ಕೊರೊನಾ ವೈರಸ್ ಹಾವಳಿ: ನಟ ಶಿವರಾಜ್ ಕುಮಾರ್ ಶಬರಿಮಲೆ ಯಾತ್ರೆ ರದ್ದು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಶಬರಿಮಲೆ ಯಾತ್ರೆಯನ್ನು ರದ್ದುಗೊಳಿಸಿದ್ದಾರೆ. ಪ್ರತಿ ಬಾರಿ ಶಬರಿಮಲೆಗೆ ತಮ್ಮ ತಂಡದೊಂದಿಗೆ ತೆರಳುವ ಶಿವರಾಜ್ ಕುಮಾರ್ ಈ ಬಾರಿ ಕೂಡ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಹೊರಡಲು ನಿರ್ಧರಿಸಿದ್ದರು. ಆದರೆ ಅದೀಗ ರದ್ದುಗೊಂಡಿದೆ.
ಕೊರೊನಾ ವೈರಸ್ ಭೀತಿಯ ಕಾರಣದಿಂದ ಶಿವರಾಜ್ ಕುಮಾರ್ ಮುನ್ನೆಚ್ಚರಿಕೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಶಿವಣ್ಣ, ನಿರ್ದೇಶಕ ರಘುರಾಮ್ ಮತ್ತು ಅವರ ಬಳಗ ಫೆಬ್ರವರಿ 21ರಂದು ಮಾಲೆ ಧರಿಸಿತ್ತು. ಮಾರ್ಚ್ 15ರ ಸಂಜೆ ಶಬರಿಮಲೆ ಯಾತ್ರೆಗೆ ತೆರಳು ನಿರ್ಧರಿಸಿದ್ದರು. ಯಾತ್ರೆ ಮುಗಿಸಿ ಮಾರ್ಚ್ 18ರಂದು ವಾಪಸ್ ಆಗಬೇಕಿತ್ತು.

ಕೇರಳದಲ್ಲಿ ಕೊರೊನಾ ಭೀತಿ
ಆದರೆ, ಕೊರೊನಾ ವೈರಸ್ ಭೀತಿಯ ಕಾರಣದಿಂದ ಕೇರಳದಲ್ಲಿ ಅನೇಕ ದೇವಸ್ಥಾನಗಳು ಕೂಡ ಬಂದ್ ಆಗಿವೆ. ಶಬರಿಮಲೆ ದೇವಸ್ಥಾನ ಮಂಡಳಿ ಕೂಡ ಭಕ್ತರು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಾರದೆ ಇರುವುದು ಒಳ್ಳೆಯದು ಎಂದು ತಿಳಿಸಿತ್ತು. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

ಭಕ್ತರಿಗೆ ಪ್ರವೇಶವಿಲ್ಲ
ಶಬರಿಮಲೆಯಲ್ಲಿ ಮಾಸಿಕ ಪೂಜಾ ಕೈಂಕರ್ಯಗಳನ್ನು ನಡೆಸುವ ಉದ್ದೇಶದಿಂದ ಶುಕ್ರವಾರ ಬಾಗಿಲು ತೆರೆಯಲಾಗಿತ್ತು. ಆದರೆ ಬಾಗಿಲು ತೆರೆದಿದ್ದರೂ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ ಭಕ್ತರು ದೇವಸ್ಥಾನಕ್ಕೆ ಬರುವುದು ಬೇಡ ಎಂದು ಮಂಡಳಿ ತಿಳಿಸಿದೆ.

ನಾಳೆ ಮಾಲೆ ತೆಗೆಯಲಿದ್ದಾರೆ
ಭಕ್ತರು ದೇವಸ್ಥಾನಕ್ಕೆ ಬರುವುದು ಬೇಡ ಎಂದು ಮಂಡಳಿಯೇ ತಿಳಿಸಿರುವ ಕಾರಣದಿಂದ ಶಿವರಾಜ್ ಕುಮಾರ್ ಉದ್ದೇಶಿತ ಯಾತ್ರೆಯನ್ನು ಕೈಬಿಟ್ಟಿದ್ದಾರೆ. ಜಾಲಹಳ್ಳಿ ಕ್ರಾಸ್ನಲ್ಲಿರುವ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಾಲೆ ತೆಗೆಯಲಿದ್ದಾರೆ ಎನ್ನಲಾಗಿದೆ.
ಮನೆಯವರ ಜತೆಗಿರಿ
ಶಬರಿಮಲೆ ಯಾತ್ರೆಯನ್ನು ರದ್ದುಗೊಳಿಸಿದ ಬಳಿಕ ಶಿವರಾಜ್ ಕುಮಾರ್ ಒಂದು ಸಾಲಿನ ಸಂದೇಶವನ್ನು ನೀಡಿದ್ದಾರೆ. ಬಿಳಿ ಅಂಗಿ, ಪಂಚೆಯಲ್ಲಿ ಕುಳಿತಿರುವ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 'ಮನೆಯಲ್ಲಿರಿ, ಮನೆಯವರ ಜೊತೆಗಿರಿ' ಎಂದು ಅವರು ಸಲಹೆ ನೀಡಿದ್ದಾರೆ.


Click it and Unblock the Notifications











