ಮೈಸೂರಲ್ಲಿ ಠಿಕಾಣಿ ಹೂಡಿದ ಟಾಲಿವುಡ್ 'ಸೋಗ್ಗಾಡು'
ತೆಲುಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಈಗ ಮೈಸೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಅವರ ಹೊಸ ಚಿತ್ರ 'ಸೋಗ್ಗಾಡೇ ಚಿನ್ನಿ ನಾಯನ' ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಇದೊಂದು ಪಕ್ಕಾ ಎಂಟರ್ ಟೇನರ್ ಆಗಿದ್ದು ಕಳೆದ ಕೆಲವು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ.
ರಾಜಮಂಡ್ರಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡ 'ಸೋಗ್ಗಾಡು' ಚಿತ್ರ ಇದೀಗ ಮೈಸೂರಿನ ಬಳಿ ಇರುವ 1500 ವರ್ಷಗಳಷ್ಟು ಹಳೆಯ ವಿಷ್ಣು ದೇವಾಲಯದಲ್ಲಿ ಚಿತ್ರೀಕರಣ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಕಲ್ಯಾಣ್ ಕೃಷ್ಣ ಎಂಬುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಅಕ್ಕಿನೇನಿ ನಾಗೇಶ್ವರರಾವ್ ಅವರ ಜನಪ್ರಿಯ ಚಿತ್ರಗಳಲ್ಲಿ ಒಂದಾದ 'ದಸರಾ ಬುಲ್ಲೋಡು' ಚಿತ್ರದ ಒಂದು ಹಾಡು 'ಸೋಗ್ಗಾಡೇ ಚಿನ್ನಿ ನಾಯನ'. ಈ ಹಾಡಿನ ಸಾಲನ್ನೇ ಈಗ ಚಿತ್ರದ ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ ಅವರ ಪುತ್ರ ನಾಗಾರ್ಜುನ.
ಅಕ್ಕಿನೇನಿ ನಾಗಾರ್ಜುನ ಹಾಗೂ ಇಡೀ ಚಿತ್ರತಂಡ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಮಾರ್ಚ್ 15ರ ತನಕ ಚಿತ್ರತಂಡ ಮೈಸೂರಿನಲ್ಲೇ ಉಳಿಯಲಿದೆ. ನಾಗಾರ್ಜುನ ಜೊತೆಗೆ ಚಿತ್ರದ ನಾಯಕಿ ರಮ್ಯಾ ಕೃಷ್ಣ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ನಾಗಾರ್ಜುನ ಅವರ ಹೋಂ ಬ್ಯಾನರ್ ಅನ್ನಪೂರ್ಣ ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ರಮ್ಯಾ ಕೃಷ್ಣ ಜೊತೆಗೆ ಲಾವಣ್ಯ ತ್ರಿಪಾಟಿ ಅವರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಈ ಚಿತ್ರದಲ್ಲಿ ನಾಗಾರ್ಜುನ ಅವರದು ದ್ವಿಪಾತ್ರಾಭಿನಯ. ಅಜ್ಜ ಮತ್ತು ಮೊಮ್ಮಗನಾಗಿ ಅವರು ಕಾಣಿಸಲಿದ್ದಾರೆ.


Click it and Unblock the Notifications











