ನಟ ಸುದೀಪ್ ಎಡಗೈಗೆ ಕಾಣದ ಬಲಗೈ ಸಮಾಚಾರ
ಬಲಗೈಲಿ ಕೊಟ್ಟದ್ದು ಎಡಗೈಗೆ ಕಾಣಬಾರದು ಎಂಬ ಗಾದೆ ಮಾತಿಗೆ ಅನ್ವರ್ಥ ಎಂಬಂತೆ ಸುದೀಪ್ ಸದ್ದಿಲ್ಲದಂತೆ ಸಮಾಜ ಕೈಂಕರ್ಯ ಮಾಡುತಿದ್ದಾರೆ. ಅವರ ಈ ಸೇವಾಕಾರ್ಯ ಯಾವುದೇ ಪ್ರಚಾರವಿಲ್ಲದಂತೆ ಎಲ್ಲೋ ಹಚ್ಚಿದ ಗಂಧದ ಕಡ್ಡಿಯಂತೆ ಪರಿಮಳ ಬೀರುತ್ತಿದೆ. ತಮ್ಮ ಪಾಡಿಗೆ ತಾವು ಕೆರೆಯ ನೀರನು ಕೆರೆಗೆ ಚೆಲ್ಲುತ್ತಿದ್ದಾರೆ.
ಸುದೀಪ್ ಒಬ್ಬ ಮಹಾನ್ ನಟ ಎಂಬುದಷ್ಟೇ ಗೊತ್ತು. ಆದರೆ ಅವರೊಬ್ಬ ಮಹಾನ್ ಸಮಾಜ ಸೇವಕ ಎಂಬುದು ಬಹಳಷ್ಟು ಮಂದಿಗೆ ಖಂಡಿತ ಗೊತ್ತಿರಲಿಕ್ಕಿಲ್ಲ. ಅವರ ಸೇವಾ ಕಾರ್ಯಗಳು ಒಂದೆರಡಲ್ಲ. ಅವರು ಒಂದು ವೃದ್ಧಾಶ್ರಮವನ್ನು ಮುನ್ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವೃದ್ಧಾಶ್ರಮವನ್ನು ಸುದೀಪ್ ತುಂಬ ಅಕ್ಕರೆಯಿಂದ ನೀರೆಯುತ್ತಾ ಪೋಷಿಸುತ್ತಿದ್ದಾರೆ. ತಮ್ಮ ಸಂಪಾದನೆಯ ನಾಲ್ಕನೆ ಒಂದರಷ್ಟು ಅಂಶವನ್ನು ಈ ವೃದ್ಧಾಶ್ರಮಕ್ಕೆ ವಿನಿಯೋಗಿಸುತ್ತಿರುವುದು ವಿಶೇಷ.
ಹಾಗೆಯೇ ಬೆಂಗಳೂರಿನಲ್ಲಿ ನಾಲ್ಕು ಮಂದಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಆ ನಾಲ್ಕು ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಅವರಲ್ಲಿ ಇಬ್ಬರು ಈಗ ಇಂಜಿನಿಯರಿಂಗ್ ಪದವೀಧರರು. ಸುದೀಪ್ ಕಣ್ಣುಗಳಲ್ಲಿ ಸಾರ್ಥಕ ಭಾವ ತುಂಬಿ ಬರುತ್ತದೆ.
ಇದಿಷ್ಟೇ ಅಲ್ಲದೆ ಆರ್ಥಿಕ ಶಕ್ತಿಯಿಲ್ಲದ 40ಕ್ಕೂ ಹೆಚ್ಚು ಜೋಡಿಗಳಿಗೆ ಕಂಕಣಭಾಗ್ಯ ಕಲ್ಪಿಸಿದ್ದಾರೆ. ಹೃದಯ ರೋಗಿಗಳ ಬೈಪಾಸ್ ಸರ್ಜರಿಗೂ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಒಂದೆಡೆ ನಟನಾಗಿ ಪ್ರೇಕ್ಷಕರನ್ನು ರಂಜಿಸುತ್ತಾ ಮತ್ತೊಂದೆಡೆ ನೊಂದವರ ಕಣ್ಣೀರು ಒರೆಸುತ್ತಿರುವ ಕಿಚ್ಚ ಸುದೀಪ್ ಅವರಿಗೆ ಹ್ಯಾಟ್ಸ್ ಆಫ್. (ಒನ್ ಇಂಡಿಯಾ ಕನ್ನಡ)


Click it and Unblock the Notifications












