ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಉದ್ಯಮಿ ಮೊಮ್ಮಗನಿಗೆ ಶಿಕ್ಷೆ ಆಗಲೇಬೇಕೆಂದು ಆಗ್ರಹಿಸಿದ ರಮ್ಯಾ, ಐಂದ್ರಿಯಾ ರೇ
ಜನವರಿ 26ರ ಸಂಜೆ 6.15ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಕಾರು ಹತ್ತಿಸಿದ್ದರು. ಇದನ್ನು ಉದ್ದೇಶಪೂರ್ವಕವಾಗಿತೇ ಹತ್ತಿಸಲಾಗಿದೆ ಎಂದು ಆರೋಪ ಎದುರಿಸುತ್ತಿದ್ದು, ಜಯನಗರ 1ನೇ ಬ್ಲಾಕ್ನ ನಿವಾಸಿ ಎಂ ಎಸ್ ಭದ್ರಿಪ್ರಸಾದ್ ಎಂಬುವವರು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಆದಿಕೇಶವುಲು ಮೊಮ್ಮಗ ಆದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೂಕಪ್ರಾಣಿಗಳ ಮೇಲೆ ಕಾರು ಹತ್ತಿಸಿದ ಆದಿಕೇಶವುಲು ನಾಯ್ಡು ಮೊಮ್ಮಗನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಅಂತ ಮನವಿ ಮಾಡಿದ್ದಾರೆ. ಇದೇ ವೇಳೆ ಸ್ಯಾಂಡಲ್ವುಡ್ ನಟಿಯರಾದ ರಮ್ಯಾ ಹಾಗೂ ಐಂದ್ರಿತಾ ರೇ ಕೂಡ ಶಿಕ್ಷೆ ಆಗಲೇಬೇಕು ಅಂತ ಟ್ವೀಟ್ ಮೂಲಕ ಆಗ್ರಹಿಸುತ್ತಿದ್ದಾರೆ.

ಸರ್ಕಾರ ಕ್ರಮ ಕೈಗೊಳ್ಳುತ್ತಾ ಎಂದು ರಮ್ಯಾ ಪ್ರಶ್ನೆ
ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಪ್ರಕರಣ ರಮ್ಯಾ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ತಪ್ಪಿಸ್ಥರಿಗೆ ಶಿಕ್ಷೆ ಆಗಲೇಬೇಕು ಅಂತ ಸಚಿವ ಆರ್. ಅಶೋಕ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. "ಈ ವಿಡಿಯೋ ನೋಡಿದಾಗ, ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಸರ್ಕಾರ ತಪ್ಪಿಸ್ಥನ ವಿರುದ್ಧ ಕ್ರಮ ಕೈಗೊಳ್ಳುತ್ತಾ, ಇಲ್ಲ ಒತ್ತಡಕ್ಕೆ ಮಣಿಯುತ್ತಾ ಅನ್ನುವುದನ್ನು ಕಾದು ನೋಡೋಣ." ಎಂದು ರಮ್ಯಾ ಟ್ವೀಟ್ ಮಾಡಿದ್ದು, ಬಸವರಾಜ ಬೊಮ್ಮಾಯಿ ಹಾಗೂ ಆರ್ ಆಶೋಕ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಕಿಡಿಕಾರಿದ ನಟಿ ಐಂದ್ರಿತಾ ರೇ
ಮೋಹಕತಾರೆ ರಮ್ಯಾರಂತೆಯೇ ನಟಿ ಐಂದ್ರಿತಾ ರೇ ಕೂಡ ಕಿಡಿ ಕಾರಿದ್ದಾರೆ. " ನ್ಯೂಸ್ ಚಾನಲ್ಗಳು ಯಾಕೆ ವರದಿ ಇದರ ಬಗ್ಗೆ ವರದಿ ಮಾಡುತ್ತಿಲ್ಲ. ಪದೇ ಪದೆ ತಪ್ಪು ಮಾಡುತ್ತಿರುವವರ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ." ಎಂದು ಐಂದ್ರಿತಾ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತೇಜಸ್ವಿ ಸೂರ್ಯ, ಮನೇಕಾ ಗಾಂಧಿಯವರಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಆದಿಕೇಶವುಲು ಮೊಮ್ಮಗನ ಪ್ರಕರಣವೇನು?
ಜನವರಿ 26ರ ಸಂಜೆ 6.15ರ ಸುಮಾರಿಗೆ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಬೀದಿಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ್ದ. ಜಯನಗರ 1ನೇ ಬ್ಲಾಕ್ನ 10ನೇ 'ಬಿ' ಮುಖ್ಯರಸ್ತೆಯ ಮನೆ ಮುಂಭಾಗದ ಫುಟ್ಪಾತ್ ಮೇಲೆ ಬೀದಿ ನಾಯಿ ಮಲಗಿತ್ತು. ಈ ವೇಳೆ ಆಡಿ ಕಾರಿನಲ್ಲಿ ಬಂದ ಆದಿ ನಾಯಿ ಮೇಲೆ ಕಾರು ಹತ್ತಿಸಿದ್ದಾನೆ. ವಿಡಿಯೋದಲ್ಲಿ ಇದು ಉದ್ದೇಶಪೂರ್ವಕವಾಗಿಯೇ ನಾಯಿ ಮೇಲೆ ಕಾರು ಹತ್ತಿಸುತ್ತಿರುವಂತೆ ಕಂಡು ಬರುತ್ತಿದೆ.

ಆದಿಕೇಶವುಲು ಮೊಮ್ಮಗ ಎಸ್ಕೇಪ್
ಆದಿಕೇಶವುಲು ನಾಯ್ಡು ಮೊಮ್ಮಗ ಆದಿಯನ್ನು ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಕಿಕೊಂಡು ಮನೆಗೆ ಹೋಗಿದ್ದರು. ಆದರೆ ಆದಿ ಮನೆಯಲ್ಲಿ ಇರಲಿಲ್ಲ. ಈ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆದಿ ಠಾಣೆಗೆ ಹಾಜರಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದರು. ಹೀಗಾಗಿ ಕೊರೊನಾದಿಂದ ಗುಣಮುಖನಾದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್ ಅನ್ನು ಪೊಲೀಸರು ನೀಡಿದ್ದಾರೆ.


Click it and Unblock the Notifications











