ಜೆಡಿಎಸ್ ಪಕ್ಷಕ್ಕೆ ನಟಿ ರಕ್ಷಿತಾ ಅಧಿಕೃತ ಸೇರ್ಪಡೆ
ಕನ್ನಡ ಚಿತ್ರರಂಗದ ತಾರೆ ಹಾಗೂ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ವರ್ಚಸ್ವಿ ನಾಯಕಿ ರಕ್ಷಿತಾ ಅವರು ಸೋಮವಾರ (ಏ.15) ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರನ್ನು ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಜೆಡಿಎಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿರುವ ರಕ್ಷಿತಾ ಅವರು ಮಾತನಾಡುತ್ತಾ, "ಯಾವುದೇ ಷರತ್ತು ಇಲ್ಲದೆ ಸೇರ್ಪಡೆಯಾಗಿದ್ದೇನೆ. ನಾನು ಜೆಡಿಎಸ್ ಟಿಕೆಟ್ ಬಯಸಿ ಇಲ್ಲಿಗೆ ಬಂದಿಲ್ಲ. ಪಕ್ಷಕ್ಕಾಗಿ ದುಡುಯುತ್ತೇನೆ" ಎಂದಿದ್ದಾರೆ.

ರಕ್ಷಿತಾ ಇತ್ತೀಚೆಗೆ ಜೆಡಿ(ಎಸ್) ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆಯಾಗುವ ಸಂಬಂಧ ಚರ್ಚೆ ನಡೆಸಿದ್ದರು. ಇಂದು ಅವರು ಎಚ್.ಡಿ. ದೇವೇಗೌಡ ಅವರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡುವ ಮೂಲಕ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಪೂಜಾಗಾಂಧಿ ಅವರು ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಅಡಿಯಿಟ್ಟ ಘಳಿಗೆಯಿಂದಲೇ ರಕ್ಷಿತಾ ಹೊರಬೀಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗದು ನಿಜವಾಗಿದೆ. ಇತ್ತೀಚೆಗೆ ಅವರು ಬಿಜೆಪಿ ಸೇರುವ ಸಂಬಂಧ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿದ್ದರು ಎಂಬ ಸುದ್ದಿಯನ್ನು ನಮ್ಮ ಓದುಗರು ಮರೆತಿರಲಾರರು.
ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ತೊರೆಯಲಿರುವ ರಕ್ಷಿತಾ ಅವರು ಯಾವುದೇ ಪಕ್ಷಕ್ಕೂ ಸೇರದೆ ರಾಜಕೀಯ ಸನ್ಯಾಸವನ್ನು ಸ್ವೀಕರಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಅವರು ಜೆಡಿಎಸ್ ಸೇರುವ ಮೂಲಕ ಎಲ್ಲ ಅನುಮಾನಗಳಿಗೂ ಫುಲ್ ಸ್ಟಾಪ್ ಹಾಕಿದ್ದಾರೆ.
ತಮ್ಮ ಗ್ಲಾಮರ್ ಹಾಗೂ ಭಾಷಣಗಳ ಮೂಲಕ ಮತದಾರರನ್ನು ತಕ್ಕಮಟ್ಟಿಗೆ ಸೆಳೆದಿದ್ದ ರಕ್ಷಿತಾ ಅವರಿಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಚಾಮರಾಜನಗರದಲ್ಲಿ ಟಿಕೆಟ್ ಕೊಟ್ಟಿತ್ತು. ಈಗ ಜೆಡಿಎಸ್ ಸೇರಿವುದರಿಂದ ಅವರಿಗೆ ಇನ್ಯಾವ ಕ್ಷೇತ್ರದಲ್ಲಿ ಟಿಕೆಟ್ ಸಿಗುತ್ತದೋ ಕಾದುನೋಡಬೇಕು. (ಒನ್ಇಂಡಿಯಾ ಕನ್ನಡ)


Click it and Unblock the Notifications











