ಫಿಲಂ ಚೇಂಬರ್ ನಲ್ಲೂ 'ನೀರ್ ದೋಸೆ' ಬೇಯಲಿಲ್ಲ
ರಮ್ಯಾ ಹಾಗೂ ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿರುವ 'ನೀರ್ ದೋಸೆ' ವಿವಾದ ಇನ್ನಷ್ಟು ಬಿಗಡಾಯಿಸಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬುಧವಾರ (ನ.6) ನಡೆದ ಸಂಧಾನಸಭೆಗೆ ರಮ್ಯಾ ಗೈರುಹಾಜರಾಗುವ ಮೂಲಕ ಸಭೆಯನ್ನು ಮುಂದೂಡಲಾಯಿತು.
ಫಿಲಂ ಚೇಂಬರ್ ಅಧ್ಯಕ್ಷ ಎಚ್ ಡಿ ಗಂಗರಾಜು ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಗೆ ರಮ್ಯಾ ಹಲವಾರು ಕಾರಣಗಳಿಂದ ಹಾಜರಾಗಲು ಸಾಧ್ಯವಾಗಲಿಲ್ಲ. ಸಭೆಯಲ್ಲಿ 'ನೀರ್ ದೋಸೆ' ನಿರ್ಮಾಪಕ ಸುಧೀಂದ್ರ ಅವರು ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ತಲಾ ಹತ್ತು ದಿನಗಳ ಡೇಟ್ ನೀಡುವಂತೆ ಪಟ್ಟು ಹಿಡಿದರು.
ಈ ಬಗ್ಗೆ ವಿವರ ನೀಡಿದ ಗಂಗರಾಜು, "ರಮ್ಯಾ ಅವರನ್ನು ಸಭೆಗೆ ಹಾಜರಾಗುವಂತೆ ತಿಳಿಸಿದೆವು. ಆದರೆ ಅವರು ರಾಜಕೀಯ ಕಾರ್ಯಗಳಲ್ಲಿ ಬಿಜಿಯಾಗಿರುವುದರಿಂದ ಬರಲು ಸಾಧ್ಯವಾಗಲಿಲ್ಲ. ನವೆಂಬರ್ 24ರ ತನಕ ತಾನು ಬಿಜಿಯಾಗಿದ್ದೇನೆ. ಆ ಬಳಿಕ ಸಭೆ ಕರೆಯಿರಿ ಬರುತ್ತೇನೆ" ಎಂದಿದ್ದಾಗಿ ತಿಳಿಸಿದರು.ಸಲಹಾ ಸಮಿತಿಯ ಸದಸ್ಯರೂ ಆದ ಅಂಬರೀಶ್ ಮಾತನಾಡಿ 'ನೀರ್ ದೋಸೆ' ವಿವಾದಕ್ಕೆ ನವೆಂಬರ್ 25ರಂದು ಅಂತ್ಯ ಹಾಡುತ್ತೇವೆ. ಖಂಡಿತ ಈ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವನ್ನು ಗಂಗರಾಜು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮುನಿರತ್ನ ಅವರು ಮಾತನಾಡುತ್ತಾ, "ರಮ್ಯಾ ಅವರು ನವೆಂಬರ್ 24ರಂದು ಸಭೆಗೆ ಹಾಜರಾಗುತ್ತೇನೆ ಎಂದರು. ಆದರೆ ಅಂದು ಭಾನುವಾರವಾದ ಕಾರಣ ನವೆಂಬರ್ 25ಕ್ಕೆ ಸಭೆಯನ್ನು ಕರೆದಿದ್ದೇವೆ. ಅಂದು ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘದ ಅಧ್ಯಕ್ಷರು, ಫಿಲಂ ಚೇಂಬರ್ ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ" ಎಂದರು.
ರಮ್ಯಾ ಅವರ ಜೊತೆ ಮಾತನಾಡಿದಾಗ ಅವರು, "ನನ್ನ ಲೋಕಸಭಾ ಕ್ಷೇತ್ರ ಬಹಳ ದೊಡ್ಡದಾಗಿರುವ ಕಾರಣ, ಇಲ್ಲಿ ಜನರ ಸಂಕಷ್ಟಗಳು ಸಾಕಷ್ಟಿವೆ. ನನಗೂ ಚಿತ್ರೀಕರಣದಲ್ಲಿ ಭಾಗವಹಿಸಬೇಕೆಂಬ ಆಸೆ ಇದೆ. ಆದರೆ ಸಾಧ್ಯವಾಗುತ್ತಿಲ್ಲ" ಎಂದು ರಮ್ಯಾ ತಿಳಿಸಿದ್ದಾಗಿ ಮುನಿರತ್ನ ವಿವರ ನೀಡಿದರು. ನವೆಂಬರ್ 25ರಂದು ಸಭೆಗೆ ಹಾಜರಾಗುವಂತೆ ಅವರಿಗೆ ಪತ್ರ ಬರೆಯಲಾಗುತ್ತಿದೆ ಎಂದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












