'ಸಿದ್ದಾರ್ಥ'ನಾಗಿ ವಿನಯ್ ರಾಜ್ ಗ್ರ್ಯಾಂಡ್ ಎಂಟ್ರಿ
ಎಲ್ಲರ ನಿರೀಕ್ಷೆಗಳು ನಿಜವಾಗಿವೆ. ಅಕ್ಷಯ ತೃತೀಯಾ ದಿನವಾದ ಶುಕ್ರವಾರ (ಮೇ.2) ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗನ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅಕ್ಷಯ ತೃತೀಯಾದಂದು ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮುಗಿಯದಂತಹ (ಅ-ಕ್ಷಯ) ಮಂಗಳಕರವಾದ ಸಿದ್ಧಿಗಳು ಉಂಟಾಗುವವು ಎಂಬ ನಂಬಿಕೆಯಿದೆ.
ಇಂತಹ ಶ್ರೇಷ್ಠವಾದ ದಿನದಂದು ವಿನಯ್ ರಾಜ್ ಅವರ ಸಿದ್ದಾರ್ಥ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ವಿನಯ್ ಚಿಕ್ಕಪ್ಪ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆರಂಭ ಫಲಕ ತೋರಿದರೆ ಮುಹೂರ್ತಕ್ಕೆ ಬರಲು ಸಾಧ್ಯವಾಗದ ಕಾರಣ ದೊಡ್ಡಪ್ಪ ಶಿವರಾಜ್ ಕುಮಾರ್ ಅವರು ದೂರದಿಂದಲೇ ಹರಸಿದ್ದಾರೆ. [ರಾಜ್ ಮೊಮ್ಮಗನ ಚಿತ್ರಕ್ಕೆ ಅಕ್ಷಯ ತೃತೀಯ ಮಹೂರ್ತ]
ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮ ಮೊಮ್ಮಗನ ಚಿತ್ರಕ್ಕೆ ಕ್ಯಾಮರಾ ಚಾಲನೆ ಮಾಡುವ ಮೂಲಕ ಚಾಲನೆ ನೀಡರು. ಇನ್ನು ಅಣ್ಣಾವ್ರು ಆಶೀರ್ವಾದ ಮೇಲಿಂದ ಇದ್ದೇ ಇದೆ. 'ಮಿಲನ'ದಂತಹ ಒಂದು ಮರೆಯದ ಮಾಣಿಕ್ಯದಂತಹ ಚಿತ್ರ ಕೊಟ್ಟ ಪ್ರಕಾಶ್ ಅವರು ಸಿದ್ದಾರ್ಥ ಚಿತ್ರದ ನಿರ್ದೇಶಕರು. ಸ್ಲೈಡ್ ನಲ್ಲಿ ಮತ್ತಷ್ಟು ವಿವರಗಳು...

ಕ್ಲಾಪ್ ಮಾಡಿದ ಪವರ್ ಸ್ಟಾರ್ ಪುನೀತ್
ಸಿದ್ದಾರ್ಥ ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲಾಪ್ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

ಮೊಮ್ಮಗನ ಚಿತ್ರಕ್ಕೆ ಪಾರ್ವತಮ್ಮ ಕ್ಯಾಮೆರಾ ಚಾಲನೆ
ಪುನೀತ್ ಆರಂಭ ಫಲಕ ತೋರಿದರೆ ಪಾರ್ವತಮ್ಮ ರಾಜ್ ಕುಮಾರ್ ಅವರು ಕ್ಯಾಮೆರಾ ಚಾಲನೆ ಮಾಡುವ ಮೂಲಕ ತಮ್ಮ ಮೊಮ್ಮಗನ ಚಿತ್ರಕ್ಕೆ ಹಸಿರು ನಿಶಾನೆ ತೋರಿಸಿದರು.

ಮಾಸ್ ಗೆಟಪ್ ನಲ್ಲಿರುವ ವಿನಯ್ ರಾಜ್
ಇದೇ ಸಂದರ್ಭದಲ್ಲಿ ಅಪ್ಪನ ಜೊತೆ ಮಗ ಪೋಸ್ ಕೊಟ್ಟ ಒಂದು ಕ್ಷಣ. ಮಾಸ್ ಗೆಟಪ್ ನಲ್ಲಿರುವ ವಿನಯ್ ಅವರನ್ನು ನೋಡುತ್ತಿದ್ದರೆ ಕ್ಲಾಸ್ ಆಡಿಯನ್ಸ್ ಗೂ ಇಷ್ಟವಾಗುವಂತಿದ್ದಾರೆ.

ಕನ್ನಡಕ್ಕೆ ಅಡಿಯಿಡುತ್ತಿರುವ ಹೊಸ ಮುಖ ಅಪೂರ್ವ
ಯಾರಿದು? ನೋಡುತ್ತಿದ್ದರೆ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಪತ್ನಿ ಅಮಲಾ ತರಹವೇ ಇದ್ದಾರೆ ಅನ್ನಿಸುತ್ತದೆ. ಆದರೆ ಈಕೆ ಸಿದ್ದಾರ್ಥ ಮೂಲಕ ಕನ್ನಡಕ್ಕೆ ಅಡಿಯಿಡುತ್ತಿರುವ ಹೊಸ ಮುಖ ಅಪೂರ್ವ. ಬೇಕಿದ್ದರೆ ಜೂನಿಯರ್ ಅಮಲಾ ಎಂದುಕೊಳ್ಳಬಹುದು.

ಹೆಂಗಿದೆ ಇಬ್ಬರ ನವ ಜೋಡಿ?
ಹೆಂಗಿದೆ ಇಬ್ಬರ ಜೋಡಿ! ಈ ಯುವ ಜೋಡಿ ನೋಡುತ್ತಿದ್ದರೆ ಮಿಲನ ಪ್ರಕಾಶ್ ಈ ಬಾರಿ ಇನ್ನೇನು ಮ್ಯಾಜಿಕ್ ಮಾಡುತ್ತಾರೋ ಎಂಬ ಕುತೂಹಲ ಇದ್ದೇ ಇದೆ.

ಪ್ರಕಾಶ್ ರಿಂದ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ
'ಮಿಲನ' ಖ್ಯಾತಿಯ ಪ್ರಕಾಶ್ ಮಾತನಾಡುತ್ತಿರುವುದು ನೋಡಿದರೆ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ಗ್ಯಾರಂಟಿ ಎಂಬಂತಿದೆ.

ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ವಿ ಹರಿಕೃಷ್ಣ
ಸ್ಯಾಂಡಲ್ ವುಡ್ ಸೆನ್ಸೇಷನಲ್ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದ್ದು, ಅವರ ಡ್ರಮ್ ಬೀಟ್ಸ್ ಗೆ ವಿನಯ್ ಹೇಗಿಲ್ಲಾ ನರ್ತಿಸಿರಬಹುದು ಎಂಬ ಊಹೆ ಈಗಿಂದಲೇ ಶುರುವಾಗಿದೆ.

ಸದಭಿರುಚಿಯ ಚಿತ್ರಗಳ ಪೂರ್ಣಿಮಾ ಎಂಟರ್ ಪ್ರೈಸಸ್
ಸದಾ ಸದಭಿರುಚಿಯ ಚಿತ್ರಗಳನ್ನೇ ಕನ್ನಡ ಪ್ರೇಕ್ಷಕರಿಗೆ ನೀಡುತ್ತಿರುವ ಪೂರ್ಣಿಮಾ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. Give me a break ಎಂಬುದು ಚಿತ್ರದ ಅಡಿಬರಹ.

ಡಾ.ರಾಜ್ ಪುಣ್ಯಭೂಮಿಯಲ್ಲಿ ಸೆಟ್ಟೇರಿದ ಸಿದ್ದಾರ್ಥ
ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಪುಣ್ಯಭೂಮಿ ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಸೆಟ್ಟೇರಿತು.


Click it and Unblock the Notifications











