ಮಹೇಶ್ ಬಾಬು ಚಿತ್ರದಲ್ಲಿ ಕನ್ನಡ ಬೆಡಗಿ ಪ್ರಣೀತಾ
ದುನಿಯಾ ವಿಜಯ್ ಮುಖ್ಯಭೂಮಿಕೆಯಲ್ಲಿದ್ದ 'ಭೀಮಾ ತೀರದಲ್ಲಿ' ಚಿತ್ರದ ಬಳಿಕ ನಟಿ ಪ್ರಣೀತಾ ಎಲ್ಲಿ ಹೋದರು ಎಂಬ ಅನುಮಾನ ಅವರ ಅಭಿಮಾನಿಗಳನ್ನು ನಖಶಿಖಾಂತ ಕಾಡುತ್ತಿತ್ತು. ಏತನ್ಮಧ್ಯೆ 'ವಿಜಲ್' ಚಿತ್ರಕ್ಕೆ ಸಹಿ ಹಾಕಿರುವುದು ಬಿಟ್ಟರೆ ಪ್ರಣೀತಾ ಸುದ್ದಿಯಿಲ್ಲ.
ಈಗ ಅವರು ತೆಲುಗು ಚಿತ್ರರಂಗದಲ್ಲಿ ಭರ್ಜರಿ ಚಾನ್ಸ್ ಗಿಟ್ಟಿಸಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಇನ್ನೂ ಹೆಸರಿಡದ ಚಿತ್ರದಲ್ಲಿ ಪ್ರಣೀತಾ ನಾಯಕಿ. ಈ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಈ ಹಿಂದೆ ತೆಲುಗಿನಲ್ಲಿ ಪ್ರಣೀತಾ ಅಭಿನಯದ 'ಏಮ್ ಪಿಲ್ಲೋ ಏಮ್ ಪಿಲ್ಲಾಡೋ' ಚಿತ್ರ ಬಾಕ್ಸ್ ಆಫೀಸಲ್ಲಿ ಲಗಾಟೆ ಹೊಡೆಯಿತು. ಅದಾದ ಬಳಿಕ ತೆಲುಗು ಚಿತ್ರದಲ್ಲಿ ಪ್ರಣೀತಾ ಕಾಣಿಸಿಕೊಳ್ಳಲಿಲ್ಲ. ಈಗ ಭಾರಿ ಬಜೆಟ್ ಚಿತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.

ರವಿತೇಜ, ಮೋಹನ್ ಬಾಬು ಚಿತ್ರಗಳಲ್ಲೂ ಚಾನ್ಸ್
ಇಲ್ಲಿ ಚಿತ್ರಗಳು ಎಂದು ಹೇಳಲು ಕಾರಣ, ಮಹೇಶ್ ಬಾಬು ಚಿತ್ರದ ಜೊತೆಗೆ ರವಿತೇಜ, ಮೋಹನ್ ಬಾಬು ಅವರ ಹೋಂ ಬ್ಯಾನರ್ ಚಿತ್ರಗಳಿಗೂ ಸಹಿ ಹಾಕಿದ್ದಾರೆ ಪ್ರಣೀತಾ ಎಂಬ ಕಾರಣಕ್ಕೆ. ಮೋಹನ್ ಬಾಬು ಅವರ ಪುತ್ರರಾದ ಮನೋಜ್ ಹಾಗೂ ವಿಷ್ಣು ಇಬ್ಬರ ಜೊತೆಯೂ ಪ್ರಣೀತಾ ಅಭಿನಯಿಸಲಿದ್ದಾರೆ.

ಶಕುನಿ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಗೆಲ್ಲಲಿಲ್ಲ
ಪ್ರಣೀತಾ ಅಭಿನಯದ ತಮಿಳಿನ 'ಶಗುನಿ' ಚಿತ್ರ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಇದೇ ಚಿತ್ರ ತೆಲುಗಿಗೆ 'ಶಕುನಿ' ಎಂದು ಡಬ್ ಆಗಿತ್ತು. ಆದರೆ ತೆಲುಗಿನಲ್ಲಿ ಮಕಾಡೆ ಮಲಗಿತು. ನಾನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡ ತೆಲುಗು 'ಶಕುನಿ' ಅಡ್ರಸ್ ಇಲ್ಲದಂತಾಗಿದ್ದು ದುರಂತ.

ಚಿತ್ರದ ಸೋಲಿಗೆ ನಾಯಕಿ ಬಲಿಬಶು
ಶಕುನಿ ಈ ಚಿತ್ರದ ಸೋಲಿಗೆ ಕೇವಲ ಪ್ರಣೀತಾ ಒಬ್ಬರೇ ಕಾರಣ ಎಂದರೆ ಅಪಚಾರವಾಗುತ್ತದೆ. ಯಾವುದೇ ಒಂದು ಚಿತ್ರದ ಸೋಲು ಗೆಲುವಿಗೆ ಆ ಚಿತ್ರತಂಡದ ಪ್ರತಿಯೊಬ್ಬರೂ ಕಾರಣರಾಗಿರುತ್ತಾರೆ ಎಂಬುದನ್ನು ಮರೆಯಬಾರದು. ಅದ್ಯಾಕೋ ಏನೋ ಚಿತ್ರವೊಂದು ಸೋತರೆ ಇದಕ್ಕೆ ನಾಯಕಿಯ ಕಾಲ್ಗುಣವೇ ಕಾರಣ ಎಂದು ಗೂಬೆ ಕೂರಿಸುವ ಪ್ರಯತ್ನ ಚಿತ್ರೋದ್ಯಮದಲ್ಲಿ ಬಲವಾಗಿ ಬೇರೂರಿದೆ.

ರವಿತೇಜ ಚಿತ್ರಕ್ಕೆ ಶಾರದಾ ಎಂಬ ಶೀರ್ಷಿಕೆ
ಮಹೇಶ್ ಬಾಬು ಜೊತೆಗಿನ ಚಿತ್ರದ ಕಥೆ ಮಹಿಳಾ ಪ್ರಧಾನವಾಗಿರುತ್ತದೆ. ಇನ್ನು ರವಿತೇಜ ಜೊತೆಗಿನ ಚಿತ್ರಕ್ಕೆ 'ಶಾರದಾ' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ತ್ರಿವಿಕ್ರಮ್ ಶ್ರೀನಿವಾಸ್.

ಅಂಗಾರಕ ಹಾಗೂ ವಿಜಲ್ ಚಿತ್ರಗಳಲ್ಲಿ ಪ್ರಣೀತಾ
ಕನ್ನಡದಲ್ಲಿ ಪ್ರಣೀತಾ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಒಂದು ಅಂಗಾರಕ ಹಾಗೂ ಇನ್ನೊಂದು ವಿಜಲ್. ಅಂಗಾರಕ ಚಿತ್ರ ಸ್ವಮೇಕ್ ಆದರೆ ವಿಜಲ್ ಚಿತ್ರ ತಮಿಳಿನ ಪಿಜ್ಜಾ ರೀಮೇಕ್. ಎರಡೂ ಚಿತ್ರಗಳಲ್ಲಿ ಪ್ರಣೀತಾ ಅವರಿಗೆ ಒಳ್ಳೆಯ ರೋಲ್ ಸಿಕ್ಕಿದೆ.


Click it and Unblock the Notifications











