ನನಗೆ ದಯಾಮರಣ ನೀಡಿ: ಬಿಗ್ ಬಾಸ್ ಸ್ಪರ್ಧಿ, ನಟಿ ಜಯಶ್ರೀ ಮತ್ತೊಂದು ಆಘಾತಕಾರಿ ಪೋಸ್ಟ್
ಈ ಜಗತ್ತಿಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ವಿಕ್ಷಿಪ್ತ ಪೋಸ್ಟ್ ಹಾಕುವ ಮೂಲಕ ಆತಂಕ ಮೂಡಿಸಿದ್ದ ಬಿಗ್ ಬಾಸ್ ಸ್ಪರ್ಧಿ, ನಟಿ ಜಯಶ್ರೀ ರಾಮಯ್ಯ ದಯಾಮರಣಕ್ಕೆ ಬೇಡಿಕೆ ಇರಿಸಿದ್ದಾರೆ.
Recommended Video
'ಉಪ್ಪು ಹುಳಿ ಖಾರ' ಮತ್ತು 'ಕನ್ನಡ್ ಗೊತ್ತಿಲ್ಲ' ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟಿಸಿರುವ ಜಯಶ್ರೀ, ವಿಷ ಸೇವಿಸಿ ಆತ್ಮಹತ್ಯೆಗೂ ಈ ಹಿಂದೆ ಯತ್ನಿಸಿದ್ದರು ಎನ್ನಲಾಗಿದೆ. ಸುಮಾರು ಎರಡು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಜಯಶ್ರೀ, ಆರು ತಿಂಗಳಿನಿಂದ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಅದರಿಂದ ಹೊರಗೆ ಬರಲು ಅವರಿಗೆ ಸಾಧ್ಯವಾಗಿಲ್ಲ.
'ನಾನು ಎಲ್ಲವನ್ನೂ ತ್ಯಜಿಸಿದ್ದೇನೆ' ಎಂದಿದ್ದ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ. ಅದರ ಬಳಿಕ ಮತ್ತೆ ಫೇಸ್ಬುಕ್ನಲ್ಲಿ ಅವರು 'ನಾನು ಕ್ಷೇಮವಾಗಿದ್ದೇನೆ' ಎಂದು ತಿಳಿಸಿದ್ದರು. ಆದರೆ ಶನಿವಾರ ಮತ್ತೊಂದು ಹೇಳಿಕೆ ನೀಡಿದ್ದಾರೆ. ಮುಂದೆ ಓದಿ.

ಕೆಟ್ಟ ಅನುಭವ ಆಗಿದೆ
ಫೇಸ್ಬುಕ್ನಲ್ಲಿ ಕೆಲವು ನಿಮಿಷ ಲೈವ್ ಬಂದಿದ್ದ ಜಯಶ್ರೀ, ತಮಗೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ. ಆದರೆ ತೀವ್ರ ಖಿನ್ನತೆ ಕಾಡುತ್ತಿದೆ. ತಮ್ಮ ಬದುಕಿನಲ್ಲಿ ಕೆಟ್ಟ ಅನುಭವ ಆಗಿದೆ. ಅದರಿಂದ ಹೊರಬರಲು ಆಗುತ್ತಿಲ್ಲ. ತಮಗೆ ದಯಾಮರಣ ನೀಡುವಂತೆ ಕೇಳಿದ್ದಾರೆ. ವಿಡಿಯೋ ಬಳಿಕ ಮತ್ತೊಂದು ಪೋಸ್ಟ್ ಕೂಡ ಹಾಕಿದ್ದಾರೆ.

ಆರ್ಥಿಕ ಸಮಸ್ಯೆ ಇಲ್ಲ
'ನಾನು ಇದನ್ನು ಪಬ್ಲಿಸಿಟಿಗಾಗಿ ಮಾಡುತ್ತಿಲ್ಲ. ನನಗೆ ಆರ್ಥಿಕ ಸಹಾಯದ ಅಗತ್ಯವಿಲ್ಲ. ಸುದೀಪ್ ಸರ್ ಅವರಿಂದ ಒಂದು ರೂಪಾಯಿಯನ್ನೂ ನಿರೀಕ್ಷಿಸುತ್ತಿಲ್ಲ. ನನಗೆ ಬೇಕಾಗಿರುವುದು ಒಂದೇ ನನ್ನ ಸಾವು. ತುಂಬಾ ಖಿನ್ನತೆಯಲ್ಲಿದ್ದೇನೆ, ಕುಟುಂಬದ ಸಮಸ್ಯೆಗಳನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಆರ್ಥಿಕವಾಗಿ ಚೆನ್ನಾಗಿಯೇ ಇದ್ದೇನೆ. ಆದರೆ ನನಗೆಲ್ಲ ಮೋಸ ನಡೆದಿದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಆಗಬಾರದ ಘಟನೆ ಆಗಿದೆ. ಅದನ್ನು ಮರೆಯಲು ಆಗುತ್ತಿಲ್ಲ ಎಂದಿದ್ದಾರೆ.

ದಯಾಮರಣ ನೀಡಿ
ಫೇಸ್ಬುಕ್ನಲ್ಲಿ ನನಗೆ ಬಂದಿರುವ ಕಾಮೆಂಟ್ಸ್ ನೋಡುತ್ತಿದ್ದೇನೆ. ನನ್ನ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಮಾತನಾಡಲು ಬಯಸೊಲ್ಲ. ನಾನೊಬ್ಬಳು ಲೂಸರ್. ನಾನು ಹುಚ್ಚಿ, ನಾನು ಸಾಯಬೇಕು ಎಂದುಕೊಂಡಿದ್ದೇನೆ. ನಾನು ಬಯಸುತ್ತಿರುವುದು ಒಂದೇ, ನನಗೆ ದಯಾಮರಣ ನೀಡಿದರೆ ಸಾಕು. ನಾನು ಆರಾಮಾಗಿ ಇರುತ್ತೇನೆ. ನನಗೆ ದಯಾಮರಣ ನೀಡಿ. ನಾನು ಒಳ್ಳೆಯ ಹುಡುಗಿ ಅಲ್ಲ. ಪ್ಲೀಸ್ ಪ್ಲೀಸ್ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಧೈರ್ಯ ತುಂಬುವ ಪ್ರಯತ್ನ
ಜಯಶ್ರೀ ಅವರು ಶುಕ್ರವಾರ ಕೂಡ ಒಂದು ವಿಡಿಯೋ ಮಾಡಿದ್ದರು. ನನಗೆ ಬದುಕಲು ಇಷ್ಟವಿಲ್ಲ, ಸಾಯುತ್ತಿದ್ದೇನೆ ಎಂದು ಹೇಳಿದ್ದರು. ಬಳಿಕ ಅದನ್ನು ಡಿಲೀಟ್ ಮಾಡಿದ್ದರು ಎನ್ನಲಾಗಿದೆ. ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಅವರಿಗೆ ಅನೇಕರು ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆಯೂ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದರು. ಬಳಿಕ ಜಯಶ್ರೀ ತಮ್ಮ ನಿರ್ಧಾರವನ್ನು ಬದಲಿಸಿದ್ದರು. ಆದರೆ ಈಗ ಅವರು ಮತ್ತೊಂದು ವಿಡಿಯೋ ಮಾಡಿರುವುದು ಆತಂಕ ಸೃಷ್ಟಿಸಿದೆ.


Click it and Unblock the Notifications











