ಕೊರೊನಾ ಸಂಕಷ್ಟ; ನೆರವಿಗೆ ಧಾವಿಸಿದ ನಟ ಶ್ರೀಮುರಳಿ
ಕೊರೊನಾ ಎರಡನೇ ಅಲೆಗೆ ಇಡೀ ದೇಶ ತತ್ತರಿಸಿ ಹೋಗಿದೆ. ಸೋಂಕಿತರು ಚಿಕಿತ್ಸೆ, ಬೆಡ್, ಆಕ್ಸಿಜನ್ ಗಾಗಿ ಪರದಾಡುತ್ತಿದ್ದಾರೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಕೊರೊನಾ ಪರಿಸ್ಥಿತಿಯಿಂದ ಪಾರಾಗಲು ದೇಶ ಹರಸಾಹಸ ಪಡುತ್ತಿದೆ.
ಈ ಸಮಯದಲ್ಲಿ ಅನೇಕರು ಮುಂದೆ ಬಂದು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕೆಲವು ಸಿನಿ ಸೆಲೆಬ್ರಿಟಿಗಳು ಸಹ ಸಹಾಯಕ್ಕೆ ಧಾವಿಸಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನಟ ಶ್ರೀಮುರಳಿ ನೆರವಿಗೆ ನಿಂತಿದ್ದಾರೆ. ಕೊರೊನಾ ಫ್ರೆಂಟ್ ಲೈನ್ ಕೆಲಸಗಾರರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಜೀವವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಶ್ರೀಮುರಳಿ ಆಹಾರ ವಿತರಿಸಿದ್ದಾರೆ. ಬೆಂಗಳೂರಿನ ಕೆಲವು ಆಸ್ಪತ್ರೆಗಳಿಗೆ ರೋರಿಂಗ್ ಸ್ಟಾರ್ ಆಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಸೋಂಕಿತರ ಸೇವೆ ಮಾಡುತ್ತಿರುವ ಬೆಂಗಳೂರಿನ 5 ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಆಹಾರ ವ್ಯವಸ್ಥೆ ಒದಗಿಸಿದ್ದಾರೆ.

ಕೆ.ಸಿ ಜನರಲ್ ಆಸ್ಪತ್ರೆ, ಇ ಎಸ್ ಐ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿ.ವಿ ರಾಮನ್ ಜನರಲ್ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಒದಗಿಸಿದ್ದಾರೆ.
ಈಗಾಗಲೇ ಸಾಕಷ್ಟು ಮಂದಿ ಸಿನಿ ಸೆಲೆಬ್ರಿಟಿಗಳು ಕಷ್ಟದಲ್ಲಿರೋರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. ನಟ ಅರ್ಜುನ್ ಗೌಡ ಆಂಬುಲೆನ್ಸ್ ಸೇವೆ ಮತ್ತು ಅಗತ್ಯ ಇರೋರಿಗೆ ಆಕ್ಸಿಜನ್ ಸಿಲಿಂಡರ್ ಒದಗಿಸುತ್ತಿದ್ದಾರೆ. ಸಾಹಿತಿ ಮತ್ತು ನಿರ್ದೇಶಕ ಕವಿರಾಜ್, ಭುವನ್ ಪೊನ್ನಣ್ಣ ನಟಿ ರಾಗಿಣಿ, ಸುದೀಪ್ ಸೇರಿದಂತೆ ಅನೇಕರು ಸಂಕಷ್ಟದ ಸ್ಥಿತಿಯಲ್ಲಿ ನೆರವು ನೀಡುತ್ತಿದ್ದಾರೆ.


Click it and Unblock the Notifications











