ಹೆದರಿ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ: ಅಸಲಿ ಕಾರಣ ಹೇಳಿದ ಅಜಯ್ ರಾವ್
'ಲವ್ ಯು ರಚ್ಚು' ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಅವಘಡಕ್ಕೆ ಸಂಬಂಧಿಸಿದಂತೆ ನಟ ಅಜಯ್ ರಾವ್ ಇಂದು ಬಿಡದಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿಚಾರಣೆ ಎದುರಿಸಿದರು.
ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬಳಿಕ ಅಜಯ್ ರಾವ್ ರಾಮನಗರ ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅಜಯ್ ರಾವ್ಗೆ ಬಂಧನದ ಭೀತಿ ಇರುವ ಕಾರಣ ಹೀಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ ಎನ್ನಲಾಗಿತ್ತು.
ಇಂದು ಬಿಡದಿ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಮೋಹನ್ ಎದುರು ವಿಚಾರಣೆಗೆ ಹಾಜರಾಗಿ ನಂತರ ಬಂದು ಮಾಧ್ಯಮಗಳ ಬಳಿ ಮಾತನಾಡಿದ ನಟ ಅಜಯ್ ರಾವ್, ''ನಾನು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ'' ಎಂದರು. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಏಕೆ? ಎಂಬುದರ ಬಗ್ಗೆ ಮಾಹಿತಿ ನೀಡಿದರು.
''ಯಾರೊ ಕೆಲವು ಮಾಧ್ಯದವರು ನಾನು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಬರೆದಿದ್ದಾರೆ. ಆದರೆ ಅದು ಸುಳ್ಳು. ನಾನು ಕೆಲವರಿಗೆ ಭರವಸೆ ನೀಡಬೇಕಿತ್ತು, ನನ್ನ ಮೇಲೆ ಬಂಡವಾಳ ಹೂಡಿದವರು ಆತಂಕದಲ್ಲಿದ್ದರು ಅವರಿಗೆ ಭರವಸೆ ನೀಡಬೇಕಿತ್ತು ಹಾಗಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದೆ'' ಎಂದಿದ್ದಾರೆ.

ನನಗೆ ಭಯವಿಲ್ಲ: ಅಜಯ್ ರಾವ್
'ನಾನು ಹತ್ತನೇ ತರಗತಿ ಅಷ್ಟೇ ಓದಿರುವುದು ಪಿಯುಸಿ ಸಹ ಮುಗಿಸಿಲ್ಲ. ಹಾಗಿದ್ದಾಗ್ಯೂ ಬೆಂಗಳೂರಿನಂತಹಾ ಬೆಂಗಳೂರಿಗೆ ಬಂದು ಈ ವರೆಗೆ ಬೆಳೆದಿದ್ದೇನೆ. ನನಗೆ ಭಯ ಎಂಬುದು ಇಲ್ಲ. ಹಾಗೊಂದು ವೇಳೆ ಭಯ ಇದ್ದಿದ್ದರೆ ಬೆಂಗಳೂರಿಗೆ ಬಂದು ಸಾಧನೆ ಮಾಡುತ್ತಿರಲಿಲ್ಲ. ಹೆದರಿಕೊಂಡರೇನೆ ಜಾಮೀನಿಗೆ ಅರ್ಜಿ ಸಲ್ಲಿಸಬೇಕು ಎಂದೇನೂ ಇಲ್ಲ. ಜವಾಬ್ದಾರಿಯಿಂದಲೂ ಸಲ್ಲಿಸಬಹುದು. ನಾನು ಹೆದರಿಕೊಂಡು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಬಿಂಬಿಸಬೇಡಿ'' ಎಂದಿದ್ದಾರೆ.

''ನನ್ನ ಮೇಲೆ ಕೋಟ್ಯಂತರ ಬಂಡವಾಳವನ್ನು ನಿರ್ಮಾಪಕರು ಹೂಡಿದ್ದಾರೆ''
''ನನ್ನ ಮೇಲೆ ಕೋಟ್ಯಂತರ ಬಂಡವಾಳವನ್ನು ವಿವಿಧ ನಿರ್ಮಾಪಕರು ಮಾಡಿದ್ದಾರೆ. ನಾಳೆ 'ಕೃಷ್ಣಾ ಟಾಕೀಸ್' ಸಿನಿಮಾದ ಮರು ಬಿಡುಗಡೆ ಇದೆ. ಮತ್ತೊಂದು ಸಿನಿಮಾ 'ಶೋಕಿವಾಲ' ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ, ಅದರ ಪ್ರಚಾರ ಕಾರ್ಯದಲ್ಲಿ ನಾನು ತೊಡಗಿಕೊಳ್ಳಬೇಕಿದೆ. 'ಲವ್ ಯು ರಚ್ಚು' ಸಿನಿಮಾದ ಬಳಿಕ ಇನ್ನೊಂದು ಸಿನಿಮಾದಲ್ಲಿ ನಟಿಸಬೇಕಿದೆ. ಎರಡು ವರ್ಷದ ಹಿಂದೆಯೇ ಆ ಸಿನಿಮಾಕ್ಕೆ ಕಮಿಟ್ ಆಗಿದ್ದೆ. ಅದೊಂದು ದೊಡ್ಡ ಬಜೆಟ್ನ ಸಿನಿಮಾ ಅದರ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ಹೀಗಿದ್ದಾಗ, ಯಾರೊ ಮಾನವ ಹಕ್ಕುಗಳವರು ಅಜಯ್ ರಾವ್ನ ಬಂಧಿಸಿ, ರಚಿತಾ ರಾಮ್ ಅನ್ನು ಬಂಧಿಸಿ ಎಂದೆಲ್ಲ ಪತ್ರಗಳನ್ನು ಬರೆದಿದ್ದಾರೆ. ಹಾಗಾಗಿ ನನ್ನ ಮೇಲೆ ಬಂಡವಾಳ ಹೂಡಿದವರು ಆತಂಕಕ್ಕೆ ಒಳಗಾಗಿರುತ್ತಾರೆ'' ಎಂದಿದ್ದಾರೆ ಅಜಯ್ ರಾವ್.

''ನಿರ್ಮಾಪಕತೆ ಭರವಸೆ ಮೂಡಿಸಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದೆ''
''ಆ ನಿರ್ಮಾಪಕರುಗಳು ಪ್ರಚಾರಕ್ಕೆ ಸಿದ್ಧತೆ ನಡೆಸಿರುತ್ತಾರೆ. ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿರುತ್ತಾರೆ. ಬೇರೆ ನಟರು ಡೇಟ್ಸ್ ಕೊಟ್ಟಿರುತ್ತಾರೆ. ಇಂಥಹಾ ಸಮಯದಲ್ಲಿ ಹೀಗಾದರೆ ಅವರಿಗೆ ಭಯವಾಗುತ್ತದೆ. ನಮ್ಮ ಆಫೀಸ್ ಬಳಿ ಬಂದು ಅವರು ನಮ್ಮನ್ನು ಕೇಳುತ್ತಾರೆ. ಅವರಿಗೆ ಕೇವಲ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಏನೇ ಆದರೂ ಚಿತ್ರೀಕರಣ ಬರುತ್ತೇನೆಂದು. ಹಾಗಾಗಿ ಅವರಿಗೆ ಕಾನೂನು ಬದ್ಧವಾಗಿ ಭರವಸೆ ಮೂಡಿಸುವ ಉದ್ದೇಶದಿಂದ ನಾನು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೆ'' ಎಂದಿದ್ದಾರೆ ಅಜಯ್ ರಾವ್.

ಎಲ್ಲ ಆರೋಪಿಗಳಿಗೆ ಜಾಮೀನು ನೀಡಿದ ನ್ಯಾಯಾಲಯ
ಈಗಾಲಗೇ ಅಜಯ್ ರಾವ್ ಬಿಡದಿ ಪೊಲಿಸರ ಬಳಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರಿಗೆ ರಾಮನಗರ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅಜಯ್ ರಾವ್ಗೆ ಮಾತ್ರವೇ ಅಲ್ಲದೆ ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ 'ಲವ್ ಯು ರಚ್ಚು' ಸಿನಿಮಾದ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್, ಕ್ರೇನ್ ಆಪರೇಟರ್ ಮಹದೇವಯ್ಯ, ಮ್ಯಾನೇಜರ್ ಫರ್ನಾಂಡೀಸ್ ಅವರುಗಳಿಗೂ ಜಾಮೀನು ಸಿಕ್ಕಿದೆ. ತಲೆ ಮರೆಸಿಕೊಂಡಿದ್ದ ನಿರ್ಮಾಪಕ ಗುರು ದೇಶಪಾಂಡೆಗೂ ಜಾಮೀನು ದೊರೆತಿದೆ. ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದ ನಾಲ್ವರು ಆರೋಪಿಗಳು ನಾಳೆ ಬಿಡುಗಡೆ ಆಗಲಿದ್ದಾರೆ.


Click it and Unblock the Notifications











