ಚೆಕ್ ಬೌನ್ಸ್ ಪ್ರಕರಣ: ಫೇಸ್ಬುಕ್ನಲ್ಲಿ ಪದ್ಮಜಾ ರಾವ್ ಪ್ರತಿಕ್ರಿಯೆ
ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ಆಗಿರುವ ಖ್ಯಾತ ನಟಿ ಪದ್ಮಜಾ ರಾವ್, ಸಾಮಾಜಿಕ ಜಾಲತಾಣದಲ್ಲಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ಮಾಪಕರೊಬ್ಬರಿಗೆ ಪದ್ಮಜಾ ರಾವ್ ನೀಡಿದ್ದ 40 ಲಕ್ಷ ರು. ನ ಚೆಕ್ಕು ಬೌನ್ಸ್ ಆಗಿದ್ದು, ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ನೊಟೀಸ್ಗಳಿಗೆ ಪದ್ಮಜಾ ರಾವ್ ಉತ್ತರಿಸದ ಕಾರಣ, ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿತ್ತು.
ವಾರೆಂಟ್ ಹೊರಡಿಸಲಾದ ನಂತರ ನ್ಯಾಯಾಲಯಕ್ಕೆ ಹಾಜರಾದ ಪದ್ಮಜಾ ರಾವ್ ಜಾಮೀನು ಪಡೆದಿದ್ದಾರೆ. ಇದೀಗ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಪದ್ಮಜಾ.

ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ: ಪದ್ಮಜಾ ರಾವ್
'ಈ ಸಮಯದಲ್ಲಿ ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ದೇವರ ದಯೆಯಿಂದ ಈಗ ಎಲ್ಲವೂ ಸರಿಯಾಗಿದೆ. ನನಗೆ ಗೌರವಾನ್ವಿತ ಘನ ನ್ಯಾಯಾಲಯ ಮತ್ತು ಕಾನೂನು ವ್ಯವಸ್ಥೆ ಮೇಲೆ ಸಂಪೂರ್ಣವಾದ ನಂಬಿಕೆ ಇದೆ. ಸತ್ಯಾಂಶ ಏನು ಎಂಬುವದು ಆದಷ್ಟು ಬೇಗನೆ ಎಲ್ಲರಿಗೂ ತಿಳಿಯಲಿದೆ' ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ ಪದ್ಮಜಾ ರಾವ್.

ನಾನು ನೈತಿಕವಾಗಿ ಬೆಳೆದು ಬಂದವಳು: ಪದ್ಮಜಾ ರಾವ್
'ಸದ್ಯ ಪ್ರಕರಣವು ನ್ಯಾಯಾಲಯದಲ್ಲಿ ಇರುವದರಿಂದ ನಾನೀಗ ಯಾವದೇ ಹೇಳಿಕೆ ಕೊಡುವದು ಸಮಂಜಸವಲ್ಲ. ನಾನು ಮೊದಲಿನಿಂದಲೂ ಸ್ವಪ್ರಯತ್ನದಿಂದ, ಕಠಿಣ ಪರಿಶ್ರಮದಿಂದ, ಎಲ್ಲವನ್ನೂ ಎದುರಿಸಿ, ನೈತಿಕವಾಗಿ ಬೆಳೆದು ಬಂದಿರುತ್ತೇನೆ. ಇನ್ನು ಮುಂದೆಯೂ ಹೀಗೆಯೇ ಇರುತ್ತೇನೆ' ಎಂದಿದ್ದಾರೆ ನಟಿ.

ಕುಟುಂಬ, ಸ್ನೇಹಿತರು, ಅಭಿಮಾನಿಗಳು ನನ್ನ ಶಕ್ತಿ: ಪದ್ಮಜಾ ರಾವ್
'ನನ್ನ ಶಕ್ತಿ ನನ್ನ ಅಭಿಮಾನಿಗಳು, ಸ್ನೇಹಿತರು ಹಾಗೂ ನನ್ನ ಕುಟುಂಬ. ಅವರ ಬೆಂಬಲ ಇದೆ. ಅಷ್ಟು ಸಾಕು. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಯಾವಾಗಲೂ ಹೀಗೆ ಇರಲಿ' ಎಂದು ಹೇಳಿದ್ದಾರೆ ಪದ್ಮಜಾ ರಾವ್.

ವೀರೂ ಶೆಟ್ಟಿಗೆ ಚೆಕ್ ನೀಡಿದ್ದ ಪದ್ಮಜಾ ರಾವ್
ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ನ ವೀರೂ ಶೆಟ್ಟಿಗೆ ಪದ್ಮಜಾ ರಾವ್ ಅವರು 40 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಆದರೆ ಈ ಚೆಕ್ ಬೌನ್ಸ್ ಆಗಿದೆ. ಹಾಗಾಗಿ ವೀರೂ ಶೆಟ್ಟಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರು ಐದನೇ ಜೆಎಂಎಫ್ ನ್ಯಾಯಾಲಯವು ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಪದ್ಮಜಾ ರಾವ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಪದ್ಮಜಾ ಅವರು ವೀರೂ ಶೆಟ್ಟಿಯವರಿಂದ ಹಣ ಸಾಲ ಪಡೆದು ಶ್ಯೂರಿಟಿ ರೂಪದಲ್ಲಿ ಚೆಕ್ ನೀಡಿದ್ದರು ಎನ್ನಲಾಗುತ್ತಿದೆ.


Click it and Unblock the Notifications











