ರೈತರ ಪಾಲಿಗೆ ಆಧುನಿಕ 'ಭಗೀರಥ'ನಾದ ರಾಕಿಂಗ್ ಸ್ಟಾರ್ ಯಶ್
ಅಂದುಕೊಂಡಿದ್ದನ್ನೆಲ್ಲ ಪರಿಶ್ರಮದಿಂದ ಪಡೆದುಕೊಂಡಿರುವ ಕನ್ನಡದ ಏಕೈಕ ನಟ ರಾಕಿಂಗ್ ಸ್ಟಾರ್ 'ಯಶ್'. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದೇ ಎನ್ನುವ 'ಯಶ್' ಅವರ ನಂಬಿಕೆ ಸತ್ಯವಾಗಿದೆ.
ಅಭಿನಯವಷ್ಟೇ ಅಲ್ಲದೆ ರೈತರ ಕಷ್ಟಕ್ಕೆ ಸಹಾಯ ಮಾಡಲು ಮುಂದಾಗಿದ್ದ ಆಧುನಿಕ 'ಭಗೀರಥ'ನ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರಕೃತಿ ಮಾತೆ ಅಸ್ತು ಎಂದಿದ್ದಾಳೆ. ಹತ್ತು ತಿಂಗಳಿಂದ ಯಶ್ ಮತ್ತು ತಂಡ ಶ್ರಮಿಸಿದಕ್ಕೆ ಪ್ರತಿಫಲ ಸಿಕ್ಕಿದ್ದು, ನಾಳೆ (ನವೆಂಬರ್ 27) ತಲ್ಲೂರು ಕೆರೆಗೆ ಯಶ್ ಮತ್ತು ರಾಧಿಕಾ ಪಂಡಿತ್ 'ಬಾಗಿನ' ಅರ್ಪಿಸಲಿದ್ದಾರೆ. ಮುಂದೆ ಓದಿರಿ....

ಯಶ್ ಪರಿಶ್ರಮಕ್ಕೆ ಸಿಕ್ಕಿತು ಫಲ
ತನ್ನ ಅಭಿನಯದಿಂದಲೇ ಕನ್ನಡ ಸಿನಿಮಾರಂಗದ ಜೊತೆಗೆ ಅಕ್ಕ-ಪಕ್ಕದ ಇಂಡಸ್ಟ್ರಿಯವರನ್ನೂ ಬೆರಗುಗೊಳಿಸಿದ್ದ ನಟ ಯಶ್ ಈಗ ರೈತರ ಪಾಲಿಗೆ ಆಧುನಿಕ ಭಗೀರಥ. ಯಶೋಮಾರ್ಗದ ಮೂಲಕ ಹತ್ತು ತಿಂಗಳ ಹಿಂದೆ ಕೊಪ್ಪಳದ ತಲ್ಲೂರು ಕೆರೆಯಲ್ಲಿ ಹೂಳೆತ್ತುವ ಪ್ರಯತ್ನ ಮಾಡಲಾಗಿತ್ತು. ಈ ಪ್ರಯತ್ನ ಯಶಸ್ಸು ಕಂಡಿದ್ದು, ಕೆರೆಯಲ್ಲಿ ಸಾಕಷ್ಟು ನೀರು ತುಂಬಿ ರೈತರಿಗೆ ಹಾಗೂ ಜಾನುವಾರುಗಳಿಗೆ ಉಪಯೋಗವಾಗ್ತಿದೆ.

ಕೊಪ್ಪಳಕ್ಕೆ "ಯಶ್ ಮತ್ತು ರಾಧಿಕಾ"
ಸತತ ಮೂರು-ನಾಲ್ಕು ವರ್ಷದಿಂದ 96 ಎಕರೆಯ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಸಂಪೂರ್ಣವಾಗಿ ಹೂಳಿನಿಂದ ತುಂಬಿದ್ದ ಕೆರೆಯ ಹೂಳನ್ನ ಕಳೆದ ಫೆಬ್ರವರಿಯಲ್ಲಿ ತೆಗೆಯಲು ಪ್ರಾರಂಭಿಸಲಾಗಿತ್ತು. ಅಂದು ಪ್ರಾರಂಭಿಸಿದ ಕೆರೆಯ ಕಾಯಕಕ್ಕೆ ಯಶ್ ರಿಂದ ಯಶಸ್ಸು ಸಿಕ್ಕಿದೆ. ಇದೇ ಸಂತಸದಲ್ಲಿ ದಂಪತಿ ಸಮೇತರಾಗಿ ತಲ್ಲೂರು ಕೆರೆಗೆ ಭೇಟಿ ನೀಡಿ ಬಾಗಿನ ಅರ್ಪಿಸಲಿದ್ದಾರೆ.

ಯಶ್ ರನ್ನ ಕೊಂಡಾಡಿದ ರೈತರು
ಕೆರೆಯ ಹೂಳೆತ್ತುವ ಕಾಯಕದ ಬೆನ್ನಲ್ಲೇ ಮಳೆಯೂ ಚೆನ್ನಾಗಿ ಆಗಿದೆ. ಆದ್ದರಿಂದ ಕೆರೆಯ ನೀರು ಹಾಗೂ ಮಳೆಯ ನೀರು ಎರಡು ಸೇರಿ ಸದ್ಯ ಹತ್ತು ಗ್ರಾಮಗಳಿಗೆ ತಲ್ಲೂರು ಕೆರೆಯಿಂದ ನೀರಿನ ವ್ಯವಸ್ಥೆಯಾಗಿದೆ. ಇದರಿಂದ ಖುಷಿಯಾಗಿರುವ ರೈತರು ಯಶ್ ರನ್ನ ಆಧುನಿಕ "ಭಗೀರಥ" ಎಂದು ಕೊಂಡಾಡಿದ್ದಾರೆ.

ಕೆರೆಯ ಜೀರ್ಣೋದ್ದಾರಕ್ಕೆ ಯಶೋಮಾರ್ಗ
ಯಶೋಮಾರ್ಗದಿಂದ 4ಕೋಟಿ ವೆಚ್ಚದಲ್ಲಿ ತಲ್ಲೂರು ಕೆರೆಯ ಅಭಿವೃದ್ದಿಯ ಕೆಲಸ ಪ್ರಾರಂಭಿಸಲಾಗಿದೆ. ಕೇವಲ ತಲ್ಲೂರು ಕೆರೆ ಮಾತ್ರವಲ್ಲದೆ ಮತ್ತಷ್ಟು ಕೆರೆಗಳ ಉದ್ಧಾರಕ್ಕಾಗಿ ಯಶೋಮಾರ್ಗ ತಂಡ ಶ್ರಮಿಸಲು ಮುಂದಾಗಿದ್ದಾರೆ. ಆರಂಭದ ಕಾಯಕದಲ್ಲೇ ಯಶಸ್ಸು ಪಡೆದಿರುವ ಯಶೋಮಾರ್ಗದ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗ್ತಿದೆ.


Click it and Unblock the Notifications











