವನ್ನು ತೆಗೆಸಲು ಒಪ್ಪಿರಲಿಲ್ಲವಂತೆ. ಕೊನೆಗೆ ತಿಂಗಳು ತುಂಬಿದಾಗ ಡಾಕ್ಟರ್ ಸಿಸೇರಿಯನ್ ಗೆ ಸೂಚಿಸಿದ್ದಾರೆ. ಅಂದು ಸಿಸೇರಿಯನ್ ಎಂದರೆ ಈಗಿನ ಹಾಗೆ ಸಾಮಾನ್ಯ ವಿಚಾರವಲ್ಲ. ಸಾವು ಬದುಕಿನ ಪ್ರಶ್ನೆಯೇ ಸರಿ.
ಹಾಗಾಗಿಯೇ ಆ ತಾಯಿ ಶರಣ ಬಸವೇಶ್ವರನನ್ನು ಪ್ರಾರ್ಥಿಸಿದ್ದಾರೆ.ಮಾತ್ರವಲ್ಲ ನನಗೆ ಮಗ ಹುಟ್ಟಿದರೆ ಆತನಿಗೆ ನಿನ್ನದೇ ಹೆಸರು ಇರಿಸುತ್ತೇನೆ ಎಂದು ಬೇಡಿಕೊಂಡರಂತೆ. ತಾಯಿಯ ಹರಕೆಯಂತೇ ಗಂಡು ಮಗುವಿನ ಸುಖಪ್ರಸವವಾಯಿತು. ಅಮ್ಮ ಮಗನನ್ನು 'ಶರಣಾ..' ಎಂದು ಕರೆದರು. ಇಂದು ಅವರು ಚಿತ್ರರಂಗದ ಶರಣ್ ಆಗಿದ್ದಾರೆ.
ಈ ಕತೆ ಹೇಳಿದ ಬಳಿಕ ಶರಣ್ ಹೇಳುತ್ತಾರೆ, 'ಹುಟ್ಟುವಾಗಲೇ ಅಷ್ಟೊಂದು ಹೋರಾಡಿ ಬದುಕಿ ಬರಲು ನನಗೆ ಶರಣ್ ಎಂಬ ಹೆಸರು ಸಾಕಾಗಿತ್ತು. ಇನ್ನು ಚಿತ್ರರಂಗದಲ್ಲಿ ನೆಲೆ ನಿಲ್ಲಲು ಬೇರೆ ಸ್ಟಾರ್ ಸೂಚಕವನ್ನೇಕೆ ಬಯಸಲಿ?' ಎನ್ನುವುದು ಅವರ ಪ್ರಶ್ನೆ. ಅವರ ದೃಷ್ಟಿಯಲ್ಲಿ ನೋಡಿದರೆ ಅದೇ ಸರಿ.

ಅಧ್ಯಕ್ಷ ಇನ್ ಅಮೆರಿಕಾ
ಶರಣ್ ಹೊಸ ಸಿನಿಮಾಗೆ 'ಅಧ್ಯಕ್ಷ ಇನ್ ಅಮೆರಿಕಾ' ಎಂಬ ಹೆಸರಿಡುವುದು ಬಹುತೇಕ ಖಚಿತವಾಗಿದೆ. ಈಗಾಗಲೇ 45ದಿನಗಳ ಚಿತ್ರೀಕರಣ ಪೂರ್ತಿಗೊಳಿಸಿರುವ ಚಿತ್ರ ಇನ್ನೇನು ತಿಂಗಳೊಳಗೆ ತೆರೆಗೆ ಬರಲಿದೆ. ಚಿತ್ರಕ್ಕೆ ರಾಗಿಣಿ ನಾಯಕಿಯಾಗಿದ್ದು ಪ್ರಥಮ ಬಾರಿಗೆ ಒಂದಾಗುತ್ತಿರುವ ಈ ಜೋಡಿಯ ಬಗ್ಗೆ ಸಿನಿ ರಸಿಕರಲ್ಲಿ ಕುತೂಹಲ ಮೂಡಿದೆ. ಚಿತ್ರದ ಹೆಸರಿಗೆ ತಕ್ಕಂತೆ ಸಿನಿಮಾದ 60%ದಷ್ಟು ಭಾಗವನ್ನು ವಿದೇಶದಲ್ಲೇ ಚಿತ್ರೀಕರಿಸಲಾಗಿದೆ. ಸಂಭಾಷಣೆಕಾರ ಯೋಗಾನಂದ್ ಮುದ್ದಾನ್ ಪ್ರಥಮ ಬಾರಿಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











