ರಾಹುಲ್ ಗಾಂಧಿ-ಡಿಕೆಶಿ-ಸಿದ್ದು ಜೊತೆ ಹೆಜ್ಜೆ ಹಾಕಿದ ರಮ್ಯಾ: ಮತ್ತೆ ಸಕ್ರಿಯ ರಾಜಕಾರಣಕ್ಕೆ?
ನಿನ್ನೆಯಷ್ಟೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮುದ್ದಾಗಿ ಹೆಜ್ಜೆ ಹಾಕಿದ್ದ ನಟಿ ರಮ್ಯಾ, ಇಂದು (ಅಕ್ಟೋಬರ್ 22) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ, ಭಾರತ್ ಜೋಡೊ ಯಾತ್ರೆಯಲ್ಲಿ.
ರಾಹುಲ್ ಗಾಂಧಿ ಅವರ 'ಭಾರತ್ ಜೋಡೊ ಯಾತ್ರೆ' ರಾಜ್ಯದಲ್ಲಿ ಇಂದು ಕೊನೆಯ ದಿನವಾಗಿದ್ದು ರಾಯಚೂರಿನಲ್ಲಿ ಯಾತ್ರೆ ಸಾಗಿತು. ರಾಜ್ಯದಲ್ಲಿ ಕೊನೆಯ ದಿನದಂದು ನಟಿ ರಮ್ಯಾ ಯಾತ್ರೆಯನ್ನು ಸೇರಿಕೊಂಡಿದ್ದು, ಡಿ.ಕೆ.ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಅವರೊಟ್ಟಿಗೆ ಸೇರಿ ಕೆಲ ಕಾಲ ರಮ್ಯಾ ಹೆಜ್ಜೆ ಹಾಕಿದರು.
ನಟಿ ರಮ್ಯಾ, ರಾಷ್ಟ್ರೀಯ ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಹುಲ್ ಗಾಂಧಿಗೆ ಆಪ್ತವೂ ಹೌದು. ಆದರೆ ಕಳೆದ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಅವರು ಕಾಂಗ್ರೆಸ್ ಹಾಗೂ ಒಟ್ಟಾರೆ ರಾಜಕೀಯದಿಂದ ದೂರವೇ ಉಳಿದಿದ್ದರು.

ರಾಜ್ಯ ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು
ರಾಷ್ಟ್ರೀಯ ಕಾಂಗ್ರೆಸ್ ಜೊತೆ ಕೆಲಸ ಮಾಡಿದ್ದ ರಮ್ಯಾ, ರಾಜ್ಯ ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊಂದಿದ್ದರು. ಇತ್ತೀಚೆಗೆ ಕೆಲ ಟ್ವೀಟ್ಗಳ ಮೂಲಕ ರಾಜ್ಯ ಕಾಂಗ್ರೆಸ್ಗೆ ಟಾಂಗ್ ನೀಡಿದ್ದರು. ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ಗೆ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದೂ ಉಂಟು. ರಾಜಕೀಯ ಹಾಗೂ ಕಾಂಗ್ರೆಸ್ನಿಂದ ರಮ್ಯಾ ಅಂತರ ಕಾಯ್ದುಕೊಂಡಿದ್ದಾರೆ. ಮತ್ತೆ ಸಿನಿಮಾಕ್ಕೆ ಮರಳಿದ್ದಾರೆ ಎಂದೇ ಅವರ ಅಭಿಮಾನಿಗಳು ಎಣಿಸಿದ್ದರು. ಆದರೆ ಈಗ ಹಠಾತ್ತನೆ ಭಾರತ್ ಜೋಡೊ ಯಾತ್ರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ಸಕ್ರಿಯ ರಾಜಕೀಯಕ್ಕೆ ಮರಳುತ್ತಾರಾ ರಮ್ಯಾ?
ರಮ್ಯಾ, ಭಾರತ್ ಜೋಡೊ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರೂ ಸಹ ರಮ್ಯಾ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವುದು ಅನುಮಾನವೇ. ಭಾರತ್ ಜೋಡೋ ಯಾತ್ರೆಯು ಬಿಜೆಪಿಯ ವ್ಯಕ್ತಿಗಳನ್ನು ಧರ್ಮ, ಇನ್ನಿತರೆಗಳ ಮೂಲಕ ಒಡೆದು ಆಳುವನೀತಿಯ ವಿರುದ್ಧ ಮಾಡುತ್ತಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದು, ಇದೇ ವಿಷಯವಾಗಿ ರಮ್ಯಾ ಸಹ ಮೊದಲಿನಿಂದಲೂ ಬಿಜೆಪಿಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಹಾಗಾಗಿ ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.

ಮಾಜಿ ಸಂಸದೆ ರಮ್ಯಾ
2012 ರಿಂದಲೂ ನಟಿ ರಮ್ಯಾ ಕಾಂಗ್ರೆಸ್ ಸದಸ್ಯೆ. 2013 ರಲ್ಲಿ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 2014 ರಲ್ಲಿ ಮತ್ತೆ ಲೋಕಸಭೆ ಚುನಾವಣೆಗೆ ಮಂಡ್ಯದಿಂದಲೇ ಸ್ಪರ್ಧಿಸಿದರಾದರೂ ಗೆಲುವು ಸಾಧಿಸಲಿಲ್ಲ. ಆ ಬಳಿಕ ರಾಷ್ಟ್ರ ರಾಜಕಾರಣ ಸೇರಿಕೊಂಡು, ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದರು. ರಾಹುಲ್ ಗಾಂಧಿ ಆಪ್ತ ವಲಯದಲ್ಲಿಯೂ ಕಾಣಿಸಿಕೊಂಡರು. ಆದರೆ 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬಳಿಕ ತಮ್ಮ ಸ್ಥಾನ ತ್ಯಜಿಸಿ, ರಾಜಕೀಯ ಹಾಗೂ ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡರು.

ಸಿನಿಮಾ ನಿರ್ಮಿಸುತ್ತಿರುವ ರಮ್ಯಾ
ಇದೀಗ ಮತ್ತೆ ಚಿತ್ರರಂಗ ಪ್ರವೇಶಿಸಿರುವ ರಮ್ಯಾ, ತಮ್ಮ 'ಆಪಲ್ ಬಾಕ್ಸ್' ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಜೊತೆಗೆ ನಟನೆಯನ್ನೂ ಮಾಡುತ್ತಿದ್ದಾರೆ. ರಮ್ಯಾ ನಿರ್ಮಿಸುತ್ತಿರುವ ಸಿನಿಮಾವನ್ನು ಖ್ಯಾತ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ರಮ್ಯಾ ಅವರೇ ನಾಯಕಿ ಎನ್ನಲಾಗಿತ್ತು. ಆದರೆ ರಮ್ಯಾ, ನಾಯಕಿಯಾಗಿ ನಟಿಸುತ್ತಿಲ್ಲ ಎಂದು ಸ್ವತಃ ಅವರೇ ಕೆಲ ದಿನಗಳ ಹಿಂದೆ ಸ್ಪಷ್ಟಪಡಿಸಿದ್ದಾರೆ. ಸಿನಿಮಾಕ್ಕೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂದು ಹೆಸರಿಡಲಾಗಿದೆ.


Click it and Unblock the Notifications











