ವಿಜಯಲಕ್ಷ್ಮಿಗೆ ಕೊರೊನಾ: 'ನಾನು ಬದುಕ್ತಿನಾ ಗೊತ್ತಿಲ್ಲ, ಸಹಾಯ ಮಾಡಿ'
ಹಿರಿಯ ನಟಿ ವಿಜಯಲಕ್ಷ್ಮಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ವಿಚಾರ ತಿಳಿದು ಬಂದಿದೆ. ಖುದ್ದು ವಿಜಯಲಕ್ಷ್ಮಿ ಅವರೇ ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ, 'ನನಗೆ ಕೊರೊನಾ ಸೋಂಕು ತಗುಲಿದೆ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದೇನೆ. ಯಾರೊಬ್ಬರು ನನಗೆ ಸಹಾಯ ಮಾಡ್ತಿಲ್ಲ' ಎಂದು ಕಣ್ಣೀರು ಹಾಕಿದ್ದಾರೆ.
'ನನಗೆ ಬಹಳ ದಿನಗಳಿಂದಲೂ ಕಷ್ಟ ಇದೆ, ಸಹಾಯ ಮಾಡಿ ಎಂದು ಎಷ್ಟೇ ಕೇಳಿಕೊಂಡರೂ ಯಾರೂ ಸಹಾಯ ಮಾಡ್ತಿಲ್ಲ. ನನಗೆ ಬೆಂಗಳೂರಿನಲ್ಲಿ ಮನೆ ಇಲ್ಲ ಎಂದು ಹೇಳುತ್ತಲೇ ಬಂದಿದ್ದೇನೆ. ಈಗ ನನಗೆ ಕೊರೊನಾ ಬಂದಿದೆ. ಐಸೋಲೇಟ್ ಆಗಿದ್ದೇನೆ. ಇಂತಹ ಸಮಯದಲ್ಲಿ ನನ್ನ ಸಹೋದರಿ ಮತ್ತು ತಾಯಿಯನ್ನು ಎಲ್ಲಿಗೆ ಕಳುಹಿಸಲಿ ಎಂದು ಗೊತ್ತಾಗುತ್ತಿಲ್ಲ' ಎಂದು ಅಳಲು ತೋಡಿಕೊಂಡಿದ್ದಾರೆ.
'ಕಲಾವಿದರ ಸಂಘದವರ ಬಳಿ ಎಷ್ಟೇ ಸಹಾಯ ಮಾಡಿದ್ರು ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ. ಒಬ್ಬರಿಂದ ಒಬ್ಬರಿಗೆ ಕರೆ ಮಾಡಿ ಎಂದು ಹೇಳುತ್ತಿದ್ದಾರೆ ಹೊರತು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

'ಈಗಿನ ಪರಿಸ್ಥಿತಿಯಲ್ಲಿ ಯಾರಾದರೂ ಅಭಿಮಾನಿಗಳು ನನ್ನ ಬಗ್ಗೆ ಕಾಳಜಿ ತೋರಿ ಸಹಾಯ ಮಾಡಿ, ನಿಮ್ಮ ಮನೆ ಯಾವುದಾದರೂ ಖಾಲಿ ಇದ್ದಲ್ಲಿ ನಮ್ಮ ತಾಯಿ ಮತ್ತು ಅಕ್ಕ ಉಳಿದುಕೊಳ್ಳಲು ನೆರವು ನೀಡಿ' ಎಂದು ಮನವಿ ಮಾಡಿದ್ದಾರೆ. ಬೆಳಗ್ಗೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದ ವಿಜಯಲಕ್ಷ್ಮಿ ಮಧ್ಯಾಹ್ನದ ವೇಳೆ ಇನ್ನೊಂದು ವಿಡಿಯೋ ಹಂಚಿಕೊಂಡು ಚಿತ್ರರಂಗದ ಕಲಾವಿದರ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ್ದಾರೆ.
'ಕಳೆದ ಐದು ದಿನಗಳಿಂದಲೂ ನಾನು ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹೆಚ್ಚು ಜ್ವರ ಇತ್ತು. ಊಟ ಸಹ ತಿನ್ನಲು ಆಗಿಲ್ಲ. ಈಗ ಕೋವಿಡ್ ಸೆಂಟರ್ಗೆ ಸ್ಥಳಾಂತರವಾಗಿ ಎಂದು ಹೇಳ್ತಿದ್ದಾರೆ. ನಿಜವಾಗಲೂ ಕಲಾವಿದರ ಸಂಘದಲ್ಲಿ ಯಾರೊ ಸಹಾಯ ಮಾಡ್ತಿಲ್ಲ. ಒಂದು ವೇಳೆ ನನಗೆ ಏನಾದರೂ ಹೆಚ್ಚು ಕಡಿಮೆ ಆದರು, ಎಲ್ಲರೂ ಸೇರಿ ನನ್ನ ಕೊಂದರು ಎಂದು ತಿಳಿದುಕೊಳ್ಳಿ' ಎಂದು ಅಸಮಾಧಾನ ಹೊರಹಾಕಿದರು.
'ಒಬ್ಬ ನಟಿಗೆ ಇದು ತುಂಬಾ ದೊಡ್ಡ ಅನ್ಯಾಯವಾಗಿದೆ. ದರ್ಶನ್, ಯಶ್ ಅವರನ್ನು ಮಾತನಾಡಿಸಿ ಎಂದು ಎಷ್ಟೇ ಕೇಳಿದರೂ, ಯಾರೂ ಸ್ಪಂದಿಸುತ್ತಿಲ್ಲ. ನನ್ನನ್ನು ಬಲವಂತವಾಗಿ ಸಾಯಿಸುತ್ತಿದ್ದಾರೆ, ಎಲ್ಲರೂ ಸೇರಿ ನನ್ನ ಕೊಲೆ ಮಾಡ್ತಿದ್ದಾರೆ' ಎಂದು ವಿಜಯಲಕ್ಷ್ಮಿ ದೂರಿದರು.

ಹಲವು ತಿಂಗಳಿನಿಂದಲೂ ವಿಜಯಲಕ್ಷ್ಮಿ ಅವರು ಇದೇ ರೀತಿ ಫೇಸ್ಬುಕ್ನಲ್ಲಿ ವಿಡಿಯೋಗಳನ್ನು ಮಾಡಿ ಸಹಾಯ ಕೇಳುತ್ತಲೇ ಇದ್ದಾರೆ. ಶಿವರಾಜ್ ಕುಮಾರ್, ದರ್ಶನ್, ಯಶ್, ಸುದೀಪ್, ರಾಘಣ್ಣ, ಸುಮಲತಾ ಮೇಡಂ ನನ್ನ ಕಷ್ಟ ಕೇಳಿ ಎಂದು ಅಂಗಲಾಚಿದ್ದರು. ಜುಲೈ ತಿಂಗಳಲ್ಲಿ ಸುಮಲತಾ ಅವರನ್ನು ಉದ್ದೇಶಿಸಿ ವಿಡಿಯೋ ಮಾಡಿ ಆರ್ಥಿಕ ಸಹಾಯ ಮಾಡುವಂತೆ ಕೇಳಿದ್ದರು. ತನ್ನ ಸಹೋದರಿ ವಿಚಾರದಲ್ಲಿ ಹಿರಿಯ ನಟಿ ಜಯಪ್ರದ ಅನ್ಯಾಯ ಮಾಡ್ತಿದ್ದು, ಈ ಬಗ್ಗೆ ಸುಮಲತಾ ಅವರು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದರು.
"ಸುಮಲತಾ ಅಂಬರೀಶ್ ಅವರನ್ನು ಸಂಪರ್ಕ ಮಾಡಿ ಉಷಾ ಅವರ ಈ ಪರಿಸ್ಥಿತಿ ತಿಳಿಸಿ, ಜಯಪ್ರದಾ ಏನೆಲ್ಲ ಹಿಂಸೆ ಕೊಟ್ಟಿದ್ದಾರೆ ಎಲ್ಲಾ ತಿಳಿಸಬೇಕು. ಅಂಬರೀಶ್ ಅವರನ್ನು ಸಂಪರ್ಕ ಮಾಡಲು ನನ್ನ ಬಳಿ ಆಗಿಲ್ಲ. ಆದರೀಗ ಸುಮಲತಾ ಅಂಬರೀಶ್ ಅವರಿಗೆ ಈ ವಿಡಿಯೋ ತಲುಪಿಸಿ. ನಾನು ಸಂಪರ್ಕ ಮಾಡಲು ಪ್ರಯತ್ನ ಪಟ್ಟರೆ ಖಂಡಿತ ಯಾರು ಬಿಡಲ್ಲ. ಸುಮಲತಾ ಅವರನ್ನು ಭೇಟಿ ಮಾಡಿಲಿಕ್ಕೆ ಅವಕಾಶ ಮಾಡಿಕೊಡಿ. ಸುಮಲತಾ ಮೇಡಮ್, ಜಯಪ್ರದಾ ಬಳಿ ಮಾತನಾಡಿದ್ರೆ ಖಂಡಿತ ಆಗುತ್ತೆ. ಆ ನಂಬಿಕೆಯಲ್ಲಿ ಈ ವಿಡಿಯೋ ಮಾಡಿದ್ದೀನಿ" ಎಂದು ವಿಜಯಲಕ್ಷ್ಮಿ ಮನವಿ ಮಾಡಿದ್ದರು.


Click it and Unblock the Notifications











