ಆಕ್ಷನ್ ಕಟ್ ಗೆ ಮರಳಿದ ರಿಯಲ್ ಸ್ಟಾರ್ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳಿ ಸುದೀರ್ಘ ಸಮಯವಾಗುತ್ತಾ ಇದೆ. ಅವರ ಅಭಿಮಾನಿಗಳು ಅವರ ಅಭಿನಯಕ್ಕಿಂತಲೂ ಅವರ ನಿರ್ದೇಶನವನ್ನು ಹೆಚ್ಚಾಗಿ ಮೆಚ್ಚಿಕೊಂಡಿದ್ದರು. ಅವರು ಇನ್ನಷ್ಟು ಚಿತ್ರಗಳನ್ನು ನಿರ್ದೇಶಿಸಿದರೆ ಸೂಪರ್ ಆಗಿರುತ್ತದೆ ಎಂಬುದು ಅವರ ಅಭಿಮತ.
ಅದೇನೋ ಹೇಳ್ತಾರಲ್ಲ ಹೊಸ ಗಾದೆ ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗೆ ಬಂದಿದ್ದೂ ಡಯಾಬಿಟೀಸು ಎಂಬಂತೆ ರಿಯಲ್ ಸ್ಟಾರ್ ಉಪ್ಪಿ ಮತ್ತೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. 'ಸೂಪರ್' ಚಿತ್ರದಲ್ಲಿ ರಾಜಕೀಯ 2030ರ ವೇಳೆಗೆ ಭಾರತ ಸೂಪರ್ ಪವರ್ ರಾಷ್ಟ್ರವಾಗುವ ಪರಿಯನ್ನು ತಮ್ಮ ಚಿತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು.
ಬರೋಬ್ಬರಿ ಹತ್ತು ವರ್ಷಗಳ ಬಳಿಕ ನಿರ್ದೇಶಿಸಿದ್ದ ಈ ಚಿತ್ರ ಬಾಕ್ಸಾಫೀಸರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಬಾರಿಯೂ ಉಪ್ಪಿ ಹೊಸ ಕಲ್ಪನೆಯೊಂದಿಗೆ ಫೀಲ್ಡಿಗಿಳಿಯಲಿದ್ದಾರೆ. ಈ ಬಾರಿಯೂ ಅವರು ರಾಜಕೀಯ ಕಥಾವಸ್ತುವನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಈ ಚಿತ್ರವನ್ನು ಉಪ್ಪಿ ಶ್ರೀಮತಿ ಪ್ರಿಯಾಂಕಾ ಅವರು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಟೈಟಲ್, ಪಾತ್ರವರ್ಗದ ಬಗ್ಗೆ ಉಪ್ಪಿ ಬಾಯ್ಬಿಡುತ್ತಿಲ್ಲ. ಇನ್ನೊಂದು ತಿಂಗಳು ಅಂದರೆ ಸೆಪ್ಟೆಂಬರ್ ವರೆಗೂ ಕಾದುನೋಡಿ ಎನ್ನುತ್ತಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ ಉಪೇಂದ್ರ ಪ್ರೊಡಕ್ಷನ್ಸ್ ಎಂದು ಹೆಸರಿಡಲಾಗಿದೆ.
ಸದ್ಯಕ್ಕೆ ಉಪೇಂದ್ರ ಕೂಡ ಕಲ್ಪನಾ ಹಾಗೂ ಟೋಪಿವಾಲಾ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಸೆಪ್ಟೆಂಬರ್ ವೇಳೆಗೆ ಈ ಎರಡೂ ಚಿತ್ರಗಳು ಮುಗಿಯಲಿದ್ದು ಉಪ್ಪಿ ನಿರ್ಮಾಣ ಸಂಸ್ಥೆಯ ಚಿತ್ರ ಸೆಟ್ಟೇರಲಿದೆ. ಉಪ್ಪಿ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 18ರಂದು ಸೆಟ್ಟೇರುವ ಸಾಧ್ಯತೆಗಳಿವೆ.
ಇಬ್ಬರಿಗೂ ಸಿನೆಮಾ ಕ್ಷೇತ್ರವೇನು ಹೊಸದಲ್ಲಿ. ಇಬ್ಬರಿಗೂ ಬೇರೆಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹಾಗಾಗಿ ಇನ್ನೂ ಚೆನ್ನಾಗಿ ಮಾರ್ಕೆಟಿಂಗ್ ಮಾಡಬಹುದು ಎಂಬ ಉದ್ದೇಶ ಪ್ರಿಯಾಂಕಾ ಅವರದು. ನೋಡೋಣ ಉಪ್ಪಿ ನಿರ್ದೇಶನದ ಚಿತ್ರ ಹೇಗಿರುತ್ತದೆ ಎಂದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











