ಮದುವೆ ಬಗ್ಗೆ ಶ್ರುತಿ ಪತಿ ಚಂದ್ರಚೂಡ್ ರಿಯಾಕ್ಷನ್

ತಮ್ಮ ಮದುವೆ ಬಗ್ಗೆ ಸ್ವತಃ ಪತ್ರಕರ್ತರೂ ಆಗಿರುವ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು ಹೀಗೆ. ಇಂದು ಮುಹೂರ್ತ ಚೆನ್ನಾಗಿತ್ತು. ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಮದುವೆಯಾಗಬೇಕೆಂದು ಶ್ರುತಿ ಬಯಸಿದ್ದರು. ಅವರ ಇಚ್ಛೆಯಂತೆ ನಮ್ಮಿಬ್ಬರ ಮದುವೆ ಇಲ್ಲಿ ನೆರವೇರಿತು ಎಂದಿದ್ದಾರೆ.
ತಾನು ವೃತ್ತಿಯಲ್ಲಿ ಪತ್ರಕರ್ತ, ಪ್ರವೃತ್ತಿಯಲ್ಲಿ ಸಿನಿಮಾ ಉದ್ಯಮಿ. 'ಲಂಕೇಶ್ ಪತ್ರಿಕೆ'ಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮಿಬ್ಬರದ್ದೂ ಬಹಳ ಹಳೆಯ ಗೆಳೆತನ. ಶ್ರುತಿ ಅವರ ಬಗ್ಗೆ ನನಗೆ ಪ್ರೀತಿ, ಗೌರವ ಎಲ್ಲವೂ ಇದೆ. ಆಕೆ ಒಬ್ಬ ಧೀಮಂತ ಮಹಿಳೆ, ಜಾಣೆ. ಇಂದು ಶ್ರುತಿ ಅವರ ಮಗಳ ಹುಟ್ಟುಹಬ್ಬ. ಇಂದೇ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ನಾವಿಬ್ಬರೂ ಬಯಸಿದ್ದೆವು. ಹಾಗಾಗಿ ಇಂದು ಸಪ್ತಪದಿ ತುಳಿದಿದ್ದೇವೆ. (ವಿಡಿಯೋ: ಶ್ರುತಿ ಮದುವೆ)
ನಮ್ಮಿಬ್ಬರದ್ದೂ ಪ್ರೇಮ ವಿವಾಹ. ಮದುವೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಿದ್ದೆವು. ಇಂದು ನಮ್ಮಿಬ್ಬರ ಬಾಂಧವ್ಯವನ್ನು ಮದುವೆ ಮೂಲಕ ಗಟ್ಟಿಗೊಳಿಸಿಕೊಂಡಿದ್ದೇವೆ. ನಮ್ಮಿಬ್ಬರ ಮದುವೆಗೆ ಎರಡೂ ಮನೆಗಳ ಕಡೆಯವರಿಂದ ಪರಸ್ಪರ ಒಪ್ಪಿಗೆ ಇದೆ.
ಇನ್ನು ಮುಂದೆಯೂ ಅವರ ಸಮಾಜಸೇವೆ ಮುಂದುವರಿಯಲಿದೆ. ಮದುವೆಗೆ ಯಾರನ್ನೂ ಆಹ್ವಾನಿಸಲಿರಲಿಲ್ಲ. ಶ್ರುತಿ ಅವರ ಆಶಯದ ಪ್ರಕಾರ ಸರಳ, ಸುಂದರವಾಗಿ ನಡೆಯಿತು. ಕೇವಲ ಇಪ್ಪತ್ತು ನಿಮಿಷದಲ್ಲಿ ಮದುವೆ ಮುಗಿಯಿತು. ತುಂಬಾ ಆತ್ಮೀಯರನ್ನು ಮಾತ್ರ ಆಹ್ವಾನಿಸಿದ್ದೆವು.
ತಮಗೂ ಇದು ಎರಡನೇ ಮದುವೆ. ಶ್ರುತಿ ಅವರ ಮಗಳು ಇನ್ನೂ ಚಿಕ್ಕಮಗು. ಮದುವೆ, ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವ ವಿವೇಚನಾಶಕ್ತಿ ಅವಳಿಗಿಲ್ಲ. ನಮ್ಮಿಬ್ಬರ ಮದುವೆಗೆ ಅವಳು ಪ್ರೀತಿಯ ನಿದರ್ಶನ ಎಂದಿದ್ದಾರೆ ಚಂದ್ರಶೇಖರ್. (ಏಜೆನ್ಸೀಸ್)


Click it and Unblock the Notifications











