ನಟಿ ರಕ್ಷಿತಾ ಪ್ರೇಮ್ ಗೆ ಮಂಡ್ಯ ಟಿಕೆಟ್ ಗ್ಯಾರಂಟಿ
ಮಂಡ್ಯದ ಹಾಲಿ ಸಂಸದೆ ಲಕ್ಕಿ ಸ್ಟಾರ್ ರಮ್ಯಾಗೆ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಲು ಜೆಡಿಎಸ್ ಪಕ್ಷ ನಿರ್ಧರಿಸಿದೆ. ಈ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರ ಇನ್ನಷ್ಟು ರಂಗುರಂಗಿನ ರಾಜಕೀಯಕ್ಕೆ ನಾಂದಿ ಹಾಡಲಿದೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಟಿ ರಕ್ಷಿತಾ ಪ್ರೇಮ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿರುವ ರಕ್ಷಿತಾ ಪತಿ ಪ್ರೇಮ್ ಅವರು, ಬರಲಿರುವ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಸಿಗುವುದು ಖಚಿತವಾಗಿದೆ ಎಂದಿದ್ದಾರೆ. ಈ ಬಗ್ಗೆ ಜೆಡಿಎಸ್ ಮುಖಂಡರು ಭರವಸೆ ನೀಡಿದ್ದು ರಕ್ಷಿತಾ ಅವರಿಗೆ ಟಿಕೆಟ್ ಎಂದಿದ್ದಾರೆ ಎಂದು ಪ್ರೇಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಜೋಗಯ್ಯ ಪ್ರೇಮ್, ಸುಮಿತ್ ಕೌರ್ ಅಫೇರ್ ನಿಜವೇ?]
ಮುಂದಿನ ವಾರದಿಂದ ಮಂಡ್ಯ ಕ್ಷೇತ್ರದಲ್ಲಿ ತಾನೂ ಹಾಗೂ ರಕ್ಷಿತಾ ಪ್ರವಾಸ ಕೈಗೊಳ್ಳುತ್ತಿದ್ದೇವೆ ಎಂದು ಪ್ರೇಮ್ ತಿಳಿಸಿದ್ದಾರೆ. ಆದರೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಕ್ಷಿತಾ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದಿದ್ದಾರೆ.ಒಂದು ವೇಳೆ ಕೊನೆಯ ಕ್ಷಣದಲ್ಲಿ ರಕ್ಷಿತಾ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಇನ್ನಷ್ಟು ರಂಗುರಂಗಿನ ರಾಜಕೀಯವನ್ನು ಮಂಡ್ಯ ಜನತೆ ನೋಡಬಹುದು. ಚಿತ್ರರಂಗದಲ್ಲಿದ್ದಾಗ ಇಬ್ಬರ ನಡುವೆಯೂ ಸಾಕಷ್ಟು ಸ್ಪರ್ಧೆ ಇತ್ತು. ಈಗ ಅದು ರಾಜಕೀಯಕ್ಕೂ ವರ್ಗವಾಗಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಳ್ಳಿತೆರೆಯ ಮೇಲೆ ಸುಂಟರಗಾಳಿ ಎಬ್ಬಿಸಿದ್ದ ರಕ್ಷಿತಾ ರಾಜಕೀಯಕ್ಕೆ ನಾಂದಿ ಹಾಡಿದ್ದು ಬಿಎಸ್ಆರ್ ಕಾಂಗ್ರೆಸ್ ಪಕ್ಷ. ಶ್ರೀರಾಮುಲು ಪಕ್ಷದಲ್ಲಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಅವರು ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕಾಗಿತ್ತು. ಆದರೆ ಪಕ್ಷ ಚಾಮರಾಜನಗರದಿಂದ ಸ್ಪರ್ಧಿಸುವಂತೆ ನಿರ್ದೇಶಿಸಿತ್ತು. [ಲೋಕಸಭೆ ಚುನಾವಣೆ ಅಖಾಡಕ್ಕೆ ರಂಗಾಯಣ ರಘು?]
ಆದರೆ ರಕ್ಷಿತಾ ಎಲ್ಲೂ ಸ್ಪರ್ಧಿಸಲಿಲ್ಲ ಕಡೆಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಸೇರಿದ್ದರು. ಈಗ ಮಂಡ್ಯ ಲೋಕಸಭೆ ಕ್ಷೇತ್ರದಿಂದಲೇ ಸ್ಪರ್ಧಿಸುವ ಬಗ್ಗೆ ತೆರೆಮರೆಯ ಕಸರತ್ತುಗಳು ನಡೆಯುತ್ತಿವೆ.


Click it and Unblock the Notifications












