ಬೆಚ್ಚಿಬೀಳಿಸಿದ ನಟ ಉದಯ್ ವಿಧಿವಿಜ್ಞಾನ ಪರೀಕ್ಷೆ
ತೆಲುಗು ನಟ ಉದಯ್ ಕಿರಣ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಗೊತ್ತೇ ಇದೆ. ಇದೀಗ ಅವರ ಮರಣೋತ್ತರ ಪರಿಕ್ಷೆ ವರದಿ ಹೊರಬಿದ್ದಿದೆ. ಹೈದರಾಬಾದಿನ ಉಸ್ಮಾನಿಯಾ ಆಸ್ಪತ್ರೆ ವೈದ್ಯರು ಶವಪರೀಕ್ಷೆಯನ್ನು ಮಾಡಿದ್ದು ಅದರ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ವಿಧಿವಿಜ್ಞಾನ ಪರೀಕ್ಷೆಯ ವರದಿಯಲ್ಲಿನ ಕೆಲವು ಅಂಶಗಳು ಬೆಚ್ಚಿಬೀಳಿಸುವಂತಿವೆ. ಈ ಹಿಂದೆ ಎರಡು ಬಾರಿ ಉಯದ್ ಕಿರಣ್ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ವೈದ್ಯರು ಗುರುತಿಸಿದ್ದಾರೆ. ಉದಯ್ ಎಡಗೈ ಮಣಿಕಟ್ಟಿಗೆ ಬ್ಲೇಡ್ ನಲ್ಲಿ ಕುಯ್ದುಕೊಂಡ ಗುರುತುಗಳಿವೆ. [ತೆಲುಗು ನಟ ಉದಯ ಕಿರಣ್ ಆತ್ಮಹತ್ಯೆ]
ಭಾನುವಾರ ರಾತ್ರಿ (ಜ.5, 2014) ಸರಿಸುಮಾರು 10.30ರಿಂದ 11ಗಂಟೆ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಧಿವಿಜ್ಞಾನ ಪರೀಕ್ಷೆಯ ವರದಿಯನ್ನು ಇನ್ನೂ ಪೊಲೀಸರಿಗೆ ರವಾನಿಸಿಲ್ಲ ಎಂದು ಉಸ್ಮಾನಿಯಾ ಫೋರೆನ್ಸಿಕ್ ವೈದ್ಯರಾದ ಅಮ್ಮಾಣಿ ತಿಳಿಸಿದ್ದಾರೆ.ಫೋರೆನ್ಸಿಕ್ ವರದಿಯಲ್ಲಿನ ವಿವರಗಳ ಮೇಲೆ ಕಣ್ಣಾಡಿಸಿದರೆ ಕೆಲವು ಆಸಕ್ತಿಕರ ವಿಷಯಗಳು ತಿಳಿಯುತ್ತವೆ. ಉದಯ್ ಕಿರಣ್ ಬಹಳ ಮೃಧು ಸ್ವಭಾವದವನಾಗಿದ್ದ. ಮನಸ್ಸಿಗೆ ಭರಿಸಲಾಗದಂತಹ ಪರಿಸ್ಥಿತಿ ಎದುರಾದರೆ ಆತ್ಮಹತ್ಯೆಗೆ ಪ್ರಯತ್ನಿಸುವ ಗುಣದವನು. ಈ ಹಿಂದೆ ಎರಡು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂಬುದನ್ನೂ ಫೋರೆನ್ಸಿಕ್ ವರದಿ ಹೇಳುತ್ತದೆ.
ಜೂನ್ 26, 1980ರಲ್ಲಿ ಜನಿಸಿದ ಉದಯ್ ಕಿರಣ್ ಓದಿದ್ದು ಬಿ.ಕಾಂ. ಸಿಕಿಂದ್ರಾಬಾದ್ ನಲ್ಲಿನ ವೆಸ್ಲಿ ಕಾಲೇಜಿನಲ್ಲಿ ಓದುವಾಗಲೇ ಮಾಡೆಲಿಂಗ್ ಕಡೆಗೆ ಆಕರ್ಷಿತನಾಗಿದ್ದ. ಆ ಬಳಿಕ 'ಚಿತ್ರಂ' ಸಿನಿಮಾ ಮೂಲಕ ಟಾಲಿವುಡ್ ಬೆಳ್ಳಿಪರದೆ ಅಡಿಯಿಟ್ಟರು. ಮೂರು ಹಿಟ್ ಚಿತ್ರಗಳನ್ನು ಕೊಡುವ ಮೂಲಕ ಹ್ಯಾಟ್ರಿಕ್ ಹೀರೋ ಅನ್ನಿಸಿಕೊಂಡಿದ್ದರು.


Click it and Unblock the Notifications












