'ಉಗ್ರಂ' ಶ್ರೀಮುರಳಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್
ಬಾಕ್ಸ್ ಆಫೀಸಲ್ಲಿ ಸೆಂಚುರಿ ಪೂರೈಸಿದ 'ಉಗ್ರಂ' ಚಿತ್ರದ ಬಳಿಕ ನಟ ಶ್ರೀಮುರಳಿ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಮನೆ ಮಾಡಿತ್ತು. ಇದೀಗ ಶ್ರೀಮುರಳಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
'ಆನೆಪಟಾಕಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಚಂದ್ರಶೇಖರ್ ಬಂಡಿಯಪ್ಪ ಈ ಬಾರಿ ಶ್ರೀಮುರಳಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ಹೊಸ ಅರ್ಥ ಬರುವಂತಹ ಶೀರ್ಷಿಕೆಯನ್ನು ಇಡಲಾಗಿದೆ. 'ರಥಾವರ' ಎಂಬುದು ಶ್ರೀಮುರಳಿ ಹೊಸ ಚಿತ್ರದ ಹೆಸರಂತೆ.

ಅದರ ಅರ್ಥ ಏನೆಂದು ಗೊತ್ತಾಗಬೇಕಾದರೆ ಚಿತ್ರಮಂದಿರಕ್ಕೆ ಬರಲೇಬೇಕು ಎನ್ನುತ್ತಾರೆ ಚಂದ್ರಶೇಖರ್. ಇದೊಂದು ಪಕ್ಕಾ ಆಕ್ಷನ್ ಕಮ್ ಲವ್ ಸ್ಟೋರಿಯಂತೆ. ಮಂಜು ಎಂಬುವವರು ನಿರ್ಮಿಸುತ್ತಿರುವ ಈ ಚಿತ್ರದ ಪ್ರಮುಖ ಆಕರ್ಷಣೆ ಜಿಮ್ನಾಸ್ಟಿಕ್ ಆಕ್ಷನ್.
ತಮ್ಮ ಪಾತ್ರಕ್ಕಾಗಿ ಶ್ರೀಮುರಳಿಯೂ ಸಾಕಷ್ಟು ಬೆವರು ಹರಿಸುತ್ತಿದ್ದಾರೆ ಎಂಬುದು ಸದ್ಯದ ಮಾಹಿತಿ. ಇದೊಂದು ಆಕ್ಷನ್ ಪ್ರಧಾನ ಚಿತ್ರವಾದ ಕಾರಣ ಅದನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರಕ್ಕೆ ಇನ್ನೂ ನಾಯಕಿ ಪಕ್ಕಾ ಆಗದಿದ್ದರೂ ಅಮೂಲ್ಯಾ ಅಥವಾ ರಾಧಿಕಾ ಪಂಡಿತ್ ಹೆಸರು ಕೇಳಿಬಂದಿದೆ. ಈ ಚಿತ್ರಕ್ಕೆ ಧರ್ಮವಿಶ್ ಸಂಗೀತ ಇರಲಿದ್ದು, ಪಾತ್ರವರ್ಗದಲ್ಲಿ ರಂಗಾಯಣ ರಘು, ಸಾಧು ಕೋಕಿಲ ಮುಂತಾದವರು ಇರುತ್ತಾರೆ.


Click it and Unblock the Notifications











