ರವಿಚಂದ್ರನ್ಗೆ ತಾನು ವೀಕ್ ಎನಿಸಲು ಕಾರಣ ಪುನೀತ್ ರಾಜ್ಕುಮಾರ್!
ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎನ್ನುವುದನ್ನು ಬಾಯಲ್ಲಿ ಎಷ್ಟು ಬಾರಿ ಹೇಳಿದರು ಮನಸಾರೆ ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಇನ್ನು ಪುನೀತ್ ರಾಜ್ಕುಮಾರ್ ಬಗ್ಗೆ ಚಿತ್ರರಂಗದ ಸಾಕಷ್ಟು ಮಂದಿ ಪ್ರತಿ ನಿತ್ಯ ಮಾತಾಡುತ್ತಲೇ ಇದ್ದಾರೆ.
ಪುನೀತ್ ರಾಜ್ಕುಮಾರ್ ಒಡನಾಡಿಗಳು ಅವರ ಒಂದಲ್ಲಾ ಒಂದು ವಿಚಾರಗಳ ಬಗ್ಗೆ ಮಾತನಾಡುತ್ತಾ, ಅಪ್ಪು ಬಗ್ಗೆ ಹೇಳಿಕೊಳ್ಳುತ್ತಾ ಇರುತ್ತಾರೆ.
ಸದ್ಯ ಹಿರಿಯ ನಟ ರವಿಚಂದ್ರನ್ ಕೂಡ ಅಪ್ಪು ಬಗ್ಗೆ ಮಾತನಾಡಿದ್ದಾರೆ. ಪುನೀತ್ ರಾಜ್ಕುಮಾರ್ ನಿಧನದ ದಿನ ರವಿಚಂದ್ರನ್ ಅವರ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

ಅಪ್ಪು ಸಾವಿನ ದಿನ ಅಮ್ಮನಿಗೆ ಆರೋಗ್ಯ ಸರಿ ಇರಲಿಲ್ಲ!
ನಟ ಪವರ್ಸ್ಟಾರ್ ಪುನೀತ್ ನಿಧನದ ದಿನ ಹೇಗಿತ್ತು ಎನ್ನುವುದನ್ನು ನಟ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಮುಗಿಲ್ ಪೇಟೆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಚಂದ್ರನ್, ಅಂದು ಮೊದಲ ಬಾರಿಗೆ ತಾನು ತುಂಬಾ ವೀಕ್ ಅನಿಸಿ ಬಿಟ್ಟಿತಂತೆ. ಅಪ್ಪು ಆಸ್ಪತ್ರೆಯಲ್ಲಿ ಇದ್ದಾನೆ ಎಂದು ತಿಳಿದಾಗ, ಮತ್ತೊಂದು ಕಡೆ ಅವರ ತಾಯಿಯ ಆರೋಗ್ಯವೂ ಸರಿ ಇರಲಿಲ್ಲವಂತೆ.

ಎಲ್ಲಾ ಮುಗಿದು ಹೋಗಿತ್ತು: ವಿ.ರವಿಚಂದ್ರನ್
" ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಡಬ್ಬಿಂಗ್ ಮುಗಿಸಿ ಬರುವಾಗ, ವಿಕ್ರಂ ಆಸ್ಪತ್ರೆ ಬಳಿ ಹೆಚ್ಚು ಜನ ನೆರೆದಿದ್ದರು. ಏನಾಗಿದೆ ಎಂದು ವಿಚಾರಿಸಿದಾಗ, ಅಪ್ಪು ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ ಅಂತ ಗೊತ್ತಾಯಿತು. ಆ ಕಡೆಯಿಂದ ನನ್ನ ತಾಯಿಗೆ ಆರೋಗ್ಯ ಸರಿ ಇಲ್ಲ ಅಂತ ಮನೆಯಿಂದ ಫೋನ್ ಬಂದಿತ್ತು. ನಾನು ವಿಕ್ರಮ್ ಆಸ್ಪತ್ರೆಗೆ ಹೋದೆ. ಅಲ್ಲಿ ಹೋದಾಗ ಎಲ್ಲವೂ ಮುಗಿದು ಹೋಗಿದೆ ಎಂದಾಗ ಏನು ಮಾಡೋದು ಅಂತ ಗೊತ್ತಾಗಲಿಲ್ಲ. ಎಲ್ಲವೂ ಮೌನವಾಗಿತ್ತು. ಆಗ ಮೊದಲ ಬಾರಿಗೆ ನನ್ನ ಜೀವನದಲ್ಲಿ ನನಗೆ ನಾನು ವೀಕ್ ಅಂತ ಅನಿಸಿತು."

ಅಪ್ಪನೊಂದಿಗೆ ಅಪ್ಪು ಅವರನ್ನು ನೆನಪಿಸಿಕೊಂಡ ರವಿಚಂದ್ರನ್!
ಇನ್ನು ರವಿಚಂದ್ರನ್ ಅವರು ಎಲ್ಲೇ ಹೋದರು, ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ತಮ್ಮ ತಂದೆ ಎನ್. ವೀರಸ್ವಾಮಿ ಅವರನ್ನು ನೆನಪಿಸಿಕೊಂಡು, ಅವರಿಗೆ ನಮನ ಸಲ್ಲಿಸಿ ಮಾತು ಶುರು ಮಾಡುತ್ತಾರೆ. ಇದೇ ವೇಳೆ "ಪ್ರತೀ ಬಾರಿ ಅಪ್ಪನನ್ನು ನೆನಪಿಸಿ ಕೊಂಡು ಮಾತು ಆರಂಭಿಸುತ್ತಿದ್ದೆ. ಈ ಅಪ್ಪನ ಜೊತೆಗೆ ಅಪ್ಪು ಅವರನ್ನು ನೆನಪಿಸಿಕೊಳ್ಳಬೇಕಾಗಿದೆ" ಎಂದಿದ್ದಾರೆ.

ಅಪ್ಪುಗಾಗಿ ಮಿಡಿಯುತ್ತಿವೆ ಸಹಸ್ರಾರು ಹೃದಯಗಳು!
ಪುನೀತ್ ರಾಜ್ಕುಮಾರ್ ಎನ್ನುವ ವ್ಯಕ್ತಿತ್ವದ ನೆನಪು ಎಂದೂ ಅಳಿಯದ ನೆನಪು. ಅವರನ್ನು ಬಲ್ಲವರಾಗಲಿ ಅಥವಾ ಎಲ್ಲೋ ದೂರದಿಂದ ಅವರನ್ನು ನೋಡಿದವರಾಗಲಿ ಅಥವಾ ಅವರ ಬಗ್ಗೆ ಕೇಳಿದವರಾಗಲಿ ಎಂದೂ ಅವರನ್ನು ಮರೆಯಲು ಸಾಧ್ಯವಿಲ್ಲ. ಸಿನಿಮಾಗಳ ಹೊರತಾಗಿಯೂ ಅಪ್ಪು ವಿಭಿನ್ನವಾಗಿ ನಿಲ್ಲುವ ವ್ಯಕ್ತಿತ್ವ. ಹಾಗಾಗಿ ಅವರು ಬಿಟ್ಟು ಹೋಗಿರುವ ಹೆಜ್ಜೆ ಗುರುತುಗಳು ಇಂದು ಮಾತನಾಡುತ್ತಿವೆ. ಪತ್ರಿಯೊಬ್ಬರ ಹೃದಯ ಸಿಂಹಾಸನದಲ್ಲಿ ಅಪ್ಪು ಎಂದಿಗೂ ಅಜರಾಮರ ಆಗಿರುತ್ತಾರೆ.

ಪುನೀತ್ ನಮನದ ನಂತರ ಪುನೀತ್ ನೆನಪು!
ಪುನೀತ್ ರಾಜ್ಕುಮಾರ್ ಅವರ ನೆನಪಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ನಮನ ಕಾರ್ಯಕ್ರಮವನ್ನು ಮಾಡಿದೆ. ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಅಪ್ಪು ಕುರಿತು ಮಾಡನಾಡಿ ಭಾವುಕರಾದರು. ಜೊತೆಗೆ ಅಪ್ಪು ಜೊತೆಗೆ ಇದ್ದ ತಮ್ಮ ನೆನಪುಗಳನ್ನು ಹಂಚಿಕೊಂಡು ಅವರು ಮರೆಯಾಗದ ಮಾಣಿಕ್ಯ ಎನ್ನುವುದನ್ನು ಹೇಳಿದ್ದಾರೆ. ಅಪ್ಪು ಬಗ್ಗೆ ಎಷ್ಟು ಹೇಳಿದರು ಸಾಲದು. ಹಾಗಾಗಿ ಪುನೀತ್ ನಮನದ ಬಳಿಕ ಪುನೀತ್ ನೆನಪು ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಲಾಗಿದೆ. ಹೀಗೆ ಇನ್ನೂ ನೂರಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಪ್ಪು ಅವರ ನೆನಪನ್ನು ಜೀವಂತವಾಗಿಡಲು ಪ್ರತಿಯೊಬ್ಬರೂ ಮುಂದಾಗಿದ್ದಾರೆ.


Click it and Unblock the Notifications











