'ಕಚಡ' ಪದದ ಅರ್ಥ ಗೊತ್ತಿರಲಿಲ್ಲ ಎಂದ ಅವಂತಿಕಾ ಶೆಟ್ಟಿ
Recommended Video

ಇತ್ತೀಚಿನ ಸಂದರ್ಶನದಲ್ಲಿ 'ರಾಜರಥ' ಚಿತ್ರದ ನಾಯಕ ನಿರೂಪ್ ಭಂಡಾರಿ, ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟಿ ಅವಂತಿಕಾ ಶೆಟ್ಟಿ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು ಕಚಡ'' ಎಂದಿದ್ದರು. ಮುಂದೆ ಇದು ದೊಡ್ಡ ವಿವಾದ ಉಂಟು ಮಾಡಿತ್ತು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಡಿಗರು 'ರಾಜರಥ' ಸಿನಿಮಾ ತಂಡದ ವಿರುದ್ಧ ಕಿಡಿಕಾರಿದ್ದರು.
ಆ ನಂತರ ಈ ಬಗ್ಗೆ ಟ್ವಿಟ್ಟರ್ ನಲ್ಲಿ ನಿರೂಪ್ ಭಂಡಾರಿ, ನಿರ್ದೇಶಕ ಅನೂಪ್ ಭಂಡಾರಿ ಕ್ಷಮೆ ಕೇಳಿದ್ದರು. ಜೊತೆಗೆ ಭಂಡಾರಿ ಸಹೋದರರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡರು. ನಿನ್ನೆ ಕಾರ್ಯಕ್ರಮದ ನಿರೂಪಕಿ Rapid ರಶ್ಮಿ ಕೂಡ ಸಾ.ರಾ.ಗೋವಿಂದು ಮುಂದೆ ನಡೆದ ಘಟನೆಗೆ ಕ್ಷಮೆ ಕೋರಿದರು.
ಇದರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಅವಂತಿಕಾ ಶೆಟ್ಟಿ ಸಹ ಕನ್ನಡಿಗರಿಗೆ ಕ್ಷಮೆ ಹೇಳಬೇಕು ಎನ್ನುವುದು ಅನೇಕರ ಆಗ್ರಹವಾಗಿತ್ತು. ಅದೇ ರೀತಿ ಇದೀಗ ಮಾಡಿದ್ದ ತಪ್ಪನ್ನು ನಟಿ ಅವಂತಿಕಾ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಮುಂದೆ ಓದಿ...

ಕ್ಷಮೆ ಕೋರಿದ ಅವಂತಿಕಾ ಶೆಟ್ಟಿ
''ನಮಸ್ಕಾರ, ಒಂದು ಹಾಸ್ಯ ಕಾರ್ಯಕ್ರಮದಲ್ಲಿ ನಾವು ತಪ್ಪಾಗಿ ಮಾತನಾಡಿದ್ದೇವೆ. ಇದರಿಂದ ತುಂಬ ಜನರಿಗೆ ಬೇಸರ ಮತ್ತು ನೋವಾಗಿದೆ. ಆದರೆ ಖಂಡಿತ ಬೇರೆಯವರಿಗೆ ನೀವು ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಆಗಿರಲಿಲ್ಲ.'' ಎಂದು ನಟಿ ಅವಂತಿಕಾ ಶೆಟ್ಟಿ ಕೈ ಮುಗಿದು ಕ್ಷಮೆ ಕೇಳಿದ್ದಾರೆ.

ಆ ಪದದ ಅರ್ಥ ಗೊತ್ತಿರಲಿಲ್ಲ
''ಸಂದರ್ಶನದ ಸಮಯದಲ್ಲಿ ನಾವು ಫಿಲ್ಮ್ ಡೈಲಾಗ್ ಹೇಳುತ್ತಿದ್ದೇವೆ ಅಂತ ನಗುತ್ತಾ ಆ ಮಾತನ್ನು ಹಾಗೆ ಹೇಳಿದ್ವಿ. ನನಗೆ ಆ ಪದ ಅಷ್ಟು ಕೆಟ್ಟದಾಗಿದೆ ಅಂತ ಗೊತ್ತಿರಲಿಲ್ಲ. ಅದರ ಅರ್ಥ ಕೂಡ ಗೊತ್ತಿರಲಿಲ್ಲ. ನಾನು ಇನ್ನೂ ಕನ್ನಡ ಸರಿಯಾಗಿ ಕಲಿತಿಲ್ಲ. ಈಗ ಕಲಿಯುತ್ತಿದ್ದೇನೆ''. - ಅವಂತಿಕಾ ಶೆಟ್ಟಿ, ನಟಿ.

ಆಸ್ಪತ್ರೆಯಲ್ಲಿ ಇದ್ದೇ
''ಎರಡು ಮೂರು ದಿನ ನಾನು ಆಸ್ಪತ್ರೆಯಲ್ಲಿ ಇದ್ದೇ ಅದಕ್ಕೆ ನನ್ನ ಫೋನ್ ಕೂಡ not reachable ಇತ್ತು. ನಮ್ಮ ತಾಯಿಗೆ ಹುಷಾರಿಲ್ಲ. ನನಗೆ ನಿನ್ನೆ ಈ ವಿಷಯ ಗೊತ್ತಾಗಿದೆ. ನಮಗೆ ತಿಳಿಯದೆ ಆಗಿರುವ ತಪ್ಪನ್ನು ನೀವು ಕ್ಷಮಿಸಬೇಕು. ಅಂತ ಕೇಳಿಕೊಳ್ಳುತ್ತೇನೆ. ಸಾರಿ, ದಯವಿಟ್ಟು ಇದನ್ನು ಕ್ಷಮಿಸಿ.'' - ಅವಂತಿಕಾ ಶೆಟ್ಟಿ, ನಟಿ.

ಭಂಡಾರಿ ಸಹೋದರರ ಕ್ಷಮೆ
ಇನ್ನು ಅನೂಪ್ ಭಂಡಾರಿ ಫಿಲ್ಮ್ ಚೆಂಬರ್ ನಲ್ಲಿ ಮಾತನಾಡಿ, ''ನಮ್ಮನ್ನ ಗೆಲ್ಲಿಸಿದ್ದು ನೀವು. ನಿಮ್ಮಿಂದಲೇ ನಾವು. ನಮಗೆ ಕನ್ನಡ ಸಿನಿಮಾ ಮತ್ತು ಕನ್ನಡ ಭಾಷೆ ಮೇಲೆ ಅಪಾರ ಗೌರವವಿದೆ. ಇದು ನಮ್ಮ ಅರಿವಿಗೆ ಬಾರದೆ ಆಗಿರುವ ತಪ್ಪು. ಮುಂದೆ ಮತ್ಯಾವತ್ತು ಈ ರೀತಿ ತಪ್ಪು ನಮ್ಮಿಂದ ಆಗಲ್ಲ. ನಾವು, ನಮ್ಮ ಕೆಲಸ ಅಂತ ಒಳ್ಳೆಯ ಸಿನಿಮಾಗಳನ್ನ ನೀಡುವ ಕಡೆ ಗಮನ ಹರಿಸುತ್ತೇವೆ. ದಯವಿಟ್ಟು ನಮ್ಮ ತಪ್ಪನ್ನ ಮನ್ನಿಸಿ'' ಎಂದು ಎದ್ದು ನಿಂತು ತಲೆ ಬಾಗಿ ಕ್ಷಮೆ ಕೇಳಿದ್ದರು.

ಮುಂದೆ ಈ ರೀತಿ ಆಗಲ್ಲ ಎಂದ Rapid ರಶ್ಮಿ
''ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮದಲ್ಲಿ ಈ ತರಹದ ಘಟನೆಗಳಿಗೆ ಯಾವುದೇ ಅವಕಾಶ ಮಾಡಿಕೊಡುವುದಿಲ್ಲ. ಆ ಕ್ಷಣದಲ್ಲಿ ನನಗೆ ಏನೂ ಹೊಳೆಯಲಿಲ್ಲ. ಕ್ಷಮಿಸಿ, ಮುಂದಿನ ದಿನಗಳಲ್ಲಿ ಏನೇ ಉತ್ತರ ಬಂದರೂ ಅದಕ್ಕೆ ಕೌಂಟರ್ ಕೊಡಲು ರೆಡಿ ಆಗಿರುತ್ತೇನೆ. ಅದರಲ್ಲೂ ಕನ್ನಡಿಗರ ಮನಸ್ಸಿಗೆ ನೋವಾಗದಂತೆ ಖಂಡಿತ ಎಚ್ಚರದಿಂದ ಇರುತ್ತೇನೆ'' ಎಂದು ನಿರೂಪಕಿ Rapid ರಶ್ಮಿ ಸಹ ಕ್ಷಮೆ ಕೇಳಿದ್ದಾರೆ.


Click it and Unblock the Notifications











