ಪ್ರಜ್ವಲ್ ದೇವರಾಜ್ ಜೊತೆ ಐಂದ್ರಿತಾ ರೋಮ್ಯಾನ್ಸ್
ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ ಮತ್ತೆ ಒಂದಾಗಿದೆ. ಎರಡು ವರ್ಷಗಳ ಸುದೀರ್ಘ ಗ್ಯಾಪ್ ಬಳಿಕ ಪ್ರಜ್ವಲ್ ದೇವರಾಜ್ ಹಾಗೂ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಮತ್ತೆ ಒಂದಾಗಿ ಅಭಿನಯಿಸಲು ಸಿದ್ಧವಾಗಿದ್ದಾರೆ. 'ನನ್ನವನು' ಚಿತ್ರದ ಬಳಿಕ ಈ ಹಿಟ್ ಫೇರ್ ಮತ್ತೆ ಒಂದಾಗುತ್ತಿರುವುದು ವಿಶೇಷ.
ಇವರಿಬ್ಬರು ಅಭಿನಯಿಸಲಿರುವ ಹೊಸ ಚಿತ್ರಕ್ಕೆ 'ಜಿದ್ದಿ' ಎಂದು ಹೆಸರಿಡಲಾಗಿದೆ. ಅನಂತರಾಜು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಮಲೆಯಾಳಂನ 'ಪುತಿಯ ಮುಖಂ' ಚಿತ್ರದ ರೀಮೇಕ್. ಪೃಥ್ವಿರಾಜ್ ಹಾಗೂ ಪ್ರಿಯಾ ಮೆನನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು.
ರೀಮೇಕ್ ಚಿತ್ರಗಳೆಂದರೆ ಸಾಕಾಗಿ ಹೋಗಿದೆ ಎಂದಿದ್ದ ಐಂದ್ರಿತಾ ಈಗ ಪುನಃ ರೀಮೇಕ್ ಅಪ್ಪಿರುವುದು ವಿಶೇಷ. ರೀಮೇಕ್ ಆದರೂ ಪಾತ್ರದಲ್ಲಿ ಧಂ ಇದೆ. ಹಾಗಾಗಿ 'ಜಿದ್ದಿ' ಚಿತ್ರಕ್ಕೆ ಸಹಿಹಾಕಿದ್ದೇನೆ ಎಂದಿದ್ದಾರೆ. ಚಿತ್ರದ ಕತೆ ಇಂಟರೆಸ್ಟಿಂಗ್ ಆಗಿದೆ. ಅನಂತರಾಜು ನನ್ನ ಪಾತ್ರದ ಮಹತ್ವವನ್ನು ಹೇಳಿದರು. ನನಗೂ ಓಕೆ ಎನ್ನಿಸಿತು.
ಪಾತ್ರದ ಗಟ್ಟಿತನವನ್ನು ಗಮನದಲ್ಲಿಟ್ಟುಕೊಂಡು 'ಜಿದ್ದಿ' ಚಿತ್ರವನ್ನು ಒಪ್ಪಿದೆ. ಪಕ್ಕಾ ಆಕ್ಷನ್ ಪ್ರಧಾನ ಚಿತ್ರ. ಚಿತ್ರದಲ್ಲಿ ನಾನು ಕಾಲೇಜು ಕನ್ಯೆಯಾಗಿ ಕಾಣಿಸುತ್ತಿದ್ದೇನೆ. ಚಿತ್ರ ರೀಮೇಕ್ ಆದರೂ ನನ್ನದೇ ಆದ ಶೈಲಿಯಲ್ಲಿ ಅಭಿನಯಿಸುತ್ತೇನೆ. ಇದಕ್ಕಾಗಿ ಮೂಲಚಿತ್ರವನ್ನೂ ಕೂಡ ನೋಡುವ ತಂಟೆಗೆ ನಾನು ಹೋಗಿಲ್ಲ ಎಂದಿದ್ದಾರೆ.
ನನ್ನ ಚೊಚ್ಚಲ ಚಿತ್ರ ಪ್ರಜ್ವಲ್ ದೇವರಾಜ್ ಜೊತೆಗಿನ 'ಮೆರವಣಿಗೆ'. ಆಗ ಪ್ರಜ್ವಲ್ ನನಗೆ ಸಿಕ್ಕಾಪಟ್ಟೆ ಸಹಾಯ ಮಾಡಿದರು. ಅದಾದ ಬಳಿಕ 'ನನ್ನವನು' ಚಿತ್ರದಲ್ಲಿ ಮತ್ತೆ ಒಟ್ಟಿಗೆ ಅಭಿನಯಿಸಿದೆವು. ನಮ್ಮಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಎಲ್ಲಡೆಯಿಂದ ಮೆಚ್ಚುಗೆ ಮಾತುಗಳು ಕೇಳಿಬಂದವು. ಆ ನಂತರ ನಮ್ಮಿಬ್ಬರಿಗೂ ಒಂದೇ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಗಲಿಲ್ಲ. ಈಗ 'ಜಿದ್ದಿ' ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದೇವೆ.
ಇನ್ನು 'ಜಿದ್ದಿ' ಚಿತ್ರದ ವಿಷಯಕ್ಕೆ ಬರುವುದಾದರೆ, ಅಮರ್ ಚಂದ್ ಜೈನ್ ಮತ್ತು ವಿಜಯ್ ಸುರಾನಾ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರವಿದು. ಆಗಸ್ಟ್ ಮೂರರಿಂದ ರೆಗ್ಯುಲರ್ ಶೂಟಿಂಗ್ ಆರಂಭ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ಹಾಡುಗಳ ಚಿತ್ರೀಕರಣ ಬೆಂಗಳೂರಿನಿಂದ ಹೊರಗಡೆ ನಡೆಯಲಿದೆ.
'ಕಿಲಾಡಿ ಕಿಟ್ಟಿ'ಯ ಸೋಲಿನ ನಂತರ ನಿರ್ದೇಶಕ ಅನಂತ ರಾಜು ಕೈಗೆತ್ತಿಕೊಂಡಿರುವ ಚಿತ್ರವಿದು. ಇಲ್ಲಿ ಅವರಿಗೆ ಗೆಲುವು ಅನಿವಾರ್ಯವಾಗಿದೆ. ಚಿತ್ರದ ತಾಂತ್ರಿಕ ವರ್ಗದಲ್ಲಿ ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ಇದ್ದಾರೆ. ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದಾರೆ. ತಾರಾಗಣದ ಬಗ್ಗೆ ಇನ್ನೂ ಅಂತಿಮ ಆಗಿಲ್ಲವಾದರೂ, ನಿರಂಜನಬಾಬು ಅವರ ಛಾಯಾಗ್ರಹಣ, ಬಾಬುಖಾನ್ ಕಲಾ ನಿರ್ದೇಶನ, ರವಿವರ್ಮರ ಸಾಹಸ ಚಿತ್ರಕ್ಕಿದೆ. (ಏಜೆನ್ಸೀಸ್)


Click it and Unblock the Notifications











