ಚಿನ್ನಾರಿ ಮುತ್ತ ವಿಜಯ್ 'ಕಿಸ್ಮತ್'ಗೆ ಸಂಗೀತಾ ಭಟ್
ಕಡೆಗೂ ವಿಜಯ್ ರಾಘವೇಂದ್ರ ಅವರ 'ಕಿಸ್ಮತ್' ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಈಗಾಗಲೆ ಮಾಮು ಟೀ ಅಂಗಡಿ ಚಿತ್ರದಲ್ಲಿ ಅಭಿನಯಿಸುತ್ತಿರುವ ಸಂಗೀತಾ ಭಟ್ ಅವರನ್ನು 'ಕಿಸ್ಮತ್' ಕಾ ರಾಣಿಯಾಗಿ ಆಯ್ಕೆ ಮಾಡಲಾಗಿದೆ.
ಸಂಗೀತಾ ಭಟ್ ಅವರು ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಒಂದು 'ಮಾಮೂ ಟೀ ಅಂಗಡಿ' ಇನ್ನೊಂದು 'ಪ್ರೀತಿ ಗೀತಿ ಇತ್ಯಾದಿ'. ಈ ಎರಡೂ ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ. ಈಗ ಮೂರನೇ ಚಿತ್ರ ಕಿಸ್ಮತ್ ಗೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗಷ್ಟೇ ಚಿತ್ರಕ್ಕೆ ಬೆಂಗಳೂರು ಮಲ್ಲೇಶ್ವರಂನ ನಂದಿತೀರ್ಥ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ವಿಜಯ್ ಅವರ ತಂದೆ ಚಿನ್ನೇಗೌಡ ಹಾಗೂ ಕೆಎಫ್ ಸಿಸಿ ಅಧ್ಯಕ್ಷ ಎಚ್ ಡಿ ಗಂಗರಾಜು ಚಿತ್ರಕ್ಕೆ ಶುಭಕೋರಿದರು.'ಕಿಸ್ಮತ್' ಚಿತ್ರಕ್ಕೆ ವಿಜಯ್ ರಾಘವೇಂದ್ರ ಅವರು ಸ್ವತಃ ಆಕ್ಷನ್ ಕಟ್ ಹೇಳುವುದರ ಜೊತೆಗೆ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ತಮ್ಮ ಹೆಸರನ್ನು ಚಿನ್ನಾರಿ ಮುತ್ತ ವಿಜಯ್ ಎಂದು ಬದಲಾಯಿಸಿಕೊಂಡಿರುವುದು ಗೊತ್ತೇ ಇದೆ. ಸ್ಪಂದನಸೃಷ್ಠಿ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಿರ್ಮಾಪಕರು ವಿಜಯರಾಘವೇಂದ್ರ ಅವರೇ.
ನವೆಂಬರ್ ತಿಂಗಳ ಹದಿನೈದರಿಂದ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಒಂದೇ ಹಂತದ ಚಿತ್ರೀಕರಣ ನಡೆಯುತ್ತಿದೆ. ರಾಜೇಶ್ ಮುರುಗೇಶನ್ ಸಂಗೀತ ನಿರ್ದೇಶನದ 'ಕಿಸ್ಮತ್'ಗೆ ರಾಜೇಶ್ ಯಾದವ್ ಅವರ ಛಾಯಾಗ್ರಹನವಿದೆ. ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಪಂಡಿತ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದಾರೆ.
ಆನಂದಪ್ರಿಯ ಗೀತರಚನೆ ಮಾಡಿದ್ದಾರೆ. ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ಅತಿಥಿ ಪಾತ್ರದಲ್ಲಿ ಸಾಯಿಕುಮಾರ್ ಅಭಿನಯಿಸುತ್ತಿದ್ದಾರೆ. ದಿಲೀಪ್ ರಾಜ್, ನಂದ, ತಬಲನಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹೆಸರಿನ ಜೊತೆಗೆ ವಿಜಯ್ 'ಕಿಸ್ಮತ್' ಬದಲಾಗುತ್ತದೋ ಏನೋ ನೋಡಬೇಕು. (ಏಜೆನ್ಸೀಸ್)


Click it and Unblock the Notifications












