ಶ್ರೀರಾಮುಲು ಪಕ್ಷದಲ್ಲಿ 'ಸುಂಟರಗಾಳಿ' ಜೊತೆ 'ಮಳೆ'
ಸಾಮಾನ್ಯವಾಗಿ ಮಳೆಗೂ ಸುಂಟರಗಾಳಿಗೂ ಆಗಿ ಬರಲ್ಲ. ಸುಂಟರಗಾಳಿ ಜಾಸ್ತಿಯಾದರೆ ಮಳೆಗೆ ಹೊಡೆತ. ಮಳೆ ಜಾಸ್ತಿಯಾದರೆ ಸುಂಟರಗಾಳಿಗೆ ಹೊಡೆತ. ಒಂದಕ್ಕೊಂದು ಪೂರಕವಾದರೆ ಕಥೆನೇ ಬೇರೆ. ಅಪಾರ ಬೆಳೆ, ಆಸ್ತಿಪಾಸ್ತಿ ನಷ್ಟ ಜೊತೆಗೆ ಅತಿವೃಷ್ಟಿ.
ಈಗ ಇಂಥಹದ್ದೇ ವಾತಾವರಣ ಸ್ವಾಭಿಮಾನಿ ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ನಿರ್ಮಾಣವಾಗಿದೆ. 'ಮುಂಗಾರು ಮಳೆ' ಖ್ಯಾತಿಯ ಪೂಜಾಗಾಂಧಿ ಅವರು ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಇದೇ ಭಾನುವಾರ (ಮಾ.3) ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ.
ಆದರೆ ಈಗಾಗಲೆ ಪಕ್ಷದಲ್ಲಿರುವ 'ಸುಂಟರಗಾಳಿ' ರಕ್ಷಿತಾ ಅವರು ಇದರಿಂದ ಬೇಸರಗೊಂಡು ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, "ತಾವು ಯಾವುದೇ ಕಾರಣಕ್ಕೂ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿಲ್ಲ. ಪಕ್ಷದಲ್ಲೇ ಇದ್ದು ತಮ್ಮ ಜೀವನವನ್ನು ತೇಯುವುದಾಗಿ" ತಿಳಿಸಿದ್ದಾರೆ.
ಪೂಜಾ ಸೇರ್ಪಡೆಯಿಂದ ಬೇಸರಗೊಂಡಿರುವ ರಕ್ಷಿತಾ ಅವರು ಶ್ರೀರಾಮುಲು ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ. ಈಗಾಗಲೆ ಅವರು ಸಚಿವ ಆರ್ ಅಶೋಕ್ ಅವರನ್ನು ಸಂಪರ್ಕಿಸಿದ್ದಾರೆ. ಬೆಂಗಳೂರು ರಾಜಾಜಿನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಅಂತೆಕಂತೆಗಳಿಗೆ ರಕ್ಷಿತಾ ಸಂಪೂರ್ಣವಾಗಿ ತೆರೆ ಎಳೆದಿದ್ದಾರೆ.
ಏತನ್ಮಧ್ಯೆ ಈಗಾಗಲೆ ಪೂಜಾಗಾಂಧಿ ಅವರು ಫ್ಯಾಕ್ಸ್ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಅವರು ಇದೇ ಭಾನುವಾರ(ಮಾ.3) ಬಳ್ಳಾರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಮುಹೂರ್ತ ನಿಗದಿಯಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











