ರಾಜ್ ಕುಮಾರ್ ಹೆಸರಲ್ಲಿ ತಾರಾ ಪ್ರಮಾಣ ವಚನ

ತಾವು ಹೊಸ ಜವಾಬ್ದಾರಿ ಸ್ವೀಕರಿಸುತ್ತಿರುವ ಬಗ್ಗೆ ತಾರಾ ಅವರು ಇಡೀ ಕನ್ನಡ ಚಿತ್ರರಂಗವನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದರು. ಈ ರೀತಿಯ ವ್ಯವಸ್ಥೆ ಮಾಡುವ ಮೂಲಕ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ವಿಧಾನ ಪರಿಷತ್ ಸಭಾಪತಿಗಳಾದ ಡಿ.ಎಚ್. ಶಂಕರಮೂರ್ತಿ ಪ್ರಮಾಣ ವಚನ ಬೋಧಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಂದ್ರಶೇಖರ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಚಿತ್ರ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಜಯಮಾಲಾ, ಸುಧಾರಾಣಿ, ರಮ್ಯಾ, ಸಿಹಿ ಕಹಿ ಚಂದ್ರು, ರಾಕ್ ಲೈನ್ ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.
ತಾರಾ ಅವರು ಇದುವರೆಗೂ 500ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಹಸೀನಾ' ಚಿತ್ರದಲ್ಲಿನ ತಮ್ಮ ಅಮೋಘ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯೂ ಅವರಿಗೆ ಸಿಕ್ಕಿದೆ. ಎರಡು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ 'ಹಸೀನಾ' ಚಿತ್ರ ತಾರಾ ಅವರನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿತು.
1984ರಲ್ಲೇ ಚಿತ್ರರಂಗಕ್ಕೆ ಅಡಿಯಿಟ್ಟರೂ 1986ರಲ್ಲಿ ಡಾ.ರಾಜ್ ಕುಮಾರ್ ಅವರೊಂದಿಗಿನ 'ಗುರಿ' ಚಿತ್ರ ಅವರ ವೃತ್ತಿ ಜೀವನದಲ್ಲಿ ಪ್ರಮುಖ ತಿರುವು ನೀಡಿತು. ಅದಾದ ಬಳಿಕ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ 'ಕಾನೂರು ಹೆಗ್ಗಡತಿ' ಚಿತ್ರ ತಾರಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ 'ನಾಯಗನ್' ಹಾಗೂ 'ಅಗ್ನಿನಕ್ಷತ್ರಂ' ಚಿತ್ರಗಳಲ್ಲೂ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಎಂಬತ್ತು, ತೊಂಬತ್ತರ ದಶಕದಲ್ಲಿ ತಾರಾ ಅವರು ಡಾ.ರಾಜ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಶಿಕುಮಾರ್, ಟೈಗರ್ ಪ್ರಭಾಕರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮುರಳಿ, ಕಾರ್ತಿಕ್, ಸುನಿಲ್, ದೇವರಾಜ್ ಮುಂತಾದ ತಾರೆಗಳ ಜೊತೆ ಅಭಿನಯಿಸಿದ್ದಾರೆ.
'ಡೆಡ್ಲಿ ಸೋಮ' ಚಿತ್ರದಲ್ಲಿನ ಹಾಗೂ 'ಸೈನೇಡ್ ದ ಇನ್ ಸೈಡ್ ಸ್ಟೋರಿ' ಚಿತ್ರಗಳಲ್ಲಿನ ತಾರಾ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. 'ಅಚಲ' ಎಂಬ ಚಿತ್ರವನ್ನೂ ನಿರ್ಮಿಸಿರುವ ತಾರಾ ಅವರು ಖ್ಯಾತ ಛಾಯಾಗ್ರಾಹಕ ವೇಣು ಅವರ ಕೈಹಿಡಿಯುವ ಮೂಲಕ 2005ರಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











