ಪೂಜಾಗಾಂಧಿಗೆ ಬ್ರೇಕ್ ನೀಡಲಿರುವ 'ತಿಪ್ಪಜ್ಜಿ ಸರ್ಕಲ್'
ನಟಿ ಪೂಜಾಗಾಂಧಿ ಅವರು ಮತ್ತೆ 'ಮುಂಗಾರು ಮಳೆ' ನಿರೀಕ್ಷೆಯಲ್ಲಿದ್ದಾರೆ. ಅವರು ಇಷ್ಟು ದಿನ ಪ್ರೀತಿ-ಪ್ರೇಮದ ಪಾತ್ರಗಳನ್ನೇ ಮಾಡಿಕೊಂಡು ಬಂದ ನಟಿ. ಈಗ ಇದೇ ಮೊದಲಬಾರಿಗೆ ದೇವದಾಸಿಯೊಬ್ಬಳ ಪಾತ್ರ ನಿರ್ವಹಿಸಿದ್ದಾರೆ. ರೂಬಿ ಸಿನಿಕ್ರಾಫ್ಟ್ ಸಂಸ್ಥೆಯಡಿ ಆರ್.ಜಿ. ಸಿದ್ದರಾಮಯ್ಯ ನಿರ್ಮಿಸುತ್ತಿರುವ 'ತಿಪ್ಪಜ್ಜಿ ಸರ್ಕಲ್' ಚಿತ್ರದ ಚಿತ್ರೀಕರಣ ಕಳೆದವಾರ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ರವಿ ಫಾರಂಹೌಸ್ ನಲ್ಲಿ ಭರದಿಂದ ನಡೆಯುತ್ತಿದೆ.
ದೇವದಾಸಿ ತಿಪ್ಪಜ್ಜಿಯಾದ ಪೂಜಾಗಾಂಧಿ, ಸಾಹುಕಾರನ ಪಾತ್ರದ ಡಾ.ಸುರೇಶ್ ಶರ್ಮ ಹಾಗೂ ಆತನ ಪತ್ನಿಯಾಗಿ ಹಿರಿಯ ನಟಿ ಭವ್ಯಾ ಅಂದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಮಾಂಗಲ್ಯ ಸಾಕ್ಷಿ, ಮಾರ್ತಾಂಡ, 'ಜಗತ್ ಕಿಲಾಡಿ' ಚಿತ್ರಗಳ ನಿರ್ದೇಶಕ ಚಿಕ್ಕಣ್ಣ ಈ ಚಿತ್ರದ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಹಿತಿ ಬಿ.ಎಲ್. ವೇಣು ಕಥೆ, ಸಂಭಾಷಣೆ ಬರೆದಿದ್ದಾರೆ.
ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಬಾಳಿ ಬದುಕಿದ ದೇವದಾಸಿ ತಿಪ್ಪಜ್ಜಿಯ ಜೀವನಕಥೆ ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿತ್ರದುರ್ಗದ ಸುತ್ತಮುತ್ತಲ ನೈಜ ಸ್ಥಳಗಳಲ್ಲೇ ಶೂಟಿಂಗ್ ನಡೆಸಲಾಗಿದೆ.

ತಿಪ್ಪಜ್ಜಿ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಚಿತ್ರ
ಚಿತ್ರೀಕರಣ ಸ್ಥಳಕ್ಕಾಗಮಿಸಿದ ಪತ್ರಕರ್ತರ ಜೊತೆ ಮಾತನಾಡಿಸದ ನಿರ್ದೇಶಕ ಚಿಕ್ಕಣ ಚಿತ್ರದುರ್ಗದಲ್ಲಿ ಬಾಳಿ ಬದುಕಿದ ತಿಪ್ಪಜ್ಜಿ ಅಲ್ಲಿನ ಜನರಲ್ಲಿ ಹೇಗೆ ಪ್ರೀತಿ ಗಳಿಸಿದ್ದಳು, ಸಮಾಜಕ್ಕೆ ಆಕೆಯ ಕೊಡುಗೆ ಎಂಥದ್ದು ಎಂಬುದನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ.

ತ್ಯಾಗಮಯಿ ದೇವದಾಸಿ ತಿಪ್ಪಜ್ಜಿ
ಆಕೆ ದೇವದಾಸಿಯಾದರೂ ಬಡವರಿಗೆ ದಾನ-ಧರ್ಮ ಮಾಡುವುದು, ಅಶಕ್ತರಿಗೆ ಸಹಾಯ ಮಾಡುವುದರ ಮೂಲಕ ಅಲ್ಲಿನ ಜನರ ಅಚ್ಚುಮೆಚ್ಚಿನ ತಿಪ್ಪಜ್ಜಿಯಾಗಿದ್ದರು. ಆಕೆಯ ವೈಯಕ್ತಿಕ ಬದುಕು ಹೇಗಿತ್ತು, ತನ್ನ ವೃತ್ತಿ ಮಗಳ ಜೀವನಕ್ಕೆ ಮಾರಕವಾಗಬಾರದೆಂದು ಆಕೆ ಹೇಗೆ ತ್ಯಾಗಮಯಿಯಾಗುತ್ತಾಳೆ ಹೀಗೆ ಇನ್ನೂ ಹಲವಾರು ವಿಷಯಗಳನ್ನಿಟ್ಟುಕೊಂಡು ನೈಜ ಕಥೆಯೊಂದಕ್ಕೆ ಕಮರ್ಷಿಯಲ್ ಟಚ್ ಕೊಟ್ಟು ಸ್ಕ್ರಿಪ್ಟ್ ಮಾಡಿದ್ದೇವೆ.

ಚಿತ್ರದುರ್ಗದಲ್ಲಿರುವ ತಿಪ್ಪಜ್ಜಿ ಸರ್ಕಲ್
ಚಿತ್ರದುರ್ಗದಲ್ಲಿನ ಬಸವೇಶ್ವರ ಸರ್ಕಲ್ ಈಗಲೂ ತಿಪ್ಪಜ್ಜಿ ಸರ್ಕಲ್ ಎಂದೇ ಜನಪ್ರಿಯವಾಗಿದೆ. ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಪ್ರಾರಂಭಿಸುತ್ತೇವೆ ಎಂದು ಚಿತ್ರದ ಸಂಪೂರ್ಣ ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಈ ರೀತಿಯ ಪಾತ್ರ
ನಂತರ ಮಾತನಾಡಿದ ಪೂಜಾಗಾಂಧಿ ಮೊದಲ ಬಾರಿಗೆ ಈ ತರಹದ ಪಾತ್ರ ಮಾಡುತ್ತಿದ್ದೇನೆ. ನಾನೊಬ್ಬ ಕಲಾವಿದೆ ಎಂಬುದನ್ನು ತೋರಿಸಲು ಒಳ್ಳೆ ಅವಕಾಶ ಸಿಕ್ಕಿತ್ತು. ತಿಪ್ಪಿ, ತಿಪ್ಪಕ್ಕ ಹಾಗೂ ತಿಪ್ಪಜ್ಜಿ ಎಂದು 3 ಹಂತಗಳಲ್ಲಿ ನನ್ನ ಪಾತ್ರ ಬರುತ್ತದೆ.

ತುಂಬಾ ಚಾಲೆಂಜಿಂಗ್ ಆದ ಪಾತ್ರ
ತುಂಬಾ ಛಾಲೆಂಜಿಂಗ್ ಆದ ಪಾತ್ರ. ತನ್ನ ಜೀವನೋಪಾಯಕ್ಕಾಗಿ ಆಕೆ ದೇವದಾಸಿಯಾಗಿರುತ್ತಾಳೆ. ಒಬ್ಬ ಸಾಹುಕಾರ ಹೇಗೆ ಆಕೆಯ ಜೀವನದಲ್ಲಿ ಬರುತ್ತಾನೆ. ಅವರ ವೈಯಕ್ತಿಕ ಜೀವನ ಹೇಗಿರುತ್ತೆ ಎಂಬುದನ್ನೂ ಇಲ್ಲಿ ತೋರಿಸಲಾಗಿದೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು.

ದೇವದಾಸಿಗೆ ಗಂಡಸು ಹೆಂಡ್ತಿ ಪಟ್ಟ ಕೊಡ್ತಾನಾ ಇಲ್ವಾ?
ಡಾ.ಸುರೇಶ್ ಶರ್ಮ ಮಾತನಾಡಿ ದಾವಣಗೆರೆ ಸಾಹುಕಾರನಾಗಿ ನಾನು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಮಾಜದಲ್ಲಿ ದೇವದಾಸಿಯರಿಗೆ ಗಂಡಸು ಹೆಂಡ್ತಿ ಪಟ್ಟ ಕೊಡುತ್ತಾನಾ ಇಲ್ವಾ ಅನ್ನೋ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿಕೊಂಡರು.

ಸಾಹುಕಾರನ ಪತ್ನಿಯಾಗಿ ಭವ್ಯಾ
ಸಾಹುಕಾರನ ಪತ್ನಿ ಪಾತ್ರ ಮಾಡಿರುವ ನಟಿ ಭವ್ಯಾ ಮಾತನಾಡಿ, ನಾನು ಆರಂಭದಲ್ಲಿ ಸ್ವಲ್ಪ ಗಡಸುತನ ಇದ್ದರೂ ಬರುಬರುತ್ತಾ ಮೃದು ಧೋರಣೆ ತಳೆಯುವ ಹೆಂಡತಿ ಪಾತ್ರ ನನ್ನದು. ಇಬ್ಬರು ಮಕ್ಕಳು ಹಾಗೂ ಗಂಡ ಎಲ್ಲರನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ಹೆಣ್ಣಾಗಿ ಅಭಿನಯಿಸಿದ್ದೇನೆ. ತುಂಬಾ ಒಳ್ಳೇ ಕಥೆ ಎಂದು ಹೇಳಿದರು. ನಿರ್ಮಾಪಕ ಆರ್.ಜಿ. ಸಿದ್ದರಾಮಯ್ಯ ಈ ಹಿಂದೆ 'ಸ್ನೇಹಾಂಜಲಿ' ಚಿತ್ರ ನಿರ್ಮಿಸಿದ್ದರು. ಅವರೂ ಕೂಡ ಈ ಚಿತ್ರ ಚಿತ್ರರಂಗಕ್ಕೆ ಒಂದು ಕೊಡುಗೆಯಾಗಲಿದೆ ಎಂದು ಹೇಳಿದರು.


Click it and Unblock the Notifications











