ಹೊಸ ಪ್ರೇಮ ಪುರಾಣ ವಿವಾದದಲ್ಲಿ ಪೂಜಾಗಾಂಧಿ
ಇತ್ತೀಚೆಗಷ್ಟೇ ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ನಟಿ ಪೂಜಾಗಾಂಧಿ ಅವರು ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಸೆಟ್ಟೇರಿದ 'ಹೊಸ ಪ್ರೇಮ ಪುರಾಣ' ಚಿತ್ರದ ಪ್ರಚಾರಕ್ಕೆ ಕೈಕೊಟ್ಟಿರುವುದಾಗಿ ನಿರ್ಮಾಪಕರು ಅಲವತ್ತುಕೊಂಡಿದ್ದಾರೆ.
ಈ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಪ್ರಚಾರಕ್ಕೆ ಬನ್ನಿ ಎಂದರೆ ಅವರು ಬರುತ್ತಿಲ್ಲ. ಮೊದಲು ಚಿತ್ರವನ್ನು ತೋರಿಸಿ. ಆಮೇಲೆ ಬರುತ್ತೇನೆ ಎನ್ನುತ್ತಿರುವುದಾಗಿ 'ಹೊಸ ಪ್ರೇಮ ಪುರಾಣ' ಚಿತ್ರದ ನಿರ್ಮಾಪಕ ಪ್ರಸಾದ್ ಆರೋಪಿಸಿದ್ದಾರೆ.
ಕೋಟ್ಯಂತರ ರುಪಾಯಿ ಬಂಡವಾಳ ಹೂಡಿ ಚಿತ್ರವನ್ನು ನಿರ್ಮಿಸಿರುತ್ತೇವೆ. ಚಿತ್ರಕ್ಕೆ ಸಹಿ ಹಾಕುವ ಮುನ್ನ ಕಥೆ ಕೇಳಿರುತ್ತಾರೆ. ಈಗ ಚಿತ್ರವನ್ನು ತಮಗೆ ಪ್ರದರ್ಶಿಸಿ ಎಂದರೆ ಹೇಗೆ? ಎಂದು ಪ್ರಸಾದ್ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಒಂದು ಹಂತದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಗಳಗಳನೆ ಕಣ್ಣೀರು ಸುರಿಸಿದರು.
ಬಳಿಕ ಅವರು ಸುದ್ದಿಗೋಷ್ಠಿಯಿಂದ ಎದ್ದುಹೋದವರು ವಾಪಸ್ಸು ಬರದೆ ಸಭಿಕರನ್ನು ಗಲಿಬಿಲಿಗೊಳಿಸಿದರು. ಈ ಚಿತ್ರದಲ್ಲಿ ಪೂಜಾಗಾಂಧಿ ಸೇರಿದಂತೆ ಒಟ್ಟು ಮೂವರು ನಾಯಕಿಯರು. ಇನ್ನಿಬ್ಬರು ರಾಧಿಕಾ ಗಾಂಧಿ (ಪೂಜಾಗಾಂಧಿ ತಂಗಿ) ಹಾಗೂ ಶ್ರದ್ಧಾ ದಾಸ್.
ಚಿತ್ರದ ಪ್ರಚಾರಕ್ಕೆ ಪೂಜಾಗಾಂಧಿ ಬಾರದೆ ಇರುವುದರ ಬಗ್ಗೆ ತಮಗೆ ಅವರು ಕಳುಹಿಸಿರುವ ಎಸ್ಎಂಎಸ್ ಗಳೇ ಸಾಕ್ಷಿ ಎಂದರು ಪ್ರಸಾದ್. ಇದು ನಿಜವಾದ ಕಣ್ಣೀರೆ ಅಥವಾ ಪ್ರಚಾರದ ಗಿಮ್ಮಿಕ್ ಇರಬಹುದೇ ಎಂಬ ಡೌಟು ಸುದ್ದಿಗೋಷ್ಠಿಯಲಿ ಕ್ಷಣಕಾಲ ಎಲ್ಲರನ್ನೂ ಕಾಡಿತು.
ಲಿವಿಂಗ್ ಟುಗೆದರ್ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ಕಥಾ ಹಂದರ ಈ ಚಿತ್ರಕ್ಕಿದೆ. ಅಂದಹಾಗೆ ರಾಧಿಕಾ ಗಾಂಧಿ ಮುಖ್ಯಭೂಮಿಕೆಯಲ್ಲಿರುವ ಚಿತ್ರದ ನಾಯಕ ನಟ ನಿತಿನ್. ಶಿವಕುಮಾರ್ ಅಂಚೆಹಳ್ಳಿ ಎಂಬುವವರು ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್)


Click it and Unblock the Notifications











